ಗಾಝಾದಲ್ಲಿ ನರಮೇಧ ನಡೆಸಿದೆ ಎಂದು ಆರೋಪಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದ ಕದ ತಟ್ಟಿದ ದಕ್ಷಿಣ ಆಫ್ರಿಕಾ
Update: 2023-12-30 12:10 IST
Photo: PTI
ಹೊಸದಿಲ್ಲಿ: ಗಾಝಾದ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ವೇಳೆ ಇಸ್ರೇಲ್ ನರಮೇಧ ನಡೆಸಿದೆ ಎಂದು ಆರೋಪಿಸಿ ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಲಯದ ಕದವನ್ನು ದಕ್ಷಿಣ ಆಫ್ರಿಕಾ ತಟ್ಟಿದೆ.
ಇಸ್ರೇಲ್ ಅದಕ್ಕೆ ಆಕ್ಷೇಪಿಸಿ ಇದು ಯಹೂದಿಗಳ ವಿರುದ್ಧದ ಸುಳ್ಳು ಆರೋಪ (ಬ್ಲಡ್ ಲಿಬೆಲ್) ಎಂದು ಹೇಳಿದೆಯಲ್ಲದೆ ದಕ್ಷಿಣ ಆಫ್ರಿಕಾದ ಪ್ರಕರಣ ತಿರಸ್ಕರಿಸಬೇಕು ಎಂದು ಕೋರಿದೆ.
ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಇರುವ ಯಾವುದೇ ಪ್ರಕರಣ ಇತ್ಯರ್ಥಗೊಳ್ಳಲು ವರ್ಷಗಳೇ ತೆಗೆದುಕೊಳ್ಳುತ್ತಿವೆ. ಆದರೆ ಈ ಪ್ರಕರಣದ ವಿಚಾರಣೆಗೆ ಕೆಲವೇ ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಆಫ್ರಿಕಾ ಆಗ್ರಹಿಸಿದೆಯಲ್ಲದೆ ಕದನವಿರಾಮ ಘೋಷಿಸಲು ತಾತ್ಕಾಲಿಕ ಕ್ರಮಕೈಗೊಳ್ಳಬೇಕು ಎಂದು ಕೋರಿದೆ.
ಮಾರ್ಚ್ 2022ರಲ್ಲಿ ಆಂತಾರಾಷ್ಟ್ರೀಯ ನ್ಯಾಯಾಲಯವು ಉಕ್ರೇನ್ ವಿರುದ್ಧದ ಆಕ್ರಮಣ ನಿಲ್ಲಿಸುವಂತೆ ಸೂಚಿಸಿದ್ದರೂ ರಶ್ಯ ಅದನ್ನು ಕಡೆಗಣಿಸಿತ್ತು.