ಕಲಬುರಗಿ | ಕಟಾವಿಗೆ ಬಂದಿದ್ದ 10 ಎಕರೆ ಕಬ್ಬು ಬೆಂಕಿಗಾಹುತಿ : ಕಂಗಾಲಾದ ರೈತರು
ಕಲಬುರಗಿ : ಕಟಾವಿಗೆ ಬಂದಿದ್ದ 10 ಎಕರೆ ಕಬ್ಬು ಬೆಳೆ ಬೆಂಕಿ ಕೆನ್ನಾಲಿಗೆ ಆಹುತಿಯಾಗಿರುವ ಘಟನೆ ಕಾಳಗಿ ತಾಲೂಕಿನ ಹೊಸಳ್ಳಿ (ಎಚ್) ಗ್ರಾಮದಲ್ಲಿ ನಡೆದಿದೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಗುರುವಾರ ಮಧ್ಯಾಹ್ನ ಅದೇ ಗ್ರಾಮದ ಶ್ರೀದೇವಿ ಲಕ್ಷಮಯ್ಯ ಗುತ್ತೇದಾರ ಅವರ ಹೊಲದ ಕಬ್ಬಿಗೆ ಬೆಂಕಿ ಹೊತ್ತಿಕೊಂಡಿದೆ, ಇದಾದ ಬಳಿಕ ಪಕ್ಕದ ಮೋತಿಬಾಯಿ ಜೇನು, ಹಾಗೂ ಲಕ್ಷ್ಮಣ ಧನಸಿಂಗ ಅವರ ಹೊಲಕ್ಕೂ ಬೆಂಕಿ ಹರಡಿದ ಪರಿಣಾಮ ಒಟ್ಟು 10 ಎಕರೆಯಷ್ಟು ಕಬ್ಬು ಸುಟ್ಟು ಕರಕಲಾಗಿದೆ.
ಪ್ರತಿ ಎಕರೆಗೆ 50 ಟನ್ ಕಬ್ಬು ಸಾಮರ್ಥ್ಯ ದಂತೆ ಸುಮಾರು 10 ಎಕರೆಯ 500 ಟನ್ ಗೂ ಹೆಚ್ಚು ಕಬ್ಬು ಸುಟ್ಟು ಕರಕಲಾಗಿದ್ದು, ಒಟ್ಟು 10 ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬು ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಕೊನೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದ ತಗುಲಿದ ಬೆಂಕಿಯಿಂದ ನಮ್ಮ 3 ಎಕರೆ ಕಬ್ಬು ಬೆಂಕಿಗಾಹುತಿಯಾಗಿದ್ದು, ಸುಮಾರು 150 ಟನ್ ಕಬ್ಬು ನಮ್ಮ ಕಣ್ಣೆದುರೆ ಬೆಂಕಿಯ ಪಾಲಾಗಿದೆ. ಆದಷ್ಟು ಬೇಗ ಪರಿಹಾರ ನೀಡಬೇಕು.
- ಶ್ರೀದೇವಿ ಲಕ್ಷಮಯ್ಯ (ರೈತ ಮಹಿಳೆ, ಹೊಸಳ್ಳಿ ಗ್ರಾಮ)