ಕಲಬುರಗಿ | ಮದ್ಯವಸನಿಗಳಾದಲ್ಲಿ ಭವಿಷ್ಯದ ಕನಸಿಗೆ ಕೊಳ್ಳಿ ಇಟ್ಟಂತೆ : ಬಿ.ಫೌಝಿಯಾ ತರನ್ನುಮ್
ಕಲಬುರಗಿ : ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿ ಸಮುದಾಯವು ಮದ್ಯ ಮತ್ತು ಮಾದಕ ವಸ್ತುಗಳಂತಹ ದುಶ್ಚಟಗಳಿಗೆ ಬಲಿಯಾದಲ್ಲಿ ನಿಮ್ಮ ಭವಿಷ್ಯದ ಕನಸುಗಳಿಗೆ ನೀವೆ ಕೊಳ್ಳಿ ಇಟ್ಟಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು.
ಕಲಬುರಗಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಕಲಬುರಗಿ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಡಾ.ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ ʼಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮʼ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷಾರ್ಥವಾಗಿಯೂ ಒಮ್ಮೆನೂ ಈ ಮದ್ಯದ ವಸ್ತುಗಳನ್ನು ಬಳಸಬೇಡಿ ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಮದ್ಯವ್ಯಸನಿಗಳಾದಲ್ಲಿ ಸಾಮಾಜಿಕವಾಗಿ ವ್ಯಕ್ತಿಗತ ಗೌರವ, ಘನತೆ ಕಳೆದುಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಆರ್ಥಿಕವಾಗಿ ಸಮಸ್ಯೆ ಎದುರಿಸಬೇಕಾದ ಅನಿವಾರ್ಯತೆ ಒದಗಿಬರುತ್ತದೆ. ಹೀಗಾಗಿ ಇಂತಹ ಮದ್ಯ ಮತ್ತು ಮಾದಕ ವಸ್ತುಗಳಿಂದ ದೂರ ಇರುವುದರ ಜೊತೆಗೆ ಸಹಪಾಠಿ, ಪಾಲಕರು, ಬಂಧು-ಮಿತ್ರರಿಗೆ ಅರಿವು ಮೂಡಿಸುವ ಜವಾಬ್ದಾರಿ ವಿದ್ಯಾರ್ಥಿ ಸಮುದಾಯದ ಮೇಲಿದೆ ಎಂದರು.
ಕಳೆದ ಜನವರಿ ಮತ್ತು ಫೆಬ್ರವರಿ ಮಾಹೆಯಲ್ಲಿ ಕಲಬುರಗಿ ನಗರ ವ್ಯಾಪ್ತಿಯಲ್ಲಿಯೇ 200 ಡ್ರಗ್ಸ್ ಪ್ರಕರಣಗಳು ದಾಖಲಾಗಿವೆ. ಹಿಂದೆಲ್ಲ ಬೆಂಗಳೂರು, ಮುಂಬೈ, ಚೆನ್ನೈ, ಹೈದ್ರಾಬಾದ, ದಿಲ್ಲಿದಂತಹ ಮೆಟ್ರೋ ನಗರದಲ್ಲಿದ್ದ ಈ ಮಾಯಾಜಾಲದ ಲೋಕ ನಿಧಾನವಾಗಿ ಟೈರ್-2 ಸಿಟಿಗಳಿಗೂ ತಲುಪಿದೆ. ಅಚ್ಚರಿಯೆಂದರೆ 18-30 ವಯಸ್ಸಿನ ಯುವ ಸಮುದಾಯ ಬಲಿಯಾಗುತ್ತಿರುವ ತುಂಬಾ ಖೇದಕರ ಸಂಗತಿ ಎಂದರು.
ಯಾವುದೇ ವ್ಯಕ್ತಿ ಮದ್ಯ ಚಟಕ್ಕೆ ಬಲಿಯಾದಲ್ಲಿ ಆತನ ಜೊತೆಗೆ ಇಡೀ ಕಟುಂಬ ಬೀದಿಗೆ ಬರಬೇಕಾಗುತ್ತದೆ. ಸಮಯ, ಸನ್ನಿವೇಶ, ಕೆಟ್ಟ ಸ್ನೇಹಿತರ ಸಹವಾಸದಿಂದ ಒಮ್ಮೆ ಮಾಯಾ ಲೋಕಕ್ಕೆ ಎಂಟ್ರೀ ಕೊಟ್ಟರೆ ಹಿಂದಿರುಗುವುದು ವಿರಳ. ಹೀಗಾಗಿ ಯುವ ಸಮುದಾಯ ಇದಕ್ಕೆ ಬಲಿಯಾಗಬಾರದು ಕರೆ ನೀಡಿದ ಅವರು, ಯಾರೇ ಡ್ರಗ್ಸ್ ಸೇವನೆ ಮಾಡಿದಲ್ಲಿ ಅಂತಹವರ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದ್ದು, ಇಂತಹ 100 ಕೇಸ್ ಫೈಲ್ ಮಾಡಲಾಗಿದೆ ಎಂದ ಅವರು, ಮದ್ಯ ಮತ್ತು ಮಾದಕ ಮುಕ್ತ ಕರ್ನಾಟಕ್ಕಾಗಿ ಎಲ್ಲರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮನೋವೈದ್ಯ ಡಾ.ಮುಹಮ್ಮದ್ ಇರ್ಫಾನ್ ಮಹಾಗಾವಿ ಅವರು ತಮ್ಮ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಾ, ಸಿಗರೇಟ್, ತಂಬಾಕು, ಗುಟಕಾ, ಮದ್ಯ ಸೇವನೆಯಿಂದ ಮಾನಸಿಕ ನೆಮ್ಮದಿ ಹಾಳು ಹಾಳಾಗುವುದಲ್ಲದೆ ಶಾರೀರಿಕವಾಗಿಯೂ ಹಾನಿ ಮಾಡುತ್ತದೆ. ಬುದ್ದಿ ಭ್ರಮಣೆಯಾಗುತ್ತದೆ. ಹಣ ಕೊಟ್ಟು ಮಾದಕ ವಸ್ತುಗಳನ್ನು ಖರೀದಿಸಿ ಅದರಿಂದ ಕಾಯಿಲೆ ತರಿಸಿಕೊಳ್ಳುವುದು ಬೇಕಾ? ಎಂದು ಪ್ರಶ್ನಿಸಿದ ಅವರು, ಒಮ್ಮೆ ಕ್ಯಾನ್ಸರ್ ಕಾಯಿಲೆ ಬಂದರೆ ಅದನ್ನು ಗುಣಪಡಿಸಲು ಇಂದಿನ ದಿನಮಾನದಲ್ಲಿ 5-7 ಲಕ್ಷ ರೂ. ವೆಚ್ಚ ಮಾಡಬೇಕಾಗುತ್ತದೆ. ಹೀಗೆ ದುಶ್ಚಟದಿಂದ ಆರ್ಥಿಕ ದಿವಾಳಿಗೂ ಕಾರಣವಾಗುತ್ತದೆ ಎಂದರು.
ಮದ್ಯ ವ್ಯಸನಿಗಳಿಗೆ ಭ್ರಮ ಲೋಕದಿಂದ ಹೊರತರಲು ಆಪ್ತ ಸಮಾಲೋಚನೆ ತುಂಬಾ ಅವಶ್ಯಕವಾಗಿದೆ. ಜಿಲ್ಲೆಯ ಜಿಮ್ಸ್, ಇ.ಎಸ್.ಐ.ಸಿ., ಕೆ.ಬಿ.ಎನ್, ಬಸವೇಶ್ವರ ಆಸ್ಪತ್ರೆಯಲ್ಲಿ ಮನೋವೈದ್ಯರಿದ್ದು, ಮದ್ಯವ್ಯಸನಿಗಳಿಗೆ ಇಲ್ಲಿಗೆ ಕರೆತಂದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಅವರನ್ನು ಚಟದಿಂದ ವಿಮುಖ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಮಾದಕ ವಸ್ತುದಂತಹ ದುಶ್ಚಟಕ್ಕೆ ಬಲಿಯಾಗಬಾರದು. ಇತರೆ ರಾಜ್ಯಗಳಂತೆ ಇಲ್ಲಿಯೂ ಸಹ ಗುಟಕಾ, ತಂಬಾಕು ಬ್ಯಾನ್ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಸ್ವಾಗತಿಸಿದರು. ಕಾಲೇಜಿನ ಸಾಂಸ್ಕೃತಿಕ ಸಂಚಾಲಕ ಡಾ.ಬಲಭೀಮ ಸಾಂಗ್ಲಿ ನಿರೂಪಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಸುರೇಶ ಮಾಳೆಗಾಂವ ವಂದಿಸಿದರು.
ಇದೇ ಸಂದರ್ಭದಲ್ಲಿ ಲೋಹಿಯಾ ಕಲಾ ತಂಡದಿಂದ ಬೀದಿ ನಾಟಕ ಮೂಲಕ ಮದ್ಯಪಾನದಿಂದಾಗುವ ದುಷ್ಪರಿಣಾಮ ಕುರಿತು ಜನ ಜಾಗೃತಿ ಮೂಡಿಸಲಾಯಿತು. ಆರೋಗ್ಯ ಇಲಾಖೆಯಿಂದ ವಿಶೇವಾಗಿ ಮಳಿಗೆ ತೆರೆದು ವಿವಿಧ ಪೋಸ್ಟರ್ಗಳ ಪ್ರದರ್ಶನ ಮೂಲಕ ವಿದ್ಯಾರ್ಥಿಗಳಲ್ಲಿ ಮದ್ಯಪಾನ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.