×
Ad

ಅಮೆರಿಕ–ಇರಾನ್ ಯುದ್ಧ: ಕಚ್ಚಾ ತೈಲ ಬೆಲೆ ಏರಿಕೆ; ವಿತ್ತೀಯ ಕೊರತೆ ಮಿತಿ ಮೀರುವ ಸಾಧ್ಯತೆ

Update: 2026-06-12 20:30 IST

ಸಾಂದರ್ಭಿಕ ಚಿತ್ರ | Photo Credit : magnific

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಇದರಿಂದ ದೇಶೀಯವಾಗಿ ಸಬ್ಸಿಡಿ ವೆಚ್ಚಗಳು ಹೆಚ್ಚುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ವಿತ್ತೀಯ ಕೊರತೆಯು ನಿಗದಿತ ಗುರಿಗಿಂತಲೂ ಅಧಿಕವಾಗಲು ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಈ ಬೆಳವಣಿಗೆಯ ಕುರಿತು ಮಾಹಿತಿ ಹೊಂದಿರುವ ಉನ್ನತ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದ್ದು, ಎಪ್ರಿಲ್ 1ರಿಂದ ಆರಂಭವಾಗಿರುವ ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯ ಗುರಿಯನ್ನು ಜಿಡಿಪಿಯ ಶೇ 4.3ರಷ್ಟು ಎಂದು ನಿಗದಿಪಡಿಸಲಾಗಿದೆ. ಆದರೆ ಸದ್ಯದ ಬಿಕ್ಕಟ್ಟಿನಿಂದಾಗಿ ಇದನ್ನು 50 ಮೂಲ ಅಂಕಗಳಷ್ಟು ಹೆಚ್ಚಿಸಿ, ಶೇ 4.8ರವರೆಗೆ ತಲುಪಲು ಸರ್ಕಾರ ಸಮ್ಮತಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಜಾಗತಿಕ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಹಾಗೂ ಇಂಧನ ದರ ಏರಿಕೆಯಿಂದ ಭಾರತದ ಸಾರ್ವಜನಿಕ ಹಣಕಾಸು ನಿರ್ವಹಣೆಯ ಮೇಲೆ ಬೀಳುತ್ತಿರುವ ಭಾರಿ ಒತ್ತಡವನ್ನು ಈ ಸಂಭಾವ್ಯ ನಿರ್ಧಾರವು ಎತ್ತಿ ತೋರಿಸುತ್ತದೆ.

ಭಾರತದ ವಿತ್ತೀಯ ಕೊರತೆಯ ಮೇಲೆ ಒತ್ತಡ ಏಕೆ?

ವಿಶ್ವದಲ್ಲೇ ಮೂರನೇ ಅತಿ ದೊಡ್ಡ ತೈಲ ಆಮದುದಾರ ಮತ್ತು ಬಳಕೆದಾರ ದೇಶವಾಗಿರುವ ಭಾರತ, ತನ್ನ ಕಚ್ಚಾ ತೈಲದ ಅಗತ್ಯತೆಯ ಶೇ 90ರಷ್ಟನ್ನು ವಿದೇಶಗಳಿಂದಲೇ ಪೂರೈಸಿಕೊಳ್ಳುತ್ತದೆ. ಹೀಗಾಗಿ ಇರಾನ್ ಸಂಘರ್ಷದಂತಹ ದೀರ್ಘಾವಧಿಯ ಜಾಗತಿಕ ಬಿಕ್ಕಟ್ಟುಗಳಿಂದ ಹೆಚ್ಚು ತೊಂದರೆಗೊಳಗಾಗುವ ದೇಶಗಳ ಸಾಲಿನಲ್ಲಿ ಭಾರತವೂ ಸೇರಿದೆ.

ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ‘ಹಾರ್ಮುಝ್ ಜಲಸಂಧಿ’ ಮುಚ್ಚಲ್ಪಟ್ಟಿರುವುದು ಪೂರೈಕೆ ಸರಪಳಿಯನ್ನು ಅಸ್ತವ್ಯಸ್ತಗೊಳಿಸಿದ್ದು, ಕಚ್ಚಾ ತೈಲದ ಬೆಲೆ ಏರಿಕೆಗೆ ಕಾರಣವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಾದ ಬೆನ್ನಲ್ಲೇ, ದೇಶೀಯ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸುಮಾರು ಶೇ 8ರಷ್ಟು ಹೆಚ್ಚಿಸಿವೆ. ಇದರೊಂದಿಗೆ, ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಸರ್ಕಾರವು ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಿದೆ.

ಕಚ್ಚಾ ತೈಲದ ದರ ಏರಿಕೆಯು ಕೇವಲ ಇಂಧನ ಕ್ಷೇತ್ರಕ್ಕೆ ಸೀಮಿತವಾಗದೆ, ರಸಗೊಬ್ಬರ ಸಬ್ಸಿಡಿಯ ಮೇಲೂ ಭಾರಿ ಪರಿಣಾಮ ಬೀರಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರಸಗೊಬ್ಬರ ಸಬ್ಸಿಡಿ ಬಿಲ್ ಸುಮಾರು ಶೇ 20ರಷ್ಟು ಹೆಚ್ಚಾಗಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಈ ಹಿಂದೆ ಹೇಳಿದ್ದರು.

ವಿತ್ತೀಯ ಕೊರತೆ ಎಂದರೇನು?

ಸರ್ಕಾರದ ಒಟ್ಟು ವೆಚ್ಚ ಮತ್ತು ಅದಕ್ಕೆ ಬರುವ ಒಟ್ಟು ಆದಾಯದ ನಡುವಿನ ವ್ಯತ್ಯಾಸವೇ ವಿತ್ತೀಯ ಕೊರತೆ. ಸರಳವಾಗಿ ಹೇಳುವುದಾದರೆ, ಸರ್ಕಾರದ ಆದಾಯಕ್ಕಿಂತ ವೆಚ್ಚ ಹೆಚ್ಚಾದಾಗ ಉಂಟಾಗುವ ಕೊರತೆಯನ್ನು ತುಂಬಲು ಸರ್ಕಾರ ಸಾಲ ಮಾಡಬೇಕಾಗುತ್ತದೆ.

ವಿತ್ತೀಯ ಕೊರತೆಯು ವಿಸ್ತರಿಸಿದರೆ ಸರ್ಕಾರದ ಸಾಲದ ಅಗತ್ಯತೆಗಳು ಹೆಚ್ಚಾಗುತ್ತವೆ. ಇದು ದೇಶದ ಸಾರ್ವಜನಿಕ ಹಣಕಾಸು ನಿರ್ವಹಣೆಯ ಯೋಜನೆಗಳ ಮೇಲೆ ನೇರ ಪರಿಣಾಮ ಬೀರಬಹುದು.

ಆದರೆ ಅಧಿಕಾರಿಗಳು ಸದ್ಯಕ್ಕೆ ಎಲ್ಲ ಆಯ್ಕೆಗಳನ್ನೂ ಮುಕ್ತವಾಗಿಟ್ಟಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ತೆರಿಗಿಯೇತರ ಆದಾಯದ ಸಂಗ್ರಹಣೆ ಮತ್ತು ಸಬ್ಸಿಡಿಯ ನಿಖರ ವೆಚ್ಚದ ಸ್ಪಷ್ಟ ಚಿತ್ರಣ ಸಿಕ್ಕ ಬಳಿಕ ಆರ್ಥಿಕ ಪರಿಸ್ಥಿತಿಯನ್ನು ಸರ್ಕಾರ ಮರುಪರಿಶೀಲಿಸಲಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.

ವೆಚ್ಚ ಕಡಿತಕ್ಕೆ ಸರ್ಕಾರದ ಚಿಂತನೆ

ವಿತ್ತೀಯ ಕೊರತೆಯು ಇನ್ನಷ್ಟು ಹೆಚ್ಚಾಗದಂತೆ ತಡೆಯಲು, ಸರ್ಕಾರವು ವಿವಿಧ ಸಚಿವಾಲಯಗಳ ಒಟ್ಟಾರೆ ವೆಚ್ಚದಲ್ಲಿ ಕಡಿತಗೊಳಿಸುವ ಸಾಧ್ಯತೆಯನ್ನೂ ಪರಿಗಣಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸದ್ಯಕ್ಕೆ ಈ ವಿಷಯದಲ್ಲಿ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಮುಂಬರುವ ದಿನಗಳಲ್ಲಿ ತೈಲ ಬೆಲೆಯ ಏರಿಳಿತ, ಸಬ್ಸಿಡಿ ಅಗತ್ಯತೆಗಳು ಮತ್ತು ಸರ್ಕಾರದ ಆದಾಯದ ಪ್ರವೃತ್ತಿಯನ್ನು ಸೂಕ್ಷ್ಮವಾಗಿ ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಭಾರತದಿಂದ ಸಾವಿರಾರು ಮೈಲು ದೂರದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಇಂಧನ ವೆಚ್ಚ ಮತ್ತು ಸಬ್ಸಿಡಿಗಳ ರೂಪದಲ್ಲಿ ದೇಶದ ಆರ್ಥಿಕತೆಯ ಮೇಲೆ ಹೇಗೆ ನೇರ ಹಾಗೂ ತೀವ್ರ ಪರಿಣಾಮ ಬೀರುತ್ತವೆ ಎಂಬುದಕ್ಕೆ ಈ ಬೆಳವಣಿಗಿಯೇ ಸಾಕ್ಷಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News