ನೇಪಾಳ | ಎರಡನೇ ದಿನವೂ ಮುಂದುವರಿದ ಹಿಂಸಾತ್ಮಕ ಪ್ರತಿಭಟನೆ : ಸಚಿವರ ನಿವಾಸಕ್ಕೆ ಬೆಂಕಿ, ಇಬ್ಬರು ಸಚಿವರು ರಾಜೀನಾಮೆ
ಸರ್ವಪಕ್ಷಗಳ ಸಭೆ ಕರೆದ ಪ್ರಧಾನಿ ಕೆಪಿ ಶರ್ಮಾ ಓಲಿ
Photo credit: PTI
ಕಠ್ಮಂಡು : ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿರುವುದಾಗಿ ಸರಕಾರ ಘೋಷಿಸಿದರೂ, ಎರಡನೇ ದಿನವಾದ ಮಂಗಳವಾರವೂ ನೇಪಾಳದಲ್ಲಿ ಪ್ರತಿಭಟನೆಗಳು ಮುಂದುವರಿದಿದೆ. ಈ ಮಧ್ಯೆ ಪ್ರಧಾನಿ ಕೆಪಿ ಶರ್ಮಾ ಓಲಿ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ.
ಪ್ರತಿಭಟನಾಕಾರರು ನೇಪಾಳ ಕಾಂಗ್ರೆಸ್ (NC) ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರ ನಿವಾಸವನ್ನು ಧ್ವಂಸಗೊಳಿಸಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ, ಕಠ್ಮಂಡುವಿನ ನೈಕಾಪ್ನಲ್ಲಿ ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ.
ಸೋಮವಾರ ನಡೆದ ತುರ್ತು ಸಂಪುಟ ಸಭೆಯಲ್ಲಿ ನೇಪಾಳ ಗೃಹ ಸಚಿವ ರಮೇಶ್ ಲೇಖಕ್ ಅವರು ಪ್ರಧಾನಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.
ʼಜೆನ್ ಝಡ್ʼ (ಯುವಜನರ) ನೇತೃತ್ವದ ಪ್ರತಿಭಟನೆ ಸಮಯದಲ್ಲಿ ಅತಿಯಾದ ಬಲಪ್ರಯೋಗ ಮತ್ತು ದಬ್ಬಾಳಿಕೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ರಾಜಕೀಯ ನಾಯಕರ ನಿವಾಸವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ನೇಪಾಳ ಜೆನ್ ಝಡ್ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ನೀರು ಸರಬರಾಜು ಸಚಿವ ಪ್ರದೀಪ್ ಯಾದವ್ ಮಂಗಳವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೆ 20 ಮಂದಿ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. 250ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಕೆಪಿ ಶರ್ಮಾ ಓಲಿ ಅವರನ್ನು ಪದಚ್ಯುತಗೊಳಿಸಬೇಕು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.