×
Ad

ಗಾಝಾದಲ್ಲಿ ತಕ್ಷಣದ ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆಗೆ ಸಿಂಗಾಪುರ ಒತ್ತಾಯ

Update: 2024-11-02 11:02 IST

Photo : Reuters

ಸಿಂಗಾಪುರ : ಫೆಲೆಸ್ತೀನ್ ನಲ್ಲಿ ಇಸ್ರೇಲ್ ನರಮೇಧ ಮುಂದುವರಿಸಿರುವ ಹಿನ್ನೆಲೆ ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಮತ್ತು ಎಲ್ಲಾ ಒತ್ತೆಯಾಳುಗಳ ಬಿಡುಗಡೆಗೆ ಸಿಂಗಾಪುರ ಒತ್ತಾಯಿಸಿದೆ.

ಸಿಂಗಾಪುರದ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಇಸ್ರೇಲ್ ಸಂಸತ್ತು ಇತ್ತೀಚೆಗೆ ಅಂಗೀಕರಿಸಿದ ಶಾಸನದ ಬಗ್ಗೆ ಆಳವಾದ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತರ ಸಂಸ್ಥೆ UNRWAಗೆ ಇಸ್ರೇಲ್ ನಲ್ಲಿ ಮತ್ತು ಪೂರ್ವ ಜೆರುಸಲೆಮ್ ನಲ್ಲಿ ಕಾರ್ಯನಿರ್ವಹಿಸದಂತೆ ಇಸ್ರೇಲ್ ನಿಷೇಧವನ್ನು ಹೇರಿದೆ. ಅಕ್ಟೋಬರ್ 28ರಂದು ಈ ಕುರಿತು ಇಸ್ರೇಲ್ ಸಂಸತ್ತು ಅಂಗೀಕರಿಸಿದ ಮಸೂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಗಾಝಾದ ಜನರಿಗೆ ಪರಿಹಾರವನ್ನು ಒದಗಿಸುವಲ್ಲಿ ವಿಶ್ವಸಂಸ್ಥೆ ಏಜೆನ್ಸಿಗಳ ಅಗತ್ಯ ಕೆಲಸಕ್ಕೆ ಇದು ಅಡ್ಡಿಯಾಗುತ್ತದೆ ಎಂದು ಸಿಂಗಾಪುರ ಕೂಡ ಕಳವಳವನ್ನು ವ್ಯಕ್ತಪಡಿಸಿದೆ.

ಯುನಿಸೆಫ್, UNRWA ಮತ್ತು ಇತರ ವಿಶ್ವಸಂಸ್ಥೆ ಏಜೆನ್ಸಿಗಳು ಗಾಝಾದಲ್ಲಿ ಮಾನವೀಯ ನೆರವು ಕಾರ್ಯಾಚರಣೆ ನಡೆಸಿರುವುದನ್ನು ಸಿಂಗಾಪುರ ಶ್ಲಾಘಿಸುತ್ತದೆ. ಅಂತರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರಲು ನಾವು ಎಲ್ಲಾ ದೇಶಗಳನ್ನು ಒತ್ತಾಯಿಸುತ್ತೇವೆ. ಈ ಏಜೆನ್ಸಿಗಳ ಅಧಿಕಾರಿಗಳನ್ನು ನಾವು ಗೌರವಿಸುತ್ತೇವೆ. ಈಗಾಗಲೇ ನೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ UNRWA ಅಧಿಕಾರಿಗಳು ಕೂಡ ಪ್ರಾಣ ಕಳೆದು ಕೊಂಡಿದ್ದಾರೆ ಎಂದು ಡಾ ಬಾಲಕೃಷ್ಣನ್ ಅವರು ಹೇಳಿದ್ದಾರೆ.

ಇದೇ ವೇಳೆ RLAF ಮುಖ್ಯ ಕಾರ್ಯನಿರ್ವಾಹಕ ಅದ್ನಾನ್ ಅಬ್ದುಲ್ ಹಮೀದ್ ಮಾತನಾಡುತ್ತಾ, ಗಾಝಾದಲ್ಲಿನ ಮಕ್ಕಳು ಮತ್ತು ಕುಟುಂಬಗಳಿಗೆ ಆಹಾರ, ನೀರು ಮತ್ತು ವೈದ್ಯಕೀಯ ಸೌಲಭ್ಯಗಳಂತಹ ಅಗತ್ಯ ಪರಿಹಾರ ಸಾಮಗ್ರಿಗಳ ವಿತರಣೆಗೆ ಮಾನವೀಯ ನೆರವು ನೀಡುವುದನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News