ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆದೇ ಪಡೆಯುತ್ತೇವೆ : ಮಾತೆ ಗಂಗಾದೇವಿ
ದಾವಣಗೆರೆ : ಲಿಂಗಾಯತಕ್ಕೆ ಮಾತ್ರ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುತ್ತದೆಯೇ ಹೊರತು, ವೀರಶೈವ-ಲಿಂಗಾಯತ ಎಂದು ಹೋದರೆ ಒಂದು ಶತಮಾನ ಕಳೆದರೂ ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಲು ಸಾಧ್ಯವಿಲ್ಲ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದ್ದಾರೆ.
ರವಿವಾರ ಬಸವ ಬಳಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಾತೆ ಮಹಾದೇವಿ ಅವರೇ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮುನ್ನುಡಿ ಬರೆದಿದ್ದರು. ದಶಕಗಳಿಂದಲೂ ಈ ಹೋರಾಟ ನಡೆಯುತ್ತಲೇ ಇದ್ದು, ವೀರಶೈವ ಲಿಂಗಾಯತ ಎಂದಾದರೆ ನಮಗೆ ಒಂದು ಶತಮಾನ ಕಳೆದರೂ ಪ್ರತ್ಯೇಕ ಧರ್ಮ ಸಿಗುವುದಿಲ್ಲ. ಹಾಗಾಗಿ, ಲಿಂಗಾಯತ ಧರ್ಮ ಅಂತಲೇ ಹೋರಾಟ ಮುಂದುವರಿಸಬೇಕೆಂದು ಕರೆ ನೀಡಿದರು.
ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆದೇ ಪಡೆಯುತ್ತೇವೆ ಎಂಬ ಧೈರ್ಯ, ಛಲದಿಂದ ಮುನ್ನುಗ್ಗಿದ್ದೇವೆ. ಇದು ಇಂದು, ನಿನ್ನೆಯದ್ದಲ್ಲ. ಬಹಳ ವರ್ಷಗಳ ಹಿಂದಿನ ಕನಸು ಈಗ ನನಸಾಗುವ ಕಾಲ ಬಂದಿದೆ ಎಂದರು.
ರಂಭಾಪುರಿ ಸ್ವಾಮೀಜಿಗಳು ಎಲ್ಲರೂ ಒಂದಾಗೋಣ ಎಂದು ಆಹ್ವಾನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾತೆ ಗಂಗಾದೇವಿ, ಬಸವಣ್ಣನವರೇ ಧರ್ಮಗುರು, ಬಸವಣ್ಣನವರ ವಚನಗಳೇ ಧರ್ಮಗ್ರಂಥ ಮತ್ತು ಕೂಡಲಸಂಗಮವೇ ಧರ್ಮಕ್ಷೇತ್ರವೆಂದು ಅವರು ನಂಬಿದಾಗ ಆ ಬಗ್ಗೆ ನಾವು ಯೋಚಿಸುತ್ತೇವೆ ಎಂದು ನುಡಿದರು.
ಶರಣರೆಲ್ಲಾ ಬರಲಿ ಎಂಬ ಉದ್ದೇಶದಿಂದ ಮುಖವಾಡ ಧರಿಸಿ ಬೀದರ್ನಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ಮಾಡುತ್ತೇವೆ ಎಂದಿದ್ದಾರೆ. ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುಬಸವ ಸ್ವಾಮೀಜಿ, ಬಸವಯೋಗಿ ಸ್ವಾಮೀಜಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು