ಕಲಬುರಗಿ | ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ, ಅವಕಾಶ ಅಗತ್ಯ : ಎಚ್.ಬಿ.ಪಾಟೀಲ್
ಕಲಬುರಗಿ : ಪ್ರಕೃತಿಯ ಸಮತೋಲನಕ್ಕೆ ಗಂಡು ಮತ್ತು ಹೆಣ್ಣು ಇಬ್ಬರೂ ಅಗತ್ಯವಾಗಿದೆ. ಇಲ್ಲಿ ಯಾರೂ ಮೇಲು ಮತ್ತು ಕೀಳಲ್ಲ. ಲಿಂಗ ತಾರತಮ್ಯದಿಂದಲೇ ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗಿ ಅಸಮಾನತೆಯಾಗಿದೆ. ಮಹಿಳಾ ಸಬಲೀಕರಣದ ಫಲ ದೊರೆಯಬೇಕು. ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ, ಅವಕಾಶಗಳನ್ನು ನೀಡಿದರೆ ಹೆಣ್ಣು ಮಕ್ಕಳು ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ಆಳಂದ ತಾಲೂಕಿನ ತೆಲ್ಲೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
ಸಿಆರ್ಸಿ ಬಸವರಾಜ ರೋಳೆ ಮಾತನಾಡಿ, ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅವುಗಳನ್ನು ಸದುಪಯೋಗಪಿಸಿಕೊಳ್ಳಬೇಕು. ಎಲ್ಲರೂ ಶಿಕ್ಷಣ ಪಡೆದು, ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಶಾಂತಮ್ಮ ಗಡೇದ್ ಅವರು ಹೆಣ್ಣು ಮಕ್ಕಳೊಂದಿಗೆ ಉದ್ಘಾಟಿಸಿದರು. ವಿದ್ಯಾರ್ಥಿನಿ ಭಾವನಾ ಅನಿಸಿಕೆ ವ್ಯಕ್ತಪಡಿಸಿದಳು. ಎಸ್.ಡಿ.ಎಂ.ಸಿ ಅಧ್ಯಕ್ಷ ವೀರಣ್ಣ ವಿ.ಚೌಲ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಸುಧಾರಾಣಿ ಡೆಂಕಿ, ಸರಿತಾ ಪಾಟೀಲ, ಸವಿತಾ ಶೀಲವಂತ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.