ಮೀನುಗಾರರ ಸಂಕಷ್ಟ ನಿಧಿ 8 ಲಕ್ಷ ರೂ.ಗೆ ಏರಿಕೆ: ಚೇತನ್ ಬೆಂಗ್ರೆ
ಮಂಗಳೂರು, ಫೆ. 22: ರಾಜ್ಯದ ಮೀನುಗಾರರ ಸಂಕಷ್ಟ ನಿಧಿ ಮೊತ್ತವನ್ನು 8 ಲಕ್ಷ ರೂ.ಗಳಿಗೆ ಏರಿಕೆ ಮಾಡಲು ಇತ್ತೀಚೆಗೆ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಅನುಮೋದನೆ ದೊರಕಿದೆ ಎಂದು ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿ ಸದಸ್ಯ ಚೇತನ್ ಬೆಂಗ್ರೆ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಗುರುವಾರ ಮಾಹಿತಿ ನೀಡಿದ ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷರೂ ಆಗಿರುವ ಅವರು, ಈ ಹಿಂದೆ ಸಂಕಷ್ಟ ನಿಧಿಯಡಿ ತಲಾ 2 ಲಕ್ಷರೂ. ನೀಡಲಾಗುತ್ತಿತ್ತು. ಬಳಿಕ ಅದನ್ನು 6 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದ್ದು, ಇದೀಗ ಅದನ್ನು 8 ಲಕ್ಷ ರೂ.ಗಳಿಗೆ ಏರಿಕೆ ಮಾಡಲು ಬೆಂಗಳೂರಿನ ಸಭೆಯಲ್ಲಿ ನಿರ್ಧರಿಸಿ ಸಂಬಂಧ ಪಟ್ಟ ಇಲಾಖೆಯಿಂದ ಅನುಮೋದನೆ ನೀಡಲಾಗಿದೆ ಎಂದರು.
ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿಯನ್ನು ಪುನರ್ ರಚಿಸಿದ್ದು, ಮೀನುಗಾರರ ಶ್ರೇಯೋಭಿವೃದ್ಧಿಗೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ವಿವಿಧ ಯೋಜನೆ ರೂಪಿಸಲಾಗಿದೆ. ಸಮಿತಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರರ ಮಹಾಮಂಡಲ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಜಾರಿ ಮೀನುಗಾರರ ಮಹಾಮಂಡಲದ ಅಧ್ಯಕ್ಷರು, ಪ್ರತಿನಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ಬುಧವಾರ ಸಭೆ ನಡೆಸಿದ್ದು, ಇಲಾಖೆಯ ಪ್ರಸ್ತಾವನೆ ಜತೆ ಸದಸ್ಯರು ಕೆಲವು ಸಲಹೆ ನೀಡಿದ್ದಾರೆ ಎಂದವರು ಹೇಳಿದರು.
ಶಿರೂರಿನಲ್ಲಿ ಮಳೆಯಿಂದ ಹಾನಿಗೊಳಗಾಗಿದ್ದ ದೋಣಿಗಳಿಗೆ ತಲಾ ಒಂದು ಲಕ್ಷ ಪರಿಹಾರ ನೀಡಲು ಹಾಗೂ ಗಂಗೊಳ್ಳಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಮೀನುಗಾರರ ಬೋಟ್ ಬೆಂಕಿ ದುರಂತಕ್ಕೆ 1.75 ಕೋಟಿ ಪರಿಹಾರ ನೀಡಲು ನಿರ್ಧರಿಸಲಾಯಿತು. ದಕ್ಕೆಯಲ್ಲಿ ಮೀನುಗಾರಿಕೆ ವೇಳೆ ಅವಘಡ ಸಂಭವಿಸಿದರೆ, ವೈದ್ಯಕೀಯ ವೆಚ್ಚದ ಶೇ.50 ಅಥವಾ ಗರಿಷ್ಠ ಮೂರು ಲಕ್ಷ ರೂ. ಪರಿಹಾರ ನೀಡಲು ಕ್ರಮಕ್ಕೆ ಸೂಚಿಸಲಾಗಿದೆ. ಮಂಗಳೂರು ಬಂದರು ಅಭಿವೃದ್ಧಿಯಾಗದೆ 15 ವರ್ಷಗಳಾಗಿದ್ದು, ಇದೀಗ 45.5 ಕೋಟಿ ರೂ.ನಲ್ಲಿ ಅಭಿವೃದ್ಧಿ ಕಾಮಗಾರಿ ಮಾರ್ಚ್ ಪ್ರಥಮ ವಾರದಿಂದ ಆರಂಭವಾಗಲಿದೆ. ರಸ್ತೆ, ನೀರಿನ ಟ್ಯಾಂಕ್, ಜೆಟ್ಟಿ, ರೆಸ್ಟೋರೆಂಟ್, ಬಲೆ ನೇಯುವ ಸ್ಥಳ ಸೇರಿದಂತೆ ಬಂದರಿನಲ್ಲಿ ಹಲವು ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೆತ್ತೆಕೊಳ್ಳಲಾಗುತ್ತಿದೆ. ಅಳಿವೆ ಬಾಗಿಲು ಹೂಳೆತ್ತುವ ಕಾಮಗಾರಿ ಶೇ.75 ಮುಗಿದಿದ್ದು, ಉಳಿದ ಶೇ.25 ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಹಳೆ ಬಂದರಿನ ಪ್ರಥಮ ಹಂತದ ಜೆಟ್ಟಿ ಹಾನಿಗೊಳಗಾಗಿದ್ದು, ಬಳಕೆ ಮಾಡಲಾಗುತ್ತಿಲ್ಲ. ಅದನ್ನು 37.5 ಕೋಟಿ ರೂ. ವೆಚ್ಚದಲ್ಲಿ ತಾಂತ್ರಿಕವಾಗಿ ನವೀಕರಿಸಲಾಗುತ್ತಿದೆ. ಸಾಗರಮಾಲ ಯೋಜನೆಯ 29 ಕೋಟಿ ರೂ. ವೆಚ್ಚದ ಕ್ಯಾಪಿಟಲ್ ಡ್ರೆಜ್ಜಿಂಗ್ ಕಾಮಗಾರಿ ಆರಂಭಿಸಲು ಇರುವ ತೊಡಕು ನಿವಾರಿಸಲು, ಯುವಜನತೆಗೆ ಉದ್ಯೋಗ ಕಲ್ಪಿಸಲು ಅಕ್ವಾ ಪಾರ್ಕ್ ಸ್ಥಾಪಿಸಲು ಸಭೆಯಲ್ಲಿ ಪ್ರಸ್ತಾಪಿಸಾಯಿತು ಎಂದು ಅವರು ವಿವರಿಸಿದರು.
ಸಬ್ಸಿಡಿ ಡೀಸೆಲ್ 10,000 ಲೀಟರ್ಗೆ ಏರಿಕೆ
ಪ್ರಸಕ್ತ ಸಣ್ಣ ದೋಣಿ ಮೀನುಗಾರರಿಗೆ ವಾರ್ಷಿಕವಾಗಿ ಸಿಗುವ ಸಬ್ಸಿಡಿ ದರದ ಡೀಸೆಲ್ ಅನ್ನು 9 ಸಾವಿರ ಲೀ. ನಿಂದ 10 ಸಾವಿರ ಲೀಟರ್ಗೆ ಏರಿಕೆ ಮಾಡಲಾಗಿದೆ. ಹಿಂದೆ ತಿಂಗಳಿಗೆ ನಿಗದಿತವಾಗಿ ಸಿಗುತ್ತಿದ್ದ ಈ ಸಬ್ಸಿಡಿ ದರದ ಡೀಸೆಲ್ ಅನ್ನು ತಲಾ ಐದು ತಿಂಗಳಿಗೊಮ್ಮೆ 5000 ಲೀಟರ್ನಂತೆ ನೀಡಲು ಕ್ರಮ ವಹಿಸಲು ಸೂಚಿಸಲಾಗಿದೆ. ಹಿಂದೆ ಮೀನುಗಾರರು ನಿಗದಿತ ಡೀಸೆಲ್ ಆ ತಿಂಗಳಲ್ಲಿ ಪಡೆಯದಿದ್ದರೆ ಅದನ್ನು ಮುಂದಿನ ತಿಂಗಳಿಗೆ ನೀಡುವ ವ್ಯವಸ್ಥೆ ಇರಲಿಲ್ಲ. ಈಗ ಐದು ತಿಂಗಳವರೆಗೆ ಅದನ್ನು ವಿಸ್ತರಿಸಲಾಗಿದೆ. ಮೀನುಗಾರರ ಮಕ್ಕಳು ಮೀನುಗಾರಿಕೆ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಕೃಷಿ ಪ್ರಮಾಣಪತ್ರ ಸಿಗದೆ ಕಷ್ಟ ಪಡುತ್ತಿದ್ದು, ಈ ಬಗ್ಗೆಯೂ ಚರ್ಚಿಸಿದ್ದು ಕ್ರಮದ ಭರವಸೆ ದೊರಕಿದೆ ಎಂದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಇತಿಹಾಸದಲ್ಲಿ ಮೀನುಗಾರರ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡಿಸಿದ್ದು, ಮೂರು ಸಾವಿರ ಕೋಟಿ ರೂ. ಅನುದಾನ ನೀಡಿರುವುದು ದೊಡ್ಡ ಸಾಧನೆ. ಹಿಂದೆ ಡೀಸೆಲ್ ಸಬ್ಸಿಡಿ ಯೋಜನೆ ಮೂಲಕ ಮೀನುಗಾರರನ್ನು ಬದುಕಿಸುವ ಕಾರ್ಯವನ್ನು ಸಿದ್ದರಾಮಯ್ಯ ಮಾಡಿದ್ದರು ಎಂದರು.
ಮಾಜಿ ಉಪಮೇಯರ್ ಕವಿತಾ ವಾಸು, ಪ್ರವಿತಾ ಕರ್ಕೇರ, ರಾಜ್ಕುಮಾರ್ ಕೋಟ್ಯಾನ್, ಮಿಥುನ್ ಚಂದನ್, ಪ್ರಸಾದ್ ಮೆಂಡನ್, ಆಲ್ಬರ್ಟ್ ಆಗಸ್ಟಿನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.