ಯಶ್ ‘ಮದುವೆ’ಯಿಂದ ನಿರ್ದೇಶನ ತನಕ ಎ.ಜೆ. ಶೆಟ್ಟಿ ಪಯಣ!
ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಹೆಸರು ಮಾಡುತ್ತಿರುವವರು ಎ.ಜೆ. ಶೆಟ್ಟಿ. ಇದೀಗ ಮೊದಲ ಬಾರಿಗೆ ಆಲ್ಬಮ್ ಹಾಡೊಂದನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದಾರೆ. ಈ ಕರಾವಳಿಯ ಪ್ರತಿಭೆಯೊಡನೆ ನಡೆಸಿದ ಮಾತುಕತೆ ಇದು.
► ಚಿತ್ರರಂಗಕ್ಕೆ ನಿಮ್ಮ ಪ್ರವೇಶ ಹೇಗಾಯಿತು?
ಎ.ಜೆ. ಶೆಟ್ಟಿ: ಮದುವೆ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದೆ. ಯಶ್ ಅವರ ನಿಶ್ಚಿತಾರ್ಥ ಮತ್ತು ಮದುವೆಯ ವೀಡಿಯೊ ಚಿತ್ರೀಕರಣ ಮಾಡಿದ್ದೆ. ಆ ಸಂದರ್ಭದಲ್ಲಿ ಛಾಯಾಗ್ರಾಹಕ ಭುವನ್ ಪರಿಚಯವಾದರು. ಹಾಗೆ ನಾನು ಭುವನ್ ಅವರಿಗೆ ಕೆ.ಜಿ.ಎಫ್.ನಲ್ಲಿ ಸಹಾಯಕ ಕ್ಯಾಮರಾಮ್ಯಾನ್ ಆಗಿದ್ದೆ. 15 ದಿನಗಳ ಬಳಿಕ ಎ.ಪಿ. ಅರ್ಜುನ್ ಅವರ ‘ಕಿಸ್’ ಸಿನೆಮಾ ಆಫರ್ ಬಂತು. ಭುವನ್ ಸರ್ ರೆಫರ್ ಮಾಡಿದ ಕಾರಣ ನಾನು ‘ಕಿಸ್’ ಛಾಯಾಗ್ರಾಹಕನಾದೆ. ಬಳಿಕ ಬಘೀರ, ಕಬ್ಜ ಚಿತ್ರಗಳಿಗೂ ನಾನೇ ಛಾಯಾಗ್ರಾಹಕನಾದೆ.
► ಛಾಯಾಗ್ರಾಹಕರಾದ ನಿಮಗೆ ನಿರ್ದೇಶನದ ಬಯಕೆ ಬಂದಿದ್ದು ಹೇಗೆ?
ಎ.ಜೆ. ಶೆಟ್ಟಿ: ಚಿತ್ರರಂಗದಲ್ಲಿ ನನ್ನ ಉದ್ದೇಶವೇ ನಿರ್ದೇಶಕನಾಗುವುದು ಆಗಿತ್ತು. ಆದರೆ ಒಂದೊಳ್ಳೆಯ ಎಂಟ್ರಿಯ ಅವಕಾಶ ಛಾಯಾಗ್ರಾಹಕನಾಗಿ ಸಿಕ್ಕಿತ್ತು. ಅದನ್ನು ನಿರಾಕರಿಸಿದರೆ ಅಪಾರ ಅನುಭವಗಳನ್ನು ಕಳೆದುಕೊಳ್ಳಬೇಕಾದೀತು ಎನ್ನುವ ಕಾರಣದಿಂದ ಒಪ್ಪಿಕೊಂಡೆ. ಈಗ ನನ್ನೊಳಗಿನ ನಿರ್ದೇಶಕನ ಸ್ಯಾಂಪಲ್ ಹೇಗಿದೆ ಎಂದು ತೋರಿಸಲು, ಈ ‘ಭೂರಮೆ’ ಹಾಡನ್ನು ಆಯ್ಕೆ ಮಾಡಿಕೊಂಡೆ.
ನಿಮ್ಮ ತಂಡದ ಬಗ್ಗೆ...
ಎ.ಜೆ. ಶೆಟ್ಟಿ: ಈ ಹಾಡನ್ನು ನಾಗಾರ್ಜುನ ಶರ್ಮ ರಚಿಸಿದ್ದಾರೆ. ಸಂಗೀತ ನೀಡಿರುವುದು ಪ್ರಿಯಾ ಮಲ್ಲಿ. ತುಂಬ ಪ್ರತಿಭಾವಂತೆ. ಅವರೇ ಈ ಗೀತೆಗೆ ಧ್ವನಿಯಾಗಿದ್ದಾರೆ. ಗಾಯಕ ಹರ್ಷ ನನಗೆ ಸೋಶಿಯಲ್ ಮೀಡಿಯಾ ಮೂಲಕ ಪರಿಚಿತವಾದವರು. ಅವರು ಯು.ಎಸ್.ನಲ್ಲಿರುತ್ತಾರೆ. ಅವರ ಕಂಠವನ್ನು ಮೆಚ್ಚಿಯೇ ಆಯ್ಕೆ ಮಾಡಿದ್ದೇನೆ. ಪರದೆಯ ಮೇಲೆ ನಾಯಕಿಯಾಗಿರುವವರು ಸುಶ್ಮಿತಾ ಶೆಟ್ಟಿ. ಅವರು ಮೂಲತಃ ಗುಲ್ಬರ್ಗಾದವರು. ನಾಯಕರಾಗಿರುವವರು ಅಥರ್ವ ವಿಶ್ವನಾಥ್. ಅವರೇ ಈ ಆಲ್ಬಮ್ ನಿರ್ಮಾಪಕರೂ ಹೌದು. ರವಿಭಟ್ ಅವರು ಕೂಡ ಒಂದು ಪಾತ್ರವಾಗಿ ನಟಿಸಿದ್ದಾರೆ.
► ಹಾಡಿಗೆ ಸಿಗುತ್ತಿರುವ ಪ್ರತಿಕ್ರಿಯೆ ಹೇಗಿದೆ?
ಚಿತ್ರೀಕರಣವಾಗುತ್ತಿರುವಾಗಲೇ ತುಂಬ ಪಾಸಿಟಿವ್ ಅಭಿಪ್ರಾಯಗಳು ದೊರಕಿವೆ.
ಎ.ಜೆ. ಶೆಟ್ಟಿ: 4 ದಿನಗಳ ಕಾಲ ಊಟಿಯಲ್ಲಿ ಹಾಗೂ ಎರಡು ದಿನ ಬೆಂಗಳೂರಿನಲ್ಲಿ ಶೂಟ್ ಮಾಡಿದ್ದೇವೆ. ಅಲ್ಲಿಂದ ಶೂಟ್ ಮಾಡಿ ಎಡಿಟಿಂಗ್ಗೆ ಹೋದಾಗ ಮತ್ತು ಇದೀಗ ಹಾಡು ರಿಲೀಸ್ ಬಳಿಕ ಕೂಡ ವ್ಯಾಪಕ ಪ್ರಶಂಸೆ ದೊರಕುತ್ತಿದೆ.
► ‘ಭೂರಮೆ’ ನೋಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಮೆಚ್ಚಿದ್ದಾರಂತೆ...
ಎ.ಜೆ. ಶೆಟ್ಟಿ: ಅಶ್ವಿನಿ ಮೇಡಮ್ ಪಿ.ಆರ್.ಕೆ. ಆಡಿಯೊಗೆ ಮಾತನಾಡುವಾಗಲೇ ಹಾಡು ನೋಡಿದ್ದರು. ಅವರಿಗೆ ಇಷ್ಟವಾದ ಕಾರಣವೇ ತಮ್ಮ ಸಂಸ್ಥೆಯ ಮೂಲಕ ಬಿಡುಗಡೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಹಾಡು ಓಪನಿಂಗ್ನಿಂದಲೇ ದೃಶ್ಯಾತ್ಮಕವಾಗಿ ತುಂಬ ಚೆನ್ನಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ತೋರಿಸಿದ್ದಾರೆ.
► ಆಲ್ಬಮ್ ಹಾಡನ್ನು ನೃತ್ಯಕ್ಕೆ ಸೀಮಿತವಾಗಿಸದೆ ಭಾವುಕಗೊಳಿಸಲು ಕಾರಣ?
ಎ.ಜೆ. ಶೆಟ್ಟಿ: ಇಲ್ಲಿ ನನಗೆ ಕಾನ್ಸೆಪ್ಟ್ ಮುಖ್ಯವಾಗಿತ್ತು. ಹಾಗಾಗಿ ಅದರ ಮೇಲೆ ಸಂಗೀತ ಸಂಯೋಜನೆ ಮಾಡಿಸಿದ್ದೆ. ಯಾಕೆಂದರೆ ನಮ್ಮ ಹಾಡಿನ ನಾಯಕನಿಗೆ ವೈವಿಧ್ಯಪೂರ್ಣ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶಗಳು ಬೇಕಾಗಿತ್ತು. ಅದನ್ನು ಈ ಹಾಡು ಸಾಧ್ಯವಾಗಿಸಿದೆ ಎಂದು ನಂಬಿದ್ದೇನೆ.
► ನಿರ್ದೇಶಕರಾಗಿ ನಿಮ್ಮ ಮುಂದಿನ ಹೆಜ್ಜೆ ಏನು?
ಎ.ಜೆ. ಶೆಟ್ಟಿ: ಹೊಸಬರ ತಂಡದೊಂದಿಗೆ ಚಿತ್ರ ಮಾಡಲು ಸಿದ್ಧನಾಗು ತ್ತಿದ್ದೇನೆ. ಅದಕ್ಕಾಗಿ ತುಂಬ ವರ್ಷಗಳಿಂದ ಒಂದು ಸ್ಕ್ರಿಪ್ಟ್ ತಯಾರಿ ಮಾಡಿದ್ದೇನೆ.
ಅದೊಂದು ಕೌಟುಂಬಿಕ ಪ್ರೇಮಕಥೆಯಾಗಿರಲಿದೆ. ಆದರೆ ಅದನ್ನು ಶುರು ಮಾಡುವ ಮೊದಲು ಛಾಯಾಗ್ರಾಹಕನಾಗಿ ಇನ್ನಷ್ಟು ಚಿತ್ರಗಳು ಸರದಿಯಲ್ಲಿವೆ.
► ಛಾಯಾಗ್ರಾಹಕರಾಗಿ ನಿಮ್ಮ ಮುಂದಿನ ಚಿತ್ರಗಳು?
ಎ.ಜೆ. ಶೆಟ್ಟಿ: ಇದೇ ಆಲ್ಬಮ್ ಹಾಡಿನ ನಾಯಕನೇ ಹೀರೋ ಆಗಿರುವ ಒಂದು ಚಿತ್ರ, ರವಿ ಬಸ್ರೂರು ಅವರೊಂದಿಗೆ ಒಂದು ಚಿತ್ರ ಹಾಗೂ ಇನ್ನೊಂದು ಮಲಯಾಳಂ ಸಿನೆಮಾಗಳು ಪಟ್ಟಿಯಲ್ಲಿವೆ. ಮಲಯಾಳಂನಲ್ಲಿ ನಟ ಉಣ್ಣಿ ಮುಕುಂದನ್ ಅವರ ಮುಂದಿನ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದೇನೆ.