Aland | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ, ಎಐಟಿಯುಸಿ ಪಾದಯಾತ್ರೆ

Update: 2026-08-19 19:36 IST

ಆಳಂದ: ನಿಂಬರ್ಗಾ ಹೋಬಳಿ ಹಾಗೂ ಗ್ರಾಮಗಳ ವಿವಿಧ ಬಡಾವಣೆಗಳ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಹಾಗೂ ನಿಂಬರ್ಗಾ ವಲಯ ಕಟ್ಟಡ ಕಾರ್ಮಿಕ ಸಂಘಟನೆ (ಎಐಟಿಯುಸಿ) ಜಂಟಿ ವಲಯ ಸಮಿತಿ ವತಿಯಿಂದ ಬುಧವಾರ ಪಾದಯಾತ್ರೆ ನಡೆಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಿಪಿಐ ಹಾಗೂ ಎಐಟಿಯುಸಿ ರಾಷ್ಟ್ರೀಯ ಮಂಡಳಿಯ ಕರೆಯ ಮೇರೆಗೆ ಆ.6ರಿಂದ 31ರವರೆಗೆ ದೇಶಾದ್ಯಂತ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕಾಗಿ ಪಾದಯಾತ್ರೆ ಹಾಗೂ ಹೋರಾಟ ನಡೆಸಲಾಗುತ್ತಿದೆ. ಇದರ ಭಾಗವಾಗಿ ನಿಂಬರ್ಗಾ ಭಾಗದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ನಿಂಬರ್ಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡವರು ಹಾಗೂ ಕಟ್ಟಡ ಕಾರ್ಮಿಕರಿಗೆ ವಸತಿ ಕಲ್ಪಿಸಲು ಸರ್ಕಾರಿ ಜಮೀನು ಮೀಸಲಿಡಬೇಕು. ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವುದರ ಜತೆಗೆ ಮನೆ ನಿರ್ಮಾಣಕ್ಕೆ ಕನಿಷ್ಠ 5 ಲಕ್ಷ ರೂ. ಆರ್ಥಿಕ ನೆರವು ನೀಡಬೇಕು ಎಂದು ಮುಖಂಡರು ಆಗ್ರಹಿಸಿದರು.

ಕಳೆದ ನಾಲ್ಕೈದು ತಿಂಗಳಿಂದ ಸ್ಥಗಿತಗೊಂಡಿರುವ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಶೇಷಚೇತನರ ಪಿಂಚಣಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಪಿಂಚಣಿ ಮೊತ್ತವನ್ನು ಕನಿಷ್ಠ 3,000 ರೂ. ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ನಿಂಬರ್ಗಾ ಮುಖ್ಯ ರಸ್ತೆಯಲ್ಲಿರುವ ಕಂಬದ ದ್ವೀಪವನ್ನು ದುರಸ್ತಿ ಮಾಡಬೇಕು. ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣದವರೆಗೆ ಹಾಳಾಗಿರುವ ಚರಂಡಿಗಳನ್ನು ದುರಸ್ತಿ ಮಾಡಿ ಕೊಳಚೆ ನೀರು ರಸ್ತೆಗೆ ಹರಿಯದಂತೆ ಕ್ರಮ ಕೈಗೊಳ್ಳಬೇಕು. ನಿಂಬರ್ಗಾ ತಾಂಡಾದ ವಾರ್ಡ್ ನಂ.5ರಲ್ಲಿಯೂ ಚರಂಡಿ ಸ್ವಚ್ಛಗೊಳಿಸಿ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸಿ ಸಮರ್ಪಕ ನಿರ್ವಹಣೆಗೆ ವ್ಯವಸ್ಥೆ ಮಾಡಬೇಕು. ವಿವಿಧ ಬಡಾವಣೆಗಳು ಹಾಗೂ ಬುಳ್ಳನವರ ಓಣಿಯಲ್ಲಿ ಸಿಸಿ ರಸ್ತೆ ನಿರ್ಮಿಸಬೇಕು. ಜೈಭೀಮ ನಗರದ ಯಲ್ಲಮ್ಮ ಗುಡಿಯಿಂದ ಹಿತ್ತಲಶಿರೂರು ರಸ್ತೆಯವರೆಗೆ ಸಿಸಿ ರಸ್ತೆ ನಿರ್ಮಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನಿಂಬರ್ಗಾ ನಾಡ ಕಚೇರಿಯ ಆಧಾರ್ ಸೇವಾ ಕೇಂದ್ರ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಆಧಾರ್ ಸೇವಾ ಕೇಂದ್ರವನ್ನು ಪುನರಾರಂಭಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಭೀಮಾಶಂಕರ ಮಾಡಿಯಾಳ, ಯಲ್ಲಪ್ಪ ಎಸ್. ಕಟ್ಟಿಮನಿ, ಪ್ರಭುದೇವ ಯಳಸಂಗಿ, ಮೌಲಾ ಮುಲ್ಲಾ, ಯಂಕಪ್ಪ ಬನಪಟ್ಟಿ, ಬಸವರಾಜ ಅರ್ಜುಣಗಿ, ರಮೇಶ್ ರಾಠೋಡ್, ಜಗನ್ನಾಥ, ಶಿವಲಿಂಗಮ್ಮ ಲೇಂಗಟಿಕರ್, ಸೇರಿದಂತೆ ಸಿಪಿಐ ಹಾಗೂ ಎಐಟಿಯುಸಿ ಮುಖಂಡರು, ಕಾರ್ಯಕರ್ತರು ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News