ಮಂಗಳೂರು| 'ಪ್ರಜಾ ಸೌಧ'ದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಗೆ ಸಿಎಂ ಇತಿಹಾಸ ಪಾಠ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಡಳಿತ ಕೇಂದ್ರ ಮಂಗಳೂರಿನ ಪಡೀಲ್ನಲ್ಲಿರುವ 'ಪ್ರಜಾ ಸೌಧ'ದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅವರಿಗೆ ʼಅಭಿವೃದ್ಧಿ ರಾಜಕೀಯʼದ ಪಾಠ ಮಾಡಿದ ಸ್ವಾರಸ್ಯಕರ ಘಟನೆ ಶುಕ್ರವಾರ ನಡೆಯಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್, ಸಿಎಂ ಸಿದ್ದರಾಮಯ್ಯ ಮಾತನಾಡುವುದಕ್ಕೆ ಮುನ್ನ ತಮ್ಮ ಭಾಷಣದಲ್ಲಿ ಸ್ಮಾರ್ಟ್ ಸಿಟಿ ಪ್ರಧಾನಿ ಮೋದಿಯವರ ಕನಸಿನ ಕೂಸು. ಪ್ರಧಾನಿ ಸ್ಮಾರ್ಟ್ ಸಿಟಿ ಯೋಜನೆ ಕೊಡದಿದ್ದರೆ ಈ ಯೋಜನೆಯೇ ಇರುತ್ತಿರಲಿಲ್ಲ, ಎಂದು ಹೇಳಿದ್ದರು.
ವೇದವ್ಯಾಸ್ ಕಾಮತ್ ಮಾತು ಮುಗಿಸಿದ ನಂತರ ಮಾತು ಆರಂಭಿಸಿದ ಸಿಎಂ ಸಿದ್ದರಾಮಯ್ಯ, ಶಾಸಕ ಕಾಮತ್ ಉದ್ದೇಶಿಸಿ ಇತಿಹಾಸ ತಿರುಚಬೇಡಿ, ಅಭಿವೃದ್ದಿಯಲ್ಲಿ ರಾಜಕೀಯ ಬೇಡ ಎಂದು ಹೇಳಿದರು.
"ಮಿಸ್ಟರ್ ಕಾಮತ್. ನನ್ನ ಸೌಭಾಗ್ಯ ಏನೆಂದರೆ ಈ ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡಿದ್ದೂ ನಾನೇ, ಇವತ್ತು ಉದ್ಘಾಟನೆ ಮಾಡಿದ್ದು ನಾನೇ. ನಿಮ್ಮ ಭಾಷಣದಲ್ಲಿ ಸ್ಮಾರ್ಟ್ ಸಿಟಿ ಪ್ರಧಾನಿ ಮೋದಿಯವರ ಕನಸು ಎಂದು ನೀವು ಹೇಳಿದ್ರಿ. ಅದು ನಿಜ. ಆದರೆ, ನಾವೂ ರಾಜ್ಯ ಸರ್ಕಾರವೂ ಕೂಡ ಸ್ಮಾರ್ಟ್ ಸಿಟಿಯ ಯೋಜನೆಗಳಿಗೆ ಶೇ.50ರಷ್ಟು ಅನುದಾನ ಕೊಡ್ತಿದ್ದೇವೆ ಎನ್ನುವುದು ಗೊತ್ತಿದೆಯಲ್ವಾ? ನಾಲಕ್ಕು ವರ್ಷ ರಾಜ್ಯದಲ್ಲಿ ನೀವು ಅಧಿಕಾರದಲ್ಲಿದ್ರಲ್ವಾ. ಆಗ ಯಾಕೆ ಇದನ್ನು ಮಾಡ್ಲಿಲ್ಲ? ಆಗಲೂ ಸ್ಮಾರ್ಟ್ ಸಿಟಿ ಯೋಜನೆ ಇತ್ತು. ಆಗ ಯಾಕೆ ಖರ್ಚು ಮಾಡಲಿಲ್ಲ? ಆಗ ಖರ್ಚು ಮಾಡಿದ್ದಿದ್ದರೆ ಇಷ್ಟು ದಿನ ಬೇಕಿತ್ತಾ? 2015ರಲ್ಲಿ ಇದಕ್ಕೆ ಶಂಕು ಸ್ಥಾಪನೆ ಆಗಿದ್ದು".
"ಈ 'ಪ್ರಜಾ ಸೌಧ' ನಿರ್ಮಾಣಕ್ಕೆ ಕಾರಣ ರಮಾನಾಥ ರೈ. ಜಿಲ್ಲಾಡಳಿತಕ್ಕೆ ಹೊಸ ಕಚೇರಿ ಬೇಕೂಂತ ನನ್ನ ಮೇಲೆ ಒತ್ತಡ ತಂದದ್ದು ರಮಾನಾಥ ರೈ. ಇತಿಹಾಸ ತಿಳಿದುಕೊಳ್ಳಿ. ಇತಿಹಾಸವನ್ನು ತಿರುಚಿ ಹೇಳ್ಬೇಡಿ. ಯಾವತ್ತೂ ಸುಳ್ಳು ಹೇಳಬಾರದು. ಜನ ನಂಬಬೇಕಲ್ಲಾ. ರಾಜಕೀಯ ಮಾಡೋಣ. ಆದರೆ, ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ಬೇಡ...." ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರು ಹರ್ಷೋದ್ಗಾರ ವ್ಯಕ್ತಪಡಿಸಿದರು.
ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಮನುಷ್ಯರು ಮನುಷ್ಯರನ್ನು ಪ್ರೀತಿಸುವ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಈ ಸಮಾಜವನ್ನು ನಾವು ಇನ್ನಷ್ಟು ಗಟ್ಟಿಗೊಳಿಸೋಣ. ಜೊತೆಗೆ ಅಸಮಾನತೆಯ ಸಮಾಜವನ್ನು ಸುಧಾರಿಸಿ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಸಮಾಜ ಕಟ್ಟೋಣ. ಅತ್ಯಂತ ಪ್ರಜ್ಞಾವಂತರೇ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳು ನಡೆಯಬಾರದು ಎಂದು ಕರೆ ನೀಡಿದರು.
ನಾವು ನುಡಿದಂತೆ ನಡೆದಿದ್ದೇವೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಕೊಡುವ ಭರವಸೆ ನೀಡಿದ್ದೆವು. ಅದರಂತೆ ಪುತ್ತೂರಿಗೂ ಮೆಡಿಕಲ್ ಕಾಲೇಜು ಕೊಟ್ಟಿದ್ದೇವೆ. ಸದ್ಯ 250 ಬೆಡ್ ಗಳ ಆಸ್ಪತ್ರೆ ಮಾಡ್ತೀವಿ. ಆಮೇಲೆ ಮತ್ತೆ 250 ಬೆಡ್ ಗಳನ್ನು ವಿಸ್ತರಿಸುತ್ತೇವೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ ಆಗಲಿದೆ. ಸಚಿವ ಕೃಷ್ಣಬೈರೇಗೌಡರು ವಿಶೇಷ ಕಾಳಜಿ, ಸಾಕಷ್ಟು ಶ್ರಮ ವಹಿಸಿ ಜಿಲ್ಲೆಯನ್ನು ಪೋಡಿಮುಕ್ತ ಮಾಡುವ ದಿಕ್ಕಿನಲ್ಲಿ ಕೆಲಸಗಳು ಆಗಿವೆ ಎಂದು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಡ್ತೀವಿ. ಕೇಂದ್ರ ರಾಜ್ಯಕ್ಕೆ ವಾಪಾಸ್ ಕೊಡುವುದು, ಸ್ಮಾರ್ಟ್ ಸಿಟಿ ಯೋಜನೆ ಸೇರಿ ಕೇವಲ 65 ಸಾವಿರ ಕೋಟಿ. ಶೇ 15-16 ರಷ್ಟು ಮಾತ್ರ ವಾಪಾಸ್ ಕೊಡುತ್ತಿದೆ. ಇದು ಕೇಂದ್ರ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು , ಪ್ರಧಾನಿ ಮೋದಿಯವರಿಗೆ ಹೇಳಿ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ನಿಲ್ಲಿಸಿ ಎಂದು ಶಾಸಕ ಕಾಮತ್ ಅವರಿಗೆ ಕಿವಿ ಮಾತು ಹೇಳಿದರು.