ಕಲಬುರಗಿ | ಕೊಲೆ ಪ್ರಕರಣ : ಆರು ಮಂದಿಗೆ ಜೀವಾವಧಿ ಶಿಕ್ಷೆ
ಕಲಬುರಗಿ: ಆಳಂದ ತಾಲ್ಲೂಕಿನ ಶುಕ್ರವಾಡಿ ನಿವಾಸಿ ದಯಾನಂದ ಲಾಡಂತಿ ಅವರ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಆಳಂದ ತಾಲ್ಲೂಕಿನ ಕಿಣ್ಣಿಸುಲ್ತಾನ್ ನಿವಾಸಿ ಸುರೇಶ ಜಾಧವ (42), ಕಲಬುರಗಿಯ ನೀಲಕಂಠ ಮಾಮನಿ (42), ಕೃಷ್ಣ ಜಮಾದಾರ (28), ಆಳಂದ ತಾಲ್ಲೂಕಿನ ಶುಕ್ರವಾಡಿಯ ಸುನೀಲ ಲಾಡಂತಿ (35), ಕಲಬುರಗಿಯ ಅಂಬಿಕಾ ಕೊಡೆಕಲ್(41) ಹಾಗೂ ಆಳಂದ ತಾಲ್ಲೂಕಿನ ಬಟ್ಟರಗಿ ಗ್ರಾಮದ ಸಂತೋಷ ತಳವಾರ (40) ಶಿಕ್ಷೆಗೆ ಒಳಗಾದವರು.
ಕೊಲೆಯಾಗಿದ್ದ ದಯಾನಂದ ಲಾಡಂತಿ ಹಾಗೂ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಸುನೀಲ ಲಾಡಂತಿ ಕುಟುಂಬಗಳ ನಡುವೆ ಪಾರ್ಟಿಯೊಂದರಲ್ಲಿ ಗಲಾಟೆ ನಡೆದಿತ್ತು. ಬಳಿಕ ದಯಾನಂದನ ಕೊಲೆಗೆ ಸುನೀಲ ಲಾಡಂತಿ 3 ಲಕ್ಷ ರೂ. ಸುಪಾರಿ ನೀಡಿದ್ದ ಎಂದು ತನಿಖೆಯಿಂದ ಬಯಲಾಗಿದೆ.
ಈ ಕುರಿತು ಇಲ್ಲಿನ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಎಸಿಪಿ ಗೀತಾ ಬೇನಾಳ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮೋಹನ ಬಾಡಗಂಡಿ, ಪ್ರಕರಣದಲ್ಲಿ ಆರು ಮಂದಿ ಮೇಲಿನ ಆರೋಪ ಸಾಬೀತಾಗಿದ್ದು, ಈ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರಾಜಮಹೇಂದ್ರ ಜಿ.ಕಿರಣಗಿ ವಾದ ಮಂಡಿಸಿದ್ದರು.