ಕಲಬುರಗಿ | ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ
ಕಲಬುರಗಿ: ಅಗತ್ಯ ಮೂಲಭೂತ ಸೌಲಭ್ಯಗಳು ಒದಗಿಸುವಂತೆ ಒತ್ತಾಯಿಸಿ ನಗರದ ವಾರ್ಡ್ ನಂ.31 ರ ಓಂ ನಗರ ಬಡಾವಣೆ ನಿವಾಸಿಗಳು, ಶಾಸಕಿ ಖನೀಜ್ ಫಾತೀಮಾ, ಕಾಂಗ್ರೆಸ್ ಮುಖಂಡರಾದ ಫರಾಜ್ ಉಲ್ ಇಸ್ಲಾಂ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ನಾಲ್ಕು ದಶಕಗಳಿಂದ ಬಡಾವಣೆಯಲ್ಲಿ ರಸ್ತೆ ನಿರ್ಮಾಣವಾಗಿಲ್ಲ, ವಾಹನ ಸವಾರರು ಪರದಾಡುವಂತಾಗಿದ್ದು, ಕೂಡಲೇ ಸಿಸಿ ರಸ್ತೆ ನಿರ್ಮಾಣ ಮಾಡಲು ಮಂಜೂರಾತಿ ನೀಡಿ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿದರು.
ಶಾಸಕಿ ಖನೀಜ್ ಫಾತೀಮಾ ಹಾಗೂ ಕಾಂಗ್ರೆಸ್ ಮುಖಂಡರಾದ ಫರಾಜ್ ಉಲ್ ಇಸ್ಲಾಂ ಅವರು ಓಂ ನಗರ ಬಡಾವಣೆಯಲ್ಲಿ ಖುದ್ದಾಗಿ ಭೇಟಿ ನೀಡಿ ಕುಂದು ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅತಿ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಇದೇ ವೇಳೆಯಲ್ಲೇ ತಿಳಿಸಿದರು.
ಅದರಂತೆ ಬಡಾವಣೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದು, 24/7 ನೀರಿನ ಸರಬರಾಜು ವ್ಯವಸ್ಥೆ, ಗುರುಕುಲ ಶಾಲೆಯಿಂದ ವಿರೇಂದ್ರ ಪಾಟೀಲ್ ನಿವಾಸದವರೆಗೆ ಒಳಚರಂಡಿ ಮತ್ತು ರಸ್ತೆ ಎರಡೂ ಬದಿಗಳಲ್ಲಿ ನಾಲೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರಾದ ವೀರಕುಮಾರ ಮಾಲಿಪಾಟೀಲ್, ಶಿವಯೋಗಪ್ಪಾ, ನಾಗೇಂದ್ರಪ್ಪ, ಮಲ್ಲಿಕಾರ್ಜುನ, ಜಯಪ್ರಕಾಶ, ಅಂಬಾಜಿ, ವಿಠಲ್ ಪೂಜಾರಿ, ಸುನೀಲಕುಮಾರ, ಶಿವರಾಜ, ಪ್ರಭಾಕರ್ ಸೇರಿದಂತೆ ಇತರರು ಇದ್ದರು.