Kalaburagi | ದಾಸ ಸಾಹಿತ್ಯ ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕ: ಡಾ.ಸುರೇಶ ಜಾಧವ
ಕಲಬುರಗಿ : ದಾಸ ಸಾಹಿತ್ಯವು ಅಂತರಾತ್ಮವನ್ನು ಶುದ್ಧಿಗೊಳಿಸಿ ಮೋಕ್ಷದತ್ತ ಕೊಂಡೊಯ್ಯುವ ಆಧ್ಯಾತ್ಮಿಕ ಸಾಹಿತ್ಯವಾಗಿದ್ದು, ಅದರ ನಿಜವಾದ ಸಾರ ಮತ್ತು ಸಂದೇಶ ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದು ಕಲಬುರಗಿ ವಿಭಾಗದ 4ನೇ ದಾಸ ಸಾಹಿತ್ಯ ಸಮ್ಮೇಳನದ ನಿಯೋಜಿತ ಸಮ್ಮೇಳನಾಧ್ಯಕ್ಷ ಡಾ. ಸುರೇಶ ಎಲ್. ಜಾಧವ ಹೇಳಿದರು.
ನಗರದ ಕನ್ನಡ ಭವನದಲ್ಲಿ ಆಗಸ್ಟ್ 9ರಂದು ನಡೆಯಲಿರುವ 4ನೇ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನೀಡಲಾದ ಅಧಿಕೃತ ಆಹ್ವಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ದಾಸ ಸಾಹಿತ್ಯವು ಧ್ಯಾನ, ತಪಸ್ಸು ಹಾಗೂ ಜೀವನ ಪರಿಶುದ್ಧತೆಯ ಸಂದೇಶ ಸಾರುವ ಶ್ರೇಷ್ಠ ಆಧ್ಯಾತ್ಮಿಕ ಪರಂಪರೆಯಾಗಿದ್ದು, ಅನೇಕ ದಾಸರು ತಮ್ಮ ಕೀರ್ತನೆಗಳು ಮತ್ತು ಪದಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ, ಮಾನವೀಯ ಮೌಲ್ಯಗಳು ಹಾಗೂ ಸದಾಚಾರದ ಬದುಕಿಗೆ ಪ್ರೇರಣೆ ನೀಡಿದ್ದಾರೆ. ಇಂತಹ ಸಾಹಿತ್ಯದ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ದಾಸ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಾತ್ಯತೀತ ಮೌಲ್ಯಗಳನ್ನು ಅಳವಡಿಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲರನ್ನು ಒಳಗೊಂಡ ಸಂಘಟನೆಯಾಗಿ ರೂಪಿಸುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ಕಾರ್ಯವನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ದಾಸ ಸಾಹಿತ್ಯವು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಅದು ಸಮಾನತೆ, ಮಾನವೀಯತೆ, ಭಕ್ತಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ಸಾರುವ ಜನಪರ ಸಾಹಿತ್ಯವಾಗಿದೆ. ಕನಕದಾಸ, ಪುರಂದರದಾಸ ಸೇರಿದಂತೆ ಹರಿದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ಶಾಶ್ವತ ಮೌಲ್ಯಗಳನ್ನು ನೀಡಿದ್ದಾರೆ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಸಾರವನ್ನು ಇಂದಿನ ಸಮಾಜಕ್ಕೆ ತಲುಪಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಮೇಶ ಚಿಚಕೋಟೆ, ಜಿಲ್ಲಾ ಕಸಾಪ ಕಾರ್ಯದರ್ಶಿ ಧರ್ಮಣ್ಣ ಎಚ್. ಧನ್ನಿ, ಸುರೇಖಾ ಎಸ್. ಜಾಧವ, ಕಸಾಪ ದಕ್ಷಿಣ ವಲಯ ಅಧ್ಯಕ್ಷ ರವಿಕುಮಾರ ಶಹಾಪೂರಕರ್, ರೇವಣಸಿದ್ದಪ್ಪ ಬೋಗಶೆಟ್ಟಿ, ಹಣಮಂತರಾವ ನಾಗಶೆಟ್ಟಿ ಪಾಟೀಲ, ಶರಣಗೌಡ ಮಾಲಿಪಾಟೀಲ, ಶಿವಶರಣಪ್ಪ ಬಿರಾದಾರ, ಡಾ. ಲಿಂಗರಾಜ ಸಿರಗಾಪೂರ, ಡಾ. ಶೋಭಾದೇವಿ ಚೆಕ್ಕಿ, ಸೋಮಶೇಖರಯ್ಯ ಹೊಸಮಠ, ಗಣೇಶ ಚಿನ್ನಾಕಾರ, ರಾಜೇಂದ್ರ ಮಾಡಬೂಳ, ಮಲ್ಲಿನಾಥ ಸಂಗಶೆಟ್ಟಿ, ಗಂಗಾಧರ ಬಂಗರಗಿ, ಹಣಮಂತರಾವ ಪೆಂಚನಪಳ್ಳಿ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ಡಾ. ಶಿವಲಿಂಗಪ್ಪ ಪಾಟೀಲ, ಮಧುಸೂಧನ ಚಿಂತನಪಳ್ಳಿ, ಸಂಗಪ್ಪ ಭೀಮಳ್ಳಿ, ಚಂದ್ರಕಾಂತ ಸೂರನ್, ಅಮೃತಪ್ಪ ಅಣೂರ, ಸೋಮಶೇಖರ ನಂದಿಧ್ವಜ, ಮಹಾಲಿಂಗಯ್ಯ ಸ್ವಾಮಿ, ರಾಜಶೇಖರ ಚಿಂಚೋಳಿ, ಪರಮಾನಂದ ಸರಸಂಬಿ, ಮಂಜುನಾಥ ಕಂಬಾಳಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.