×
Ad

ಮತ್ಸ್ಯ ಮೇಳಕ್ಕೆ ಮಾರುಹೋದ ಜನರು

ಜನಮನ ಗೆದ್ದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ‌

Update: 2026-02-07 13:23 IST

ರಾಯಚೂರು : ಎಡೆದೊರೆ ನಾಡು ರಾಯಚೂರಿನ ಜಿಲ್ಲಾ ಉತ್ಸವದ ಸಂಭ್ರಮಕ್ಕೆ ಈ ಬಾರಿ ಹೊಸ ಶಕ್ತಿ ತುಂಬಿರುವುದು ಬೃಹತ್ ಮತ್ಸ್ಯ ಮೇಳ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿರುವ ಆಡಳಿತ ಕಚೇರಿ ಕಟ್ಟಡದ ಕೆಳ ಮಹಡಿಯಲ್ಲಿ ಮೀನುಗಾರಿಕೆ ಇಲಾಖೆಯ ವತಿಯಿಂದ ಆಯೋಜಿಸಿರುವ ಈ ಮೇಳ, ಜಲಲೋಕದ ವೈಭವವನ್ನು ನಗರವಾಸಿಗಳ ಮುಂದೆ ತೆರೆದಿಟ್ಟಿದೆ.

ಪ್ರವೇಶ ದ್ವಾರದಲ್ಲೇ ಕಾಣಿಸುವ ಆಕರ್ಷಕ ಫಲಕಗಳು ಮತ್ತು ಸಜ್ಜಿಕೆ ಮೇಳದ ವಿಶೇಷತೆಯನ್ನು ಹೇಳುವಂತಿದ್ದು, ಒಳಗೆ ಕಾಲಿಟ್ಟ ಕ್ಷಣವೇ ಬಣ್ಣಬಣ್ಣದ ಮೀನುಗಳಿಂದ ಕೂಡಿದ ಜಲಲೋಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಕರ್ನಾಟಕದ ಕಡಲ ತೀರ ಪ್ರದೇಶಗಳಲ್ಲಿ ಕಂಡುಬರುವ ಒಟ್ಟು 65 ಬಗೆಯ ಅಪರೂಪದ ಹಾಗೂ ಅಲಂಕಾರಿಕ ಮತ್ಸ್ಯಗಳನ್ನು ಒಂದೇ ವೇದಿಕೆಯಲ್ಲಿ ವೀಕ್ಷಿಸುವ ಅವಕಾಶ ಈ ಮೇಳದ ಪ್ರಮುಖ ಆಕರ್ಷಣೆಯಾಗಿದೆ.

ಮೀನುಗಳ ವೈವಿಧ್ಯತೆ, ಮಕ್ಕಳಿಗೆ ಕಲಿಕೆ, ಹಿರಿಯರಿಗೆ ಆನಂದ

ಗೋಲ್ಡ್ ಫಿಶ್, ಆಸ್ಕರ್ ಫಿಶ್, ಪಫರ್ ಫಿಶ್, ಬಾರ್ಮಸ್ ಸೇರಿದಂತೆ ವಿವಿಧ ತಳಿಯ ಅಲಂಕಾರಿಕ ಮೀನುಗಳು ತಮ್ಮದೇ ಆದ ಬಣ್ಣ, ಆಕಾರ ಹಾಗೂ ಚಲನೆಯೊಂದಿಗೆ ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಕಣ್ಣು ಮಿಟುಕಿಸದೆ ಮೀನುಗಳನ್ನು ನೋಡುತ್ತಿರುವ ಮಕ್ಕಳು, ಕುತೂಹಲದಿಂದ ಪ್ರಶ್ನೆಗಳನ್ನು ಕೇಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಈ ಮೇಳ ಮಕ್ಕಳಿಗೆ ಕೇವಲ ಮನರಂಜನೆಯಷ್ಟೇ ಅಲ್ಲ, ಮೀನುಗಳ ಹೆಸರು, ವಾಸಸ್ಥಾನ ಹಾಗೂ ಗುಣಲಕ್ಷಣಗಳನ್ನು ತಿಳಿದುಕೊಳ್ಳುವ ಕಲಿಕೆಯ ವೇದಿಕೆಯೂ ಆಗಿದೆ.

ಅಲಂಕಾರಿಕ ಮೀನು ಸಾಕಣೆಗೆ ಉತ್ತೇಜನ

ಮೇಳದ ಮತ್ತೊಂದು ವಿಶೇಷ ಅಂಶವೆಂದರೆ ಅಲಂಕಾರಿಕ ಮೀನು ಸಾಕಣೆಯ ಮಹತ್ವದ ಬಗ್ಗೆ ನೀಡಲಾಗುತ್ತಿರುವ ಮಾಹಿತಿ. ಇದರ ಆರ್ಥಿಕ ಸಾಧ್ಯತೆಗಳು, ಸ್ವ ಉದ್ಯೋಗವಾಗಿ ರೂಪಿಸಿಕೊಳ್ಳಬಹುದಾದ ಅವಕಾಶಗಳ ಕುರಿತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರು ಭೇಟಿ ನೀಡುವವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ವಿಶೇಷವಾಗಿ ಯುವಜನರು ಹಾಗೂ ರೈತರು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಗಮನಾರ್ಹ.

ಜಿಲ್ಲಾ ಉತ್ಸವಕ್ಕೆ ಹೆಚ್ಚುವರಿ ಕಳೆ: ಜಿಲ್ಲೆಯ ವಿವಿಧ ತಾಲೂಕುಗಳಷ್ಟೇ ಅಲ್ಲದೆ ಸುತ್ತಮುತ್ತಲ ಪ್ರದೇಶಗಳಿಂದಲೂ ಜನರು ಮೇಳವನ್ನು ವೀಕ್ಷಿಸಲು ಆಗಮಿಸುತ್ತಿದ್ದು, ಸಂಜೆ ವೇಳೆಗೆ ಜನಸಂದಣಿ ಹೆಚ್ಚಾಗುತ್ತದೆ. ಬಣ್ಣಬಣ್ಣದ ಮೀನುಗಳ ನಡುವೆ ನಿಂತು ಮೊಬೈಲ್‌ಗಳಲ್ಲಿ ಚಿತ್ರಗಳನ್ನು ಸೆರೆಹಿಡಿದು ನೆನಪುಗಳನ್ನು ಉಳಿಸಿಕೊಳ್ಳುವ ದೃಶ್ಯಗಳು ಉತ್ಸವದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

ಮನರಂಜನೆ, ಜ್ಞಾನ ಮತ್ತು ಉದ್ಯೋಗಾವಕಾಶಗಳ ಸಂದೇಶವನ್ನು ಒಂದೇ ಸಮಯದಲ್ಲಿ ನೀಡುತ್ತಿರುವ ಈ ಮತ್ಸ್ಯ ಮೇಳ, ರಾಯಚೂರು ಜಿಲ್ಲಾ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಗುರುತಿಸಿಕೊಂಡಿದ್ದು, ಉತ್ಸವದ ಸಂಭ್ರಮಕ್ಕೆ ವಿಶಿಷ್ಟ ಕಳೆ ನೀಡುತ್ತಿದೆ.

ಬಗೆಬಗೆಯ ಮೀನುಗಳು ಕಂಡು ಬೆರಗಾದ ಮಕ್ಕಳು: ಇಂದು ಮೊದಲ ದಿನಕ್ಕಿಂತ ದುಪ್ಪಟ್ಟಾಗಿ ಜನಸಾಗರವೇ ಹರಿದು ಬಂತು. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತಂಡೋಪತಂಡವಾಗಿ ಆಗಮಿಸಿದ್ದು ಕಂಡುಬಂತು. ಸರತಿ ಸಾಲಿನಲ್ಲಿ ನಿಂತು ಮತ್ಸ್ಯ ಮೇಳದ ಸೊಬಗು ಆನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News