×
Ad

ಜು. 19ಕ್ಕೆ ಶಿಕ್ಷಕರ ಸಾಹಿತ್ಯ ಸಮ್ಮೇಳನ : ಸಮ್ಮೇಳನಾಧ್ಯಕ್ಷರಾಗಿ ರಾಜೇಂದ್ರ ಝಳಕಿ ಆಯ್ಕೆ

Update: 2026-07-03 21:38 IST

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಹಾಗೂ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಸಾರಥ್ಯದಲ್ಲಿ ಜುಲೈ 19 ರಂದು ನಗರದ ಕನ್ನಡ ಭವನದಲ್ಲಿ ನಡೆಯುವ ಒಂದು ದಿನದ ಕಲಬುರಗಿ ಜಿಲ್ಲಾ ಪ್ರಥಮ ಶಿಕ್ಷಕರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಶಿಕ್ಷಕ, ಸಾಹಿತಿ ರಾಜೇಂದ್ರ ಕೋರಬಾ ಝಳಕಿ ಅವರು ಆಯ್ಕೆ ಯಾಗಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಇಂದಿನ ಸಮಾಜಕ್ಕೆ ಶಿಕ್ಷಕರು ಸದಾ ಮುಂಚೂಣಿಯಲ್ಲಿದ್ದುಕೊoಡು ಕಾರ್ಯನಿರ್ವಹಿಸುತ್ತಿರುತ್ತಾರೆ. ಇಂಥ ಶಿಕ್ಷಕರಲ್ಲಿನ ಕಲೆ, ಸಾಹಿತ್ಯ, ಸಂಗೀತ ಹೀಗೆ ವಿಶೇಷ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯನ್ನು ಈ ಸಮ್ಮೇಳನ ನೀಡುತ್ತಲಿದೆ ಎಂದು ತಿಳಿಸಿದ ಅವರು, ಈ ಸಮ್ಮೇಳನ ಯಶಸ್ವಿಗೆ ಸರ್ವರೂ ಸಹಕರಿಸಬೇಕೆಂದು ಕೋರಿದ್ದಾರೆ. ಅನೇಕ ಪ್ರಥಮ ಸಮ್ಮೇಳನಗಳಿಗೆ ಜಿಲ್ಲೆಯಲ್ಲಿ ಪರಿಷತ್ತು ಹೆಸರುವಾಸಿಯಾಗಿದೆ ಅವರು ಅಭಿಪ್ರಾಯಪಟ್ಟಿದ್ದಾರೆ.

ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರಾಗಿರುವ ರಾಜೇಂದ್ರ ಕೋರಬಾ ಝಳಕಿ ಅವರು ಪ್ರವೃತ್ತಿಯಿಂದ ಸಾಹಿತಿಗಳಾಗಿ ಹಿರಿಯ ಸಾಹಿತಿಗಳಾದ ಪ್ರೊ. ವಸಂತ ಕುಷ್ಠಗಿ ಹಾಗೂ ಡಾ. ಸ್ವಾಮಿರಾವ ಕುಲಕರ್ಣಿ ಅವರ ಪ್ರೇರಣಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅವರು, ಆಳಂದ ತಾಲೂಕಿನ ಝಳಕಿ (ಬಿ) ಗ್ರಾಮದವರು.

ಕೋರಾ ಎಂಬ ಕಾವ್ಯ ನಾಮ, ಚಂದ್ರರಾಜ ಎಂಬ ವಚನಾಂಕಿತದಿoದ ಜಿಲ್ಲೆಯಲ್ಲಿ ಗುರುತಿಸಿಕೊಂಡ ಇವರು, ಕಲ್ಲರಳಿನ ಕರುಳು, ಚಿಗುರು ಚೇತನ, ಬೆಳಸುಗಳು, ತಾತಾ ಎಂಬ ನಾತ ಎಂಬ ನಾಟಕ ಕೃತಿ. ಅಕ್ಷರ ಅರಿವು ಮಕ್ಕಳ ಸಾಹಿತ್ಯ ಕೃತಿ, ನೀಲಕಂಠ ಅಭಿನಂದನಾ ಗ್ರಂಥ ಹೀಗೆ ಅನೇಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಚಂದ್ರರಾಜ ಎನ್ನುವ ವಚನಾಂಕಿತದಲ್ಲಿ ಸುಮಾರು 300 ಕ್ಕಿಂತ ಹೆಚ್ಚು ಆಧುನಿಕ ವಚನಗಳು ರಚಿಸಿದ್ದಾರೆ. ಅನೇಕ ಜನಮುಖಿ ಲೇಖನಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಕ್ಕಳಲ್ಲಿ ಜಾನಪದ ಸಾಹಿತ್ಯ ಅರಿವು ಮೂಡಿಸುವಲ್ಲಿ ಅನೇಕ ಜನಪದ ಹಾಡುಗಳನ್ನು ಹಾಡುವ ಮೂಲಕ ತಾವೊಬ್ಬ ಜನಪದ ಕವಿ ಎಂದೂ ಗುರುತಿಸಿಕೊಂಡಿದ್ದಾರೆ.

ಕನ್ನಡ ರತ್ನ, ಕಲ್ಯಾಣ ಕರ್ನಾಟಕ ಸಾಧಕ ಶಿಕ್ಷಕ ಪ್ರಶಸ್ತಿ, ರಾಷ್ಟ್ರೀಯ ಬಸವ ರತ್ನ, ಕವಿ ಶ್ರೇಷ್ಠ ಪ್ರಶಸ್ತಿ ಹೀಗೆ ಅನೇಕ ಜಿಲ್ಲೆ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಸಹ ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಎಂದು ವಿಜಯಕುಮಾರ ತೇಗಲತಿಪ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News