×
Ad

ಹೃದಯಾಘಾತಕ್ಕೆ ಕೋವಿಡ್ ಕಾರಣವಲ್ಲ, ಅನಗತ್ಯ ಭಯ ಬೇಡ: ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

Update: 2025-07-09 17:46 IST

ಕಲಬುರಗಿ: ಇತ್ತೀಚೆಗೆ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದರಿಂದ ಜನರಲ್ಲಿ ಹೃದಯದ ವಿಷಯದಲ್ಲಿ ಭಯದ ವಾತಾವರಣ ಮೂಡಿದೆ. ವಾಸ್ತವವಾಗಿ ಇದರ ಬಗ್ಗೆ ಅನಗತ್ಯ ಆತಂಕ ಪಡಬೇಕಿಲ್ಲ. ಇನ್ನು ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಅವರು ಸ್ಪಷ್ಟಪಡಿಸಿದ್ದಾರೆ.

ಬುಧವಾರ ಇಲ್ಲಿನ ಜಗತ್ ವೃತ್ತದಲ್ಲಿರುವ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಕಲಬುರಗಿ ಮತ್ತು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತ ಸಂಶೋಧನಾ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ ಪತ್ರಕರ್ತರಿಗೆ ಹೃದಯ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಐ.ಸಿ.ಎಂ.ಆರ್. ಸೇರಿದಂತೆ ಅನೇಕ ಸಂಸ್ಥೆಗಳು ಅಧ್ಯಯನ ಕೈಗೊಂಡಿದ್ದು, ಎಲ್ಲಿಯೂ ಕೋವಿಡ್ ಲಸಿಕೆಯಿಂದ ಹೃದಯಾಘಾತದ ಬಗ್ಗೆ ಪುರಾವೆ ಸಿಕ್ಕಿಲ್ಲ ಎಂದರು.

ಸಮಾಜದ ಸ್ವಾಸ್ಥಕ್ಕಾಗಿ ದಿನದ‌ 24 ಗಂಟೆ ಕಾರ್ಯನಿರ್ವಹಿಸುವ ಪತ್ರಕರ್ತರ ಅರೋಗ್ಯ ಕಾಳಜಿ ವಹಿಸುವ ಉದ್ದೇಶದಿಂದ ಕಲಬುರಗಿಯ ಜಯದೇವ ಆಸ್ಪತ್ರೆಯಿಂದ ಉಚಿತ ಹೃದ್ರೋಗ ಶಿಬಿರ ಆಯೋಜಿಸಿದ್ದು, ಇಲ್ಲಿ ಇ.ಸಿ.ಜಿ, 2ಡಿ ಎಕೋ, ಟಿ.ಎಂ.ಟಿ ತಪಾಸಣೆ ಮಾಡಲಾಗುತ್ತಿದೆ. ಇದರ ಲಾಭ ಪತ್ರಕರ್ತರು ಪಡೆಯಬೇಕು ಎಂದು ಅವರು ಮನವಿ ಮಾಡಿದರು.

ಮಿತ ಅಹಾರ ಸೇವನೆ, ವ್ಯಾಯಾಮ ಮಾಡಿ:

ಉತ್ತಮ ಅರೋಗ್ಯ ಕಾಪಾಡಿಕೊಳ್ಳಲು ಮಿತ ಆಹಾರ ಬಳಸಬೇಕು. ಪೌಷ್ಟಿಕಾಂಶವುಳ್ಳ ಅಹಾರ ಸೇವಿಸಬೇಕು. ತಂಬಾಕು ಉತ್ಪನ್ನ, ಮದ್ಯ ಸೇವನೆ ಬಿಡಬೇಕು. ವಿಶೇಷವಾಗಿ ಪಾಶ್ಚಿಮಾತ್ಯ ಶೈಲಿಯ ಆಹಾರಗಳಾದ ಪಿಝಾ, ಬರ್ಗರ್, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುವುದು ಬಿಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿನಿತ್ಯ ವ್ಯಾಯಾಮ, ಯೋಗಾಭ್ಯಾಸ, ಧ್ಯಾನ ಮಾಡಬೇಕೆಂದು ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಸಲಹೆ ನೀಡಿದರು.

ಕಲಬುರಗಿಯ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತ ಸಂಶೋಧನಾ ಆಸ್ಪತ್ರೆಯ ಮುಖ್ಯಸ್ಥ ಡಾ.ವೀರೇಶ ಪಾಟೀಲ ಮಾತನಾಡಿ, ಹೃದ್ರೋಗ ಬಗ್ಗೆ ಜನ ಅನಗತ್ಯ ಆತಂಕಗೊಳ್ಳಬೇಕಿಲ್ಲ. ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಸಾಕು. ಎಲ್ಲಾ ಎದೆ ನೊವು ಹಾರ್ಟ್ ಅಟ್ಯಾಕ್ ಅಲ್ಲ‌ ಎಂಬುದನ್ನು ಸಾರ್ವಜನಿಕರು ಮೊದಲು ಅರಿಯಬೇಕು ಎಂದ ಅವರು, ಕಲಬುರಗಿಯ ಜಯದೇವ ಆಸ್ಪತ್ರೆಯಲ್ಲಿ ಪ್ರತಿ ಶನಿವಾರ-ರವಿವಾರ ಹಂತ-ಹಂತವಾಗಿ ಪತ್ರಕರ್ತರನ್ನು ತಪಾಸಣೆ ಮಾಡಲಾಗುವುದು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತೀವ್ರ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸಂಘದ ಸುಮಾರು 600 ಸದಸ್ಯರಿಗೆ ಮುಂದಿನ ದಿನದಲ್ಲಿ ಪ್ರತಿ ಶನಿವಾರ, ರವಿವಾರ ಜಯದೇವ ಆಸ್ಪತ್ರೆಯಲ್ಲಿ ಹಂತ-ಹಂತವಾಗಿ ಉಚಿತವಾಗಿ ಹೃದ್ರೋಗ ಆರೋಗ್ಯ ತಪಾಸಣೆ ನಡೆಯಲಿದ್ದು, ಪತ್ರಕರ್ತರು ಇದರ ಸೌಲಭ್ಯ ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಬಡಶೇಷಿ, ಕಾರ್ಯದರ್ಶಿ ಅರುಣ ಕದಂ ಸೇರಿದಂತೆ ಪತ್ರಕರ್ತರ ಸಂಘದ ಅನೇಕ ಪದಾಧಿಕಾರಿಗಳು, ಪತ್ರಕರ್ತರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News