Kalaburagi | ತುಳಸೀದಾಸರ ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿ, ಮಾನವೀಯ ಮೌಲ್ಯಗಳ ದರ್ಶನ : ಡಾ.ಅನುರಾಧಾ
ಕಲಬುರಗಿ: ಸಂತ ಗೋಸ್ವಾಮಿ ತುಳಸೀದಾಸರ ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ, ಭಕ್ತಿ ಹಾಗೂ ಮಾನವೀಯ ಮೌಲ್ಯಗಳ ಜೀವಂತ ದರ್ಶನವಾಗುತ್ತದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ನಿಕಟಪೂರ್ವ ಉಪನ್ಯಾಸಕಿ ಡಾ. ಅನುರಾಧಾ ಕುಲಕರ್ಣಿ ಹೇಳಿದರು.
ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗ ಹಾಗೂ ಅಖಿಲ ಭಾರತೀಯ ಹಿಂದಿ ಮಹಾಸಭಾ, ನವದೆಹಲಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಂತ ಗೋಸ್ವಾಮಿ ತುಳಸೀದಾಸರ 529ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ತುಳಸೀದಾಸರು ತಮ್ಮ ಸಾಹಿತ್ಯದ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ, ಭಕ್ತಿ, ಮಾನವೀಯ ಮೌಲ್ಯಗಳು ಹಾಗೂ ನೈತಿಕ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಮಹಾನ್ ಸಂತ-ಕವಿಯಾಗಿದ್ದಾರೆ. ಅವರ ‘ರಾಮಚರಿತಮಾನಸ’ ಕೇವಲ ಧಾರ್ಮಿಕ ಕೃತಿಯಲ್ಲ; ಭಾರತೀಯ ಜೀವನಮೌಲ್ಯಗಳು, ಸಾಮಾಜಿಕ ಆದರ್ಶಗಳು ಹಾಗೂ ಮಾನವೀಯ ಸಂಬಂಧಗಳ ಪ್ರತಿಬಿಂಬವಾಗಿದೆ ಎಂದು ವಿವರಿಸಿದರು.
ತುಳಸೀದಾಸರ ಸಾಹಿತ್ಯ ಶತಮಾನಗಳನ್ನು ದಾಟಿಯೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಅವರ ಚಿಂತನೆಗಳು ಇಂದಿನ ಯುವ ಪೀಳಿಗೆಗೆ ನೈತಿಕತೆ, ಕರ್ತವ್ಯಪ್ರಜ್ಞೆ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಆರ್.ಬಿ. ಕೊಂಡಾ ಮಾತನಾಡಿ, ಸಂತ ತುಳಸೀದಾಸರ ಸಾಹಿತ್ಯವು ಭಾರತೀಯ ಸಮಾಜದ ಮೇಲೆ ಆಳವಾದ ಪ್ರಭಾವ ಬೀರಿದೆ. ಅವರ ಸಾಹಿತ್ಯ ಹಾಗೂ ಚಿಂತನೆಗಳು ಇಂದಿನ ಪೀಳಿಗೆಯಲ್ಲಿಯೂ ಉತ್ತಮ ಜೀವನಮೌಲ್ಯಗಳನ್ನು ಬೆಳೆಸಲು ಪ್ರೇರಣೆಯಾಗಿವೆ ಎಂದರು.
ಹಿಂದಿ ವಿಭಾಗದ ಮುಖ್ಯಸ್ಥ ಡಾ. ಪ್ರೇಮಚಂದ ಚವ್ಹಾಣ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿ, ತುಳಸೀದಾಸರ ಜೀವನ, ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಕೊಡುಗೆಯನ್ನು ಪರಿಚಯಿಸಿದರು. ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ತುಳಸೀದಾಸರ ಸ್ಥಾನ ಮಹತ್ವದ್ದಾಗಿದ್ದು, ಅವರ ಕೃತಿಗಳು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ ಎಂದು ತಿಳಿಸಿದರು.
ಹಿಂದಿ ವಿಭಾಗದ ಉಪನ್ಯಾಸಕಿ ಕವಿತಾ ಠಾಕೂರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಷ್ಮಾ ಕುಲಕರ್ಣಿ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಹಿಂದಿ ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.