ಢಾಕಾ: ಶೇಖ್ ಮುಜೀಬುರ್ರಹಮಾನ್ ಸ್ಮಾರಕ ಮ್ಯೂಸಿಯಂ ಧ್ವಂಸ
PC: x.com/airnewsalerts
ಢಾಕಾ: '24-ಎರ್ ಬಿಪ್ಲಬಿ ಛಾತ್ರಾ ಜನತಾ' ಹೆಸರಿನ ಸಂಘಟನೆಯ ಕಾರ್ಯಕರ್ತರು ಬುಧವಾರ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಫೇಸ್ಬುಕ್ ಲೈವ್ ಭಾಷಣದ ವೇಳೆ ಇಲ್ಲಿನ ಶೇಖ್ ಮುಜೀಬುರ್ರಹಮಾನ್ ಸ್ಮಾರಕ ಮ್ಯೂಸಿಯಂ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
ರಾತ್ರಿ 8 ಗಂಟೆಯ ಸುಮಾರಿಗೆ ಪ್ರತಿಭಟನಾಕಾರರು ಮ್ಯೂಸಿಯಂ ಆವರಣವನ್ನು ಪ್ರವೇಶಿಸಿ ವಸ್ತುಸಂಗ್ರಹಾಲಯವನ್ನು ಧ್ವಂಸಗೊಳಿಸಿದರು. ಅವಾಮಿ ಲೀಗ್ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ರಾಜಧಾನಿಯ ಧನ್ಮೊಂಡಿ ಪ್ರದೇಶದಲ್ಲಿರುವ ಮನೆಯ ಮುಂದೆ ಜಮಾಯಿಸಿದ ಸಾವಿರಾರು ಮಂದಿ, ಉದ್ದೇಶಿತ ಭಾಷಣದ ವಿರುದ್ಧ ಬುಲ್ಡೋಜರ್ ಮೆರವಣಿಗೆ ನಡೆಸಿದರು. ಇದೀಗ ವಿಸರ್ಜನೆಗೊಂಡಿರುವ ಅವಾಮಿ ಲೀಗ್ ನ ವಿದ್ಯಾರ್ಥಿ ಘಟಕ ಛಾತ್ರಾ ಲೀಗ್ ಮೂಲಕ ಹಸೀನಾ ಭಾಷಣ ಆಯೋಜಿಸಲಾಗಿತ್ತು.
ಶೇಖ್ ಹಸೀನಾ ಅವರ ಉದ್ದೇಶಿತ ಫೇಸ್ ಬುಕ್ ಲೈವ್ ಭಾಷಣವನ್ನು ಉಲ್ಲೇಖಿಸಿದ ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿಯ ಸಂಚಾಲಕ ರಾತ್ರಿ 7 ಗಂಟೆಯ ಸುಮಾರಿಗೆ ಫೇಸ್ ಬುಕ್ ಪೋಸ್ಟ್ನಲ್ಲಿ, "ಇಂದು ರಾತ್ರಿ ಬಾಂಗ್ಲಾದೇಶ ಫ್ಯಾಸಿಸಂ ಸಮಾಧಿಯಿಂದ ಮುಕ್ತವಾಗಲಿದೆ" ಎಂದು ಬಣ್ಣಿಸಿದ್ದರು.
ಶೇಖ್ ಹಸೀನಾ ತಮ್ಮ ಭಾಷಣದಲ್ಲಿ, "ನೀವು ಒಂದು ಕಟ್ಟಡವನ್ನು ಧ್ವಂಸಗೊಳಿಸಬಹುದು ಆದರೆ ನೀವು ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ" ಎಂದು ಹೇಳಿದರು. ವಿಮೋಚನೆಯ ಕದನದ ಸ್ಫೂರ್ತಿಯಿಂದ ಬಾಂಗ್ಲಾದೇಶ ಮತ್ತಷ್ಟು ಪ್ರಬಲವಾಗಲಿದೆ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.