ಕಲಬುರಗಿ | ರಸಗೊಬ್ಬರ ತರಲು ಹೋದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಕೊಲೆ ಆರೋಪಿಸಿದ ಕುಟುಂಬಸ್ಥರು
Update: 2026-07-03 22:04 IST
ಕಲಬುರಗಿ: ರಸಗೊಬ್ಬರ ತರಲು ಕಲಬುರಗಿ ನಗರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಅಫಜಲಪುರ ತಾಲೂಕಿನ ಹಾವನೂರು ಗ್ರಾಮದ ಸಮೀಪ ನಡೆದಿದೆ.
ಮೃತರನ್ನು ಹಾವನೂರು ಗ್ರಾಮದ ಶಿವಕುಮಾರ್ ಹೊಸಮನಿ (35) ಎಂದು ಗುರುತಿಸಲಾಗಿದೆ.
ಮೃತ ಶಿವಕುಮಾರ್ ಅವರು ಜೂನ್ 30ರಂದು ಡಿಎಪಿ ರಸಗೊಬ್ಬರ ತರಲು ಕಲಬುರಗಿ ನಗರಕ್ಕೆ ತೆರಳಿದ್ದರು. ಆದರೆ ಮನೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಅಶೋಕನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಬಗ್ಗೆ ದೂರು ದಾಖಲಿಸಿದ್ದರು.
ಬಳಿಕ ಜುಲೈ 3ರಂದು ಮಧ್ಯಾಹ್ನ ಹಾವನೂರು ಗ್ರಾಮದ ಸಮೀಪ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಕುಟುಂಬಸ್ಥರು ಕೊಲೆ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.