ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಒಪಿಡಿಗೆ 70 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ: ಡಾ.ಶಿವಪ್ರಕಾಶ್
ಮಂಗಳೂರು: ಮಂಗಳೂರಿನ ಜಿಲ್ಲಾ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಹೊರರೋಗಿಗಳ ವಿಭಾಗಕ್ಕೆ (ಒಪಿಡಿ ಬ್ಲಾಕ್ ) 70 ಕೋಟಿ ರೂ. ವೆಚ್ಚದಲ್ಲಿ ಐದು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗಿದೆ ಎಂದು ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷರಾದ ಡಾ.ಶಿವಪ್ರಕಾಶ್.ಡಿ.ಎಸ್ ತಿಳಿಸಿದ್ದಾರೆ.
ನಗರದ ಜೆಪ್ಪು ಎಂ.ಆರ್.ಭಟ್ ಲೇನ್ನಲ್ಲಿ ಗುರುವಾರ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಇದರ ಕಾರುಣ್ಯ ಪಾಕಶಾಲೆ ಮತ್ತು ಎಂ.ಫ್ರೆಂಡ್ಸ್ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ಪೀಕರ್ ಯು.ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಅವರು ವೆನ್ಲಾಕ್ ಆಸ್ಪತ್ರೆಯ ಆಧುನೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಐದು ಅಂತಸ್ತಿನ ಹೊಸ ಒಪಿಡಿ ಬ್ಲಾಕ್ನಲ್ಲಿ ಮೂರು ಮೂರರಲ್ಲಿ ಒಪಿಡಿ ಮತ್ತು ಎರಡರಲ್ಲಿ ವಾರ್ಡ್ಗೆ ಬಳಕೆಯಾಗಲಿದೆ. ಇದು ನಿರ್ಮಾಣಗೊಂಡಲ್ಲಿ ಇಂತಹ ಅತ್ಯಾಧುನಿಕ ಒಪಿಡಿ ಸೌಲಭ್ಯವಿರುವ ದೇಶದಲ್ಲೇ ನಂ. 1 ಆಸ್ಪತ್ರೆ ಎನಿಸಿಕೊಳ್ಳಲಿದೆ ಎಂದು ಹೇಳಿದರು.
26 ಕೋಟಿ ರೂ. ವೆಚ್ಚದಲ್ಲಿ ಸಿಸಿಬಿ ಬ್ಲಾಕ್ ನಿರ್ಮಿಸಲಾಗುತ್ತಿದೆ. ಅಡ್ಮಿನ್ ಬ್ಲಾಕ್ ಹಳೆಯದಾಗಿದ್ದು. ಇದನ್ನು ನವೀಕರಣಮಾಡಲಾಗುವುದು ಎಂದು ಹೇಳಿದರು.
ದ.ಕ. ಜಿಲ್ಲೆಯ ಜನರು ಸ್ವಚ್ಛತೆಗೆ ಆದ್ಯತೆ ನೀಡುವವರು. ಹಿಂದೆ ಹೊರ ಜಿಲ್ಲೆಯವರು ವೆನ್ಲಾಕ್ ಆಸ್ಪತ್ರೆಯ ಪ್ರಯೋಜನ ಹೆಚ್ಚು ಪಡೆಯುತ್ತಿದ್ದರು. ಆದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊಸ ಹೊಸ ಬಿಲ್ಡಿಂಗ್ಗಳು ತಲೆ ಎತ್ತತೊಡಗಿದ ಬಳಿಕ ಸ್ಥಳೀಯರು ಕೂಡಾ ಇಲ್ಲಿನ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದರು.
170 ವರ್ಷ ಆಚರಣೆಯ ಸಂಭ್ರಮದಲ್ಲಿರುವ ವೆನ್ಲಾಕ್ ಆಸ್ಪತ್ರೆಯ ಹಳೆಯ ಕಟ್ಟಡಗಳ ಮೇಲೆ ಬೆಳೆದಿದ್ದ ಗಿಡ ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿ, ಕಟ್ಟಡಗಳಿಗೆ ಬಣ್ಣ ಬಳಿಯುವ ಕಾರ್ಯ ನಡೆದಿದೆ ಎಂದು ಹೇಳಿದರು.
ಎಂ.ಫ್ರೆಂಡ್ಸ್ ವೆನ್ಲಾಕ್ ಆಸ್ಪತ್ರೆಯ ರೋಗಿಗಳಿಗೆ ಆಹಾರ ತಯಾರಿಸಿಕೊಡುವ ಉದ್ದೇಶಕ್ಕಾಗಿ ಸುಸಜ್ಜಿತ ಪಾಕ ಶಾಲೆಯನ್ನು ನಿರ್ಮಿಸಿರುವುದು ಶ್ಲಾಘನೀಯ. ಪಾಕಶಾಲೆ ಇದೊಂದು ಉತ್ತಮ ಪರಿಕಲ್ಪನೆಯಾ ಗಿದೆ. ಸಂಸ್ಥೆಯ ಸೇವಾಕಾರ್ಯಗಳು ಇನ್ನಷ್ಟು ಮುಂದುವರಿಯಲಿ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿ ಲಯನ್ಸ್ ಜಿಲ್ಲೆ 317 ಡಿ ಇದರ ಪೂರ್ವ ಗವರ್ನರ್ ವಸಂತ ಕುಮಾರ್ ಶೆಟ್ಟಿ ಮಾತನಾಡಿ ಎಂಟು ವರ್ಷಗಳಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಅನ್ನಕೊಡುವ ಕೆಲಸ ನಿಜಕ್ಕೂ ಅಪೂರ್ವ. ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಎಂ.ಫ್ರೆಂಡ್ಸ್ನ ಟ್ರಸ್ಟಿ ಹಾಗೂ ವೈಟ್ ಸ್ಟೋನ್ ಗ್ರೂಪ್ನ ಆಡಳಿತ ನಿರ್ದೇಶಕ ಮುಹಮ್ಮದ್ ಶರೀಫ್ ಬೋಳಾರ ಅವರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನ ನೂತನ ಕಾರ್ಯಾಲಯ ಮತ್ತು ಕಾರುಣ್ಯ ಪಾಕಶಾಲೆಯ ಉದ್ಘಾಟನೆ ನೆರವೇರಿಸಿದರು.
ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಕಾರ್ಯಾಧ್ಯಕ್ಷ ಸುಜಾಹ್ ಮಹಮ್ಮದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಸಿಬಿಎಸ್ಇ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಎಂ.ಫ್ರೆಂಡ್ಸ್ನ ಸದಸ್ಯರ 6 ಮಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ವೇದಿಕೆಯಲ್ಲಿ ಕೋಶಾಧಿಕಾರಿ ಝುಬೈರ್ ಬುಳೇರಿಕಟ್ಟೆ , ಉಪಾಧ್ಯಕ್ಷರಾದ ವಿ.ಎಚ್.ಅಶ್ರಫ್ ವಿಟ್ಲ, ಅಬೂಬಕರ್ ಪುತ್ತು ಉಪ್ಪಿನಂಗಡಿ, ಡಾ.ಮುಬಶ್ಶೀರ್, ಜೊತೆ ಕಾರ್ಯದರ್ಶಿಗಳಾದ ಶೇಖ್ ಇಸಾಖ್, ಅನ್ವರ್ ಹುಸೈನ್ ಗೂಡಿನಬಳಿ, ಟ್ರಸ್ಟಿಗಳಾದ ಮುಹಮ್ಮದ್ ಶರೀಫ್ ಮೂಡಬಿದ್ರೆ , ಕಲಂದರ್ ಪರ್ತಿ ಪ್ಪಾಡಿ, ಸಿಎಚ್ ಗಫೂರ್ ಮೂಡಬಿದ್ರೆ, ಮುಸ್ತಫಾ ಗೋಳ್ತಮಜಲು, ಅನ್ಸಾರ್ ಬೆಳ್ಳಾರೆ, ಆಶಿಕ್ ಕುಕ್ಕಾಜೆ, ಹಸೈನಾರ್ ಹಾಜಿ ಗುರುವಾಯನಕೆರೆ, ಹಂಝ ಆನಿಯಾ ದರ್ಬಾರ್, ಹಮೀದ್ ಅತ್ತೂರು, ವಕೀಲರಾದ ಶಾಕೀರ್ ಪುತ್ತೂರು, ಉಬೈದ್ ವಿಟ್ಲ ಉಪಸ್ಥಿತರಿದ್ದರು.
ಕಾರುಣ್ಯ ಯೋಜನೆಯ ಮುಖ್ಯಸ್ಥ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸ್ವಾಗತಿಸಿದರು. ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಆರಿಫ್ ಪಡುಬಿದ್ರಿ ವಂದಿಸಿದರು. ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.