ಕಲಬುರಗಿ | ಸೇಡಂ ಭಾರತೀಯ ಸಂಸ್ಕೃತಿ ಉತ್ಸವದ ವಿರುದ್ಧ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ
ಕಲಬುರಗಿ : ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರ ಹಾಕಿ ಕೋಮುವಾದಿಗಳು ಮರಳು ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ) ರಾಜ್ಯ ಸಂಘಟನಾ ಸಂಚಾಲಕರಾದ ಅರ್ಜುನ್ ಭದ್ರೆ ಅವರು ಸೇಡಂನಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ 'ಕೋಮುವಾದದ ಭೂತ ದಹನ'ದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿ, ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆಗಾಗಿ ಕ್ರಾಂತಿ ಮಾಡಿದ ಶರಣರ ಕರ್ಮಭೂಮಿ ಇದು. ಹಿಂಸೆಯನ್ನು ಅಹಿಂಸೆಯ ಮೂಲಕ ಗೆದ್ದ ಸಾಮ್ರಾಟ ಅಶೋಕ ನಡೆದಾಡಿದ ನಾಡಿನಲ್ಲಿ ನಾಗಪುರದ ನಾಝಿ ವಿಷ ಸರ್ಪಗಳು ವಿಷವನ್ನು ಹರಿಬಿಡಲು ಇಲ್ಲಿಗೆ ಬರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜ.29ರಿಂದ ಫೆ.9ರವರೆಗೆ ಸೇಡಂನಲ್ಲಿ ಆಯೋಜಿಸುತ್ತಿರುವ 'ಭಾರತಿಯ ಸಂಸ್ಕೃತಿ ಉತ್ಸವ-7' ಸಂಘ ಪರಿವಾರದ ಕಾರ್ಯಕ್ರಮ, ನಡೆಯುವ ಎಲ್ಲಾ ವಿಚಾರಗೋಷ್ಟಿಗಳು ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ, ಸನಾತನವಾದ, ವೈದಿಕ ಪರಂಪರೆಯ ವರ್ಣವ್ಯವಸ್ಥೆ ಕಾಪಾಡುವ ಮತ್ತು ಅದನ್ನು ಉಳಿಸಿಕೊಳ್ಳುವ ಹುನ್ನಾರಗಳು ಆಡಗಿದೆ. ದೇಶಭಕ್ತರೆಂದೆಲ್ಲ ಹೇಳಿಕೊಳ್ಳುವ ಆರೆಸ್ಸೆಸ್ ದೇಶದಲ್ಲಿ ಆಶಾಂತಿ ಮೂಡಿಸುತ್ತಾ ಬಂದಿರುತ್ತದೆ. ಅದನ್ನು ಮುಂದುವರೆಸುವ ಭಾಗ ಈ ಕಾರ್ಯಕ್ರಮದ್ದಾಗಿದೆ ಎಂದು ಆರೋಪಿಸಿದ್ದಾರೆ.
ಆರೆಸ್ಸೆಸ್ ತನ್ನ ವಿಭಜನೆ ಮತ್ತು ಹಿಂಸಾತ್ಮಕ ಕಾರ್ಯಾಚರಣೆಗಳಿಂದ ದಲಿತ, ಅಲ್ಪಸಂಖ್ಯಾತ, ಹಿಂದುಳಿದ, ಮಹಿಳೆಯರ ಮತ್ತು ಕಾರ್ಮಿಕ ವರ್ಗಗಳಲ್ಲಿ ಆತಂಕ ಮೂಡುವಂತಹ ವಾತಾವರಣ ಸೃಷ್ಟಿಸುತ್ತಲೇ ಬಂದಿದೆ. ಕಳೆದು ಹೋದ ಪೇಶ್ವೆ ಸರಕಾರವನ್ನು ಮತ್ತೆ ರೂಪಿಸಿ ಚಿತ್ವಾನ್ ಅಧಿಪತ್ಯವನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಪ್ರಾರಂಭಗೊಂಡಿದ್ದು, ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ವಿರೋಧಿಸುವವರು, ಅವರ ಕಾರ್ಯಕ್ರಮದಲ್ಲಿ ಭಾಗಚಿತ್ರವನ್ನು ಹಾಕಿ ಜನರನ್ನು ಮುರ್ಖರನ್ನಾಗಿಸಿ ಮರಳು ಮಾಡುತ್ತಿದ್ದಾರೆ ಎಂದರು.
ಚಾರ್ವಾಕರು ಬೌದ್ಧ ಬಿಕ್ಕುಗಳ ಶರಣರು, ಸೂಫಿ ಸಂತರು, ಆರೂಢರು ಕೂಡಿ ಕಟ್ಟಿದ ಬಹುತ್ವ ಭಾರತ ನಮ್ಮದು. ಆದರೆ ಮನುವಾದಿಗಳು, ಪಟ್ಟಭದ್ರ ಹಿತಾಶಕ್ತಿಗಳು, ಮತಾಂಧರು ಮತ್ತು ಪ್ರತ್ಯೇಕವಾದಿಗಳು ದೇಶದ ಉಜ್ವಲ ಭವಿಷ್ಯದ ದಿಕ್ಕು ತಪ್ಪಿಸುತ್ತಿದ್ದಾರೆ. ಜಾತಿ-ಧರ್ಮ, ಭಾಷೆ ಗಡಿಗಳ ಹೆಸರಿನಲ್ಲಿ ಮನುಷ್ಯರ ನಡುವೆ ದೇಶದ ಗೋಡೆಗಳನ್ನು ಕಟ್ಟುತ್ತಿದ್ದಾರೆ.
ನಾಗಪುರದಲ್ಲಿ ಸುಳ್ಳು ಹೇಳುವ ಮತ್ತು ಸುಳ್ಳು ವಂದತಿಗಳನ್ನು ಹರಡಿಸುವ ತರಬೇತಿ ಪಡೆದ ಸಂಘ ಪರಿವಾರದವರು ಭಾಗವಹಿಸುತ್ತಿದ್ದು, ಸಂಸ್ಕೃತಿಯ ಹೆಸರಿನಲ್ಲಿ ಜನವಿರೋಧಿ ಚಿಂತನೆಗಳನ್ನು ಬಿತ್ತುತ್ತಾ ಸಮಾಜವನ್ನು ಮತೀಯವಾಗಿ ಧ್ರುವೀಕರಿಸುತ್ತಿರುವ ಸಂಘಪರಿವಾರದ ನಿಜ ರೂಪವನ್ನು ಪ್ರದರ್ಶಿಸುವುದೇ ಭಾರತೀಯ ಸಂಸ್ಕೃತಿ ಉತ್ಸವ , ಹೊಸ ತಲೆಮಾರಿನಲ್ಲಿ ಅಸತ್ಯಗಳನ್ನು ಅರ್ಧ ಸತ್ಯಗಳನ್ನು ಪ್ರಚಾರ ಮಾಡುವ ಹುನ್ನಾರ ಇದರಲ್ಲಿದೆ ಎಂದು ಮಲ್ಲಿಕಾರ್ಜುನ್ ಕ್ರಾಂತಿ ಆರೋಪ ಮಾಡಿದ್ದಾರೆ.
'ಕೋಮುವಾದದ ಭೂತ ದಹನ'ದ ಬೃಹತ್ ಮೆರವಣಿಗೆಗೆ ಕನ್ನಡ ಭವನದಲ್ಲಿ ಪೌರಕಾರ್ಮಿಕರಾದ ಸಿದ್ದಮ್ಮಾ ಇಟಗಿಕರ ಅವರು ಚಾಲನೆ ನೀಡಿದರು. 'ಪೌರಕಾರ್ಮಿಕರು, ಕಸಗೂಡಿಸಿ ನಗರ ಸ್ವಚ್ಚ ಮಾಡುತ್ತಾರೆ. ಅದೇ ಕಸಬಾರಿಗೆಯಿಂದ ಮತಾಂಧರ ಮೆದುಳು ಕೂಡಾ ಸ್ವಚ್ಚ ಮಾಡುತ್ತೇವೆ' ಎಂಬ ಸಂದೇಶದ ಹಿನ್ನೆಲೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಜಗತ್ ವೃತದಲ್ಲಿ ದಹನ ಮಾಡಲಾಯಿತು.
ಈ ಸಂದರ್ಭದಲ್ಲಿ ಮರಿಯಪ್ಪ ಹಳ್ಳಿ, ಕೆ.ನೀಲಾ, ಮಿನಾಕ್ಷಿ ಬಾಳಿ, ಆರ್.ಕೆ.ಹುಡಗಿ, ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪೂರ, ರಾಜಕುಮಾರ ನಿಂಬಾಳ, ಶಿವಕುಮಾರ ಕೋರಳ್ಳಿ, ಮಹೇಶ ಕೋಕಿಲೆ ಜೇವರ್ಗಿ, ಸುಭಾಷ್ ಕಲ್ಕರಿ ಚಿತ್ತಾಪೂರ, ಮಹೇಶ ಸುಲೇಕರ್, ಮರಪ್ಪ ಮಾಶಾಳ ಅಫಜಲಪೂರ, ಸಾಯಬಣ್ಣಾ ಕೋಟನೂರ ಆಳಂದ, ದೊಡ್ಡೇಶ ಹಾಲು ಕಲಬುರಗಿ, ಪರಶುರಾಮ ರಾಜಾಪೂರ ಯಡ್ರಾಮಿ, ರಾಮಣ್ಣ ಪಾಸ್ತನ ಸೇಡಂ, ರಾಜಶೇಖರ ಹೊಸಮನಿ ಚಿಂಚೋಳಿ, ಡಾ.ಮಲ್ಲಿಕಾರ್ಜುನ ಹಾಸನಾಳ, ಮಲ್ಲಿಕಾರ್ಜುನ ಕುರಕುಂದಿ, ಮಲ್ಲಿಕಾರ್ಜುನ ಖಾನಾಪೂರ, ಅಜೀಜಸಾಬ ಐಕೂರ. ಶೇಖರ ಜೀವಣಗಿ, ಬಸವರಾಜ ಶೆಳ್ಳಗಿ ಸುರಪೂರ, ಭೀಮಣ್ಣಾ ಖ್ಯಾತನಾಳ, ಹಯ್ಯಾಳಪ್ಪ ಗಂಗನಾಳ ಶಹಾಪೂರ, ನಿಂಗಪ್ಪ ಯಾದಗಿರ, ಮರಲಿಂಗಪ್ಪ ನಾಟಕರ ಹುಣಸಗಿ, ಬಸವರಾಜ ಗೋನಲ ವಡಗೇರಿ, ಆಂಜನೇಯ ಎಲೇರಿ ಗುರುಮಿಠಕಲ್, ಲವಿತ್ರ ವಸ್ತ್ರದ್, ಸೇರಿದಂತೆ ಹಲವರು ಇದ್ದರು.