ಕಲಬುರಗಿ | ಸಿಯುಕೆ ಪ್ರಾಧ್ಯಾಪಕ ಡಾ. ಪಿ. ಕುಮಾರ್ ಮಂಗಲಗೆ ಸ್ಪೇನ್ ಸರಕಾರದ ಪ್ರತಿಷ್ಠಿತ ‘ಹಿಸ್ಪಾನೆಕ್ಸ್’ ಅಂತಾರಾಷ್ಟ್ರೀಯ ಸಂಶೋಧನಾ ಅನುದಾನ
ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ), ಕಡಗಂಚಿ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಸ್ಪ್ಯಾನಿಷ್ ಭಾಷೆಯ ಸಹಾಯಕ ಪ್ರಾಧ್ಯಾಪಕ ಡಾ. ಪಿ. ಕುಮಾರ್ ಮಂಗಲ ಅವರಿಗೆ 2026–27ನೇ ಶೈಕ್ಷಣಿಕ ವರ್ಷದ ಸ್ಪೇನ್ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ನೀಡಲಾಗುವ ಪ್ರತಿಷ್ಠಿತ ‘ಹಿಸ್ಪಾನೆಕ್ಸ್’ ಅಂತರರಾಷ್ಟ್ರೀಯ ಸಂಶೋಧನಾ ಅನುದಾನ ಲಭಿಸಿದೆ.
ಸ್ಪ್ಯಾನಿಷ್ ಭಾಷೆ, ಸಾಹಿತ್ಯ ಹಾಗೂ ಹಿಸ್ಪಾನಿಕ್ ಅಧ್ಯಯನಗಳ ಉತ್ತೇಜನಕ್ಕಾಗಿ ನೀಡಲಾಗುವ ಈ ಅನುದಾನವು ಅತ್ಯಂತ ಸ್ಪರ್ಧಾತ್ಮಕ ಸಂಶೋಧನಾ ಯೋಜನೆಗಳಲ್ಲಿ ಒಂದಾಗಿದ್ದು, ಈ ಬಾರಿ ವಿಶ್ವದ ವಿವಿಧ ದೇಶಗಳಿಂದ ಬಂದ ಅನೇಕ ಅರ್ಜಿಗಳ ಪೈಕಿ ಕೇವಲ 15 ಯೋಜನೆಗಳು ಮಾತ್ರ ಆಯ್ಕೆಯಾಗಿವೆ. ಅವುಗಳಲ್ಲಿ ಭಾರತದಿಂದ ಆಯ್ಕೆಯಾದ ಎರಡು ಯೋಜನೆಗಳಲ್ಲಿ ಡಾ. ಕುಮಾರ್ ಮಂಗಲ ಅವರ ಯೋಜನೆಯೂ ಒಂದಾಗಿದೆ ಎಂಬುದು ವಿಶೇಷವಾಗಿದೆ.
ಈ ಸಾಧನೆಯು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಗುರುತನ್ನು ತಂದುಕೊಟ್ಟಿದೆ.
ಡಾ. ಕುಮಾರ್ ಮಂಗಲ ಅವರ ಸಂಶೋಧನಾ ಯೋಜನೆಯು ಕನ್ನಡದ 12ನೇ ಶತಮಾನದ ಶರಣೆ ಅಕ್ಕ ಮಹಾದೇವಿ ಸೇರಿದಂತೆ ವಚನಕಾರರ ಸಾಹಿತ್ಯ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಮಧ್ಯಕಾಲೀನ ಸ್ಪೇನ್ನ ಪ್ರಸಿದ್ಧ ಸಂತ–ಕವಯತ್ರಿ ಸಾಂತಾ ತೆರೇಸಾ ಡಿ ಅವಿಲಾ ಅವರ ಸಾಹಿತ್ಯ ಹಾಗೂ ಆಧ್ಯಾತ್ಮಿಕ ವಿಚಾರಗಳೊಂದಿಗೆ ತುಲನಾತ್ಮಕವಾಗಿ ಅಧ್ಯಯನ ಮಾಡುವುದನ್ನು ಒಳಗೊಂಡಿದೆ.
ಈ ಸಂಶೋಧನೆಯು ಭಾರತ ಮತ್ತು ಸ್ಪೇನ್ ದೇಶಗಳ ಸಾಹಿತ್ಯ ಹಾಗೂ ಆಧ್ಯಾತ್ಮಿಕ ಪರಂಪರೆಗಳ ನಡುವೆ ಹೊಸ ಸಾಂಸ್ಕೃತಿಕ ಸಂವಾದವನ್ನು ನಿರ್ಮಿಸುವ ನಿರೀಕ್ಷೆಯಿದ್ದು, ಜಾಗತಿಕ ವಿದ್ವತ್ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಲಿದೆ.
ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್, ಮಾನವಿಕ ಮತ್ತು ಭಾಷಾ ವಿಭಾಗದ ಡೀನ್ ಪ್ರೊ. ವಿಕ್ರಮ್ ವಿಸಾಜಿ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಪಿ. ಡೋಣೂರ, ಬಸವ ಪೀಠದ ಸಂಯೋಜಕ ಡಾ. ಗಣಪತಿ ಸಿನ್ನೂರ್ ಹಾಗೂ ಬಸವ ಸಮಿತಿಯ ಶ್ರೀ ಅರವಿಂದ್ ಜತ್ತಿ ಸೇರಿದಂತೆ ಹಲವರು ಪ್ರಾಧ್ಯಾಪಕರ ಸಾಧನೆಯನ್ನು ಅಭಿನಂದಿಸಿದ್ದಾರೆ.