×
Ad

ಬಿಜೆಪಿಯವರಿಗೆ ಶಶಿತರೂರ್ ಏಕೆ ಬೇಕು, ಅವರಲ್ಲಿ ಇಂಗ್ಲಿಷ್‌ ಸಮರ್ಥವಾಗಿ ಮಾತನಾಡುವವರು ಯಾರೂ ಇಲ್ಲವೇ? : ಸಂತೋಷ್‌ ಲಾಡ್

Update: 2025-07-14 21:15 IST

ಧಾರವಾಡ : ಬಿಜೆಪಿಯವರಿಗೆ ಕೇಂದ್ರ ಸರಕಾರದ ವಿರುದ್ಧ ಒಂದೇ ಒಂದು ಪ್ರಶ್ನೆ ಕೇಳಬಾರದು. ಇವರಿಗೆ ಕೇವಲ ಕರ್ನಾಟಕ ರಾಜ್ಯದ ವಿಷಯ ಮಾತನಾಡಬೇಕು. ಇವರು ಮಾತ್ರ ಪ್ರಪಂಚದ ಯಾವುದೇ ವಿಷಯದ ಬಗ್ಗೆ, ಯಾರ ಬಗ್ಗೆ ಬೇಕಾದರೂ ಮಾತನಾಡಬಹುದೇ? ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಪ್ರಶ್ನಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಹುಲ್ ಗಾಂಧಿ, ಇಂದಿರಾ ಗಾಂಧಿ, ನೆಹರು ಬಗ್ಗೆ ಮಾತನಾಡಬಹುದು. ಪ್ರಪಂಚದ ಎಲ್ಲ ನಾಯಕರ ಬಗ್ಗೆ ಮಾತನಾಡಬಹುದು. ಆದರೆ, ಕಾಂಗ್ರೆಸ್‍ನವರು ಮಾತ್ರ ಅವರಿಗೆ ಏನೂ ಕೇಳಬಾರದು. ಇವರಿಗೆ ಮುಜುಗರ ಆಗುವ ಪ್ರಶ್ನೆ ಕೇಳಬಾರದು. ಕೇಳಿದರೆ ಸಂತೋಷ್‌ ಲಾಡ್ ಹಾಗೆ ಮಾತನಾಡುತ್ತಾನೆ, ಹೀಗೆ ಮಾತನಾಡುತ್ತಾನೆ ಎಂದು ಟೀಕೆ ಮಾಡುತ್ತಾನೆಂದು ಹೇಳಿದರು.

ಟ್ರಂಪ್ ಯಾರ ಸ್ನೇಹಿತ: ಭಾರತ ಮತ್ತು ಪಾಕಿಸ್ತನ ನಡುವಿನ ಯುದ್ಧ ನಿಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಲವತ್ತು-ಐವತ್ತು ದಿನಗಳಲ್ಲಿ ಹಲವಾರು ಬಾರಿ ಹೇಳಿದ್ದಾರೆ. ಹಾಗಾದರೆ ಟ್ರಂಪ್ ಯಾರ ಫ್ರೆಂಡ್. ಟ್ರಂಪ್ ಹೇಳಿಕೆ ಬಗ್ಗೆ ಕೇಂದ್ರದ ಯಾವುದೇ ಸಚಿವರು, ಹೋಗಲಿ ಪ್ರಧಾನಿ ಇದಕ್ಕೆ ಉತ್ತರ ಕೊಡುತ್ತಿಲ್ಲ. ಇದನ್ನು ಪ್ರಶ್ನೆ ಮಾಡಿದ್ದೇವೆ, ಅದರಲ್ಲಿ ತಪ್ಪೇನಿದೆ ಎಂದು ಅವರು ಕೇಳಿದರು.

ಮೋದಿ ಅವರ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮೊದಲು ಏನು ವಾಗ್ದಾನ ಮಾಡಿದ್ದರು. ಅದನ್ನು ನಾವು ಯಾವಾಗಲೂ ಪ್ರಶ್ನೆ ಮಾಡುತ್ತಿದ್ದೇವೆ. ಅವರಿಗೂ ನಮಗೂ ಯಾವುದೇ ವೈಯಕ್ತಿಯ ಅಜೆಂಡಾ ಇಲ್ಲ. ಆಗ ಇವರು ಸ್ಥಳೀಯ ವಿಷಯ ಮಾತ್ರ ಮಾತನಾಡಬೇಕು ಎನ್ನುತ್ತಾರೆ. ನಮ್ಮ ದೇಶದ ಪ್ರಧಾನಿಗೆ ಯಾರೇ ಪ್ರಶ್ನೆ ಮಾಡುವ ಹಕ್ಕು ಇದೆ. ಆ ಆವಕಾಶ ಚಲಾಯಿಸುತ್ತಿದ್ದೇವೆ. ನಾನು ಕೇಳುವ ಪ್ರಶ್ನೆಯಲ್ಲಿ ತಪ್ಪಿದ್ದರೆ ತಿದ್ದಿಕೊಳ್ಳುವೆ ಎಂದರು.

ಮೋದಿ ವರ್ಚಸ್ಸು ದೊಡ್ಡದಾಯ್ತಾ?: ಭಾರತಕ್ಕಿಂತ ಮೋದಿ ಅವರ ವರ್ಚಸ್ಸು ದೊಡ್ಡದಾ? ಈ ದೇಶ ಬರೀ ಕಾಂಗ್ರೆಸ್ ಬಿಜೆಪಿಯದ್ದಲ್ಲ. ದೇಶ ಎಲ್ಲರಿಗೂ ಸೇರಿದ್ದು. ಮೋದಿ ಅವರು ಕೇವಲ ಈ ದೇಶದ ಪ್ರಧಾನಿ ಅಷ್ಟೇ ಎಂದು ಅವರು ಹೇಳಿದರು.

ದೇಶದ ಸಾಧನೆ ಏನು: ಕಳೆದ ಹನ್ನೊಂದು ವರ್ಷದಲ್ಲಿ ಭಾರತ ಯಾವುದರಲ್ಲಿ ಮುಂದೆ ಇದೆ. ಏನು ಸಾಧನೆ ಮಾಡಿದೆ. ಯಾವ ಇಲಾಖೆಯಲ್ಲಿ ಸಾಧನೆ ಮಾಡಿದೆ ಎಂಬುದನ್ನು ತೋರಿಸಲಿ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ̇87ನೆ ರ್ಯಾಂಕಿನಲ್ಲಿ ಇದ್ದ ಭಾರತ ಇಂದು 150ನೆ ರ್ಯಾಂಕಿಂಗ್‍ಗೆ ಇಳಿದಿದೆ. ಇದು ನಾಚಿಕೆಗೇಡು ಅಲ್ಲವೇ ಎಂದು ಅವರು ವ್ಯಂಗ್ಯವಾಡಿದರು.

ಇಂಗ್ಲಿಷ್‌ ಮಾತನಾಡುವವರು ಇಲ್ಲವೇ: ಪ್ರಧಾನಿ ಮೋದಿ ಈವರೆಗೆ 90 ದೇಶಕ್ಕೆ ಹೋಗಿದ್ದಾರೆ. ಶಶಿತರೂರ್ ಇವರಿಗೆ ಏಕೆ ಬೇಕು. ಇವರು ವಿಶ್ವಗುರು ಅಲ್ಲವೇ. ಬಿಜೆಪಿಯಲ್ಲಿ ಇಂಗ್ಲಿಷ್‌ ನಲ್ಲಿ ಸಮರ್ಥವಾಗಿ ಮಾತನಾಡುವವರು ಯಾರು ಇಲ್ಲವೇ. ಮೋದಿ ಅವರ ಕಾಲದಲ್ಲಿ ಭಾರತಕ್ಕೆ ವಿಶ್ವದ ಬೆಂಬಲದ ಕಡಿಮೆ ಆಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News