Kalaburagi | ಜೇವರ್ಗಿ, ಯಡ್ರಾಮಿ ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಲು ರೈತರ ಆಗ್ರಹ
ಕಲಬುರಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು. ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಕಳಪೆ ಕಾಮಗಾರಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಜೇವರ್ಗಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಮಾತನಾಡಿ, ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಳೆ ವಿಮೆಯಿಂದ ವಂಚಿತರಾಗಿರುವ ರೈತರಿಗೆ ತಕ್ಷಣ ವಿಮಾ ಹಣ ಬಿಡುಗಡೆ ಮಾಡಬೇಕು. ಎರಡೂ ತಾಲೂಕುಗಳ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಮರುಬಿತ್ತನೆಗೆ ಅಗತ್ಯವಿರುವ ಬೀಜ ಹಾಗೂ ರಸಗೊಬ್ಬರವನ್ನು ಉಚಿತವಾಗಿ ಒದಗಿಸಬೇಕು ಎಂದು ಆಗ್ರಹಿಸಿದರು.
ಬೆಳೆ ಕಟಾವು ಹಾಗೂ ಬೆಳೆ ವಿಮೆ ನಷ್ಟ ಪರಿಹಾರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ಏಳು ವರ್ಷದ ಇಳುವರಿ ಆಧಾರದಲ್ಲಿ ಪರಿಹಾರ ಲೆಕ್ಕ ಹಾಕುವ ಕ್ರಮ ಕೈಬಿಟ್ಟು, ಹಿಂದಿನ ನಿಯಮದಂತೆ ಬೆಳೆ ವಿಮೆ ಪರಿಹಾರ ನೀಡಬೇಕು. ರೈತರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಮಹಾರಾಷ್ಟ್ರದ ಪುಣೆ–ಉಜಿನಿ ಡ್ಯಾಂನಿಂದ ಕರ್ನಾಟಕದ ಜಲಾಶಯಗಳಿಗೆ 15 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಕಬ್ಬು ಕಟಾವಿಗೆ ಅಗತ್ಯವಿರುವ ಕೂಲಿ ಕಾರ್ಮಿಕರನ್ನು ರೈತರ ಹೊಲಗಳಿಗೆ ಕಳುಹಿಸಬೇಕು. ಕಟಾವು ಮಾಡಿದ ಕಬ್ಬಿನ ಹಣವನ್ನು ಕೂಡಲೇ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಮಲ್ಲಾಬಾದ್ ಏತ ನೀರಾವರಿ ಕಾಮಗಾರಿ ತನಿಖೆಗೆ ಆಗ್ರಹ :
ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಜೆಬಿಸಿ ಹಾಗೂ ಎಂಬಿಸಿ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಬಂಧಿತ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಿ, ಅವರ ಬಿಲ್ಗಳನ್ನು ತಡೆಹಿಡಿಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಳಪೆ ಕಾಮಗಾರಿ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನೆಲೋಗಿ ಶ್ರೀಗಳು, ಕಡಕೋಳ ಶ್ರೀಗಳು, ಚಿಗರಳ್ಳಿ ಶ್ರೀಗಳು, ಮಲ್ಲಣ್ಣಗೌಡ ಪಾಟೀಲ ಕೆಲ್ಲೂರ, ಪ್ರಶಾಂತ ಪಾಟೀಲ ಜೈನಾಪುರ, ಪಂಚಯ್ಯ ಹಿರೇಮಠ, ಪರಮೇಶ್ವರ ಬೀರಾಳ, ಬಿ.ಎಚ್. ಪಾಟೀಲ, ರವಿಚಂದ್ರ ಗುತ್ತೇದಾರ್, ಮಂಜುಳ ಭಜಂತ್ರಿ, ಸುಶೀಲಾ ಪೂಜಾರಿ, ಮಹಾದೇವಿ ಭಜಂತ್ರಿ, ಸಾಹೇಬಗೌಡ ಹಂಗರಗಿ, ಲಾಳೇಸಾಬ್ ಮನಿಯಾರ, ಸಿದ್ದಣ್ಣಗೌಡ ರಾಜವಾಳ, ರಿಯಾಜ ಪಟೇಲ, ಸಿದ್ದು ಯಂಕಚಿ, ಶರಣಗೌಡ ಪಾಟೀಲ ಬೆಳಮಗಿ, ಉಸ್ಮಾನ ಪಟೇಲ್, ಅನಿಲಕುಮಾರ ದೊಡಮನಿ, ಯಲ್ಲಾಲಿಂಗ ಹರನಾಳ, ರಮೇಶ್ ದೇವರಮನಿ, ಇಸ್ಮಾಯಿಲ್ ಭಗವಾನ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.