ಕಲಬುರಗಿ | 'ಬಹಮನಿ ಸಾಮ್ರಾಜ್ಯ; ಚರಿತ್ರೆ ಮತ್ತು ಸಂಸ್ಕೃತಿ' ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ
ಕಲಬುರಗಿ: ಕಲಬುರಗಿಯ ವಿಭಾಗೀಯ ಪತ್ರಾಗಾರ ಕಚೇರಿ ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿ.ಜಿ.ಮಹಿಳಾ ಮಹಾವಿದ್ಯಾಲಯದ ಸಹಯೋಗದಲ್ಲಿ 'ಬಹಮನಿ ಸಾಮ್ರಾಜ್ಯ; ಚರಿತ್ರೆ ಮತ್ತು ಸಂಸ್ಕೃತಿ' ಕುರಿತಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಶುಕ್ರವಾರ ಚಾಲನೆ ಕೊಡಲಾಯಿತು.
ಮೊದಲನೇ ಗೋಷ್ಠಿಯಲ್ಲಿ "ಬಹಮನಿಯರ ಆಳ್ವಿಕೆಯಲ್ಲಿ ರೂಪಗೊಂಡ ನಗರಗಳ ಸ್ವರೂಪ ಮತ್ತು ಅವುಗಳ ವಾಸ್ತು-ರಚನಾ ಶೈಲಿಗಳ ಅವಲೋಕನ" ಎಂಬ ವಿಷಯದ ಕುರಿತು ICHR ದ ಪ್ರಾದೇಶಿಕ ನಿರ್ದೇಶಕರಾದ ಡಾ.ಶಿವಶರಣ ಅರುಣಿ (ಎಸ್. ಕೆ ಅರುಣಿ) ಅವರು ಉಪನ್ಯಾಸ ನೀಡಿದರು.
ವಿಷಯ ಮಂಡಿಸಿದ ಡಾ.ಶಿವಶರಣ ಅರುಣಿ ಅವರು, ಕ್ರಿ.ಶ 14ನೇ ಶತಮಾನದಲ್ಲಿ ಆಳ್ವಿಕೆ ಆರಂಭಿಸಿದ ಬಹಮನಿ ಸುಲ್ತಾನರು ದಖ್ಖನ್ ಪ್ರದೇಶದಲ್ಲಿ ನಗರೀಕರಣ ಪ್ರಕ್ರಿಯೆಗೆ ನಾಂದಿ ಹಾಡಿದರು. ಬಹಮನಿ ಸುಲ್ತಾನರು ತಮ್ಮ ರಾಜ್ಯದಲ್ಲಿ ಕಲಬುರಗಿ ಒಳಗೊಂಡಂತೆ ಫಿರೋಜಾಬಾದ್, ಬೀದರ್, ಸಗರ, ಮಳಖೇಡ, ಪಕೀಂದ, ಸೋಲಾಪುರ ಇತ್ಯಾದಿಗಳನ್ನು ನಗರಗಳನ್ನಾಗಿ ರೂಪಿಸಿದರು. ಮುಖ್ಯವಾಗಿ ಕಲಬುರಗಿಯು ಪ್ರಾಚೀನದಲ್ಲಿ ಉಲ್ಲೇಖಗೊಂಡ 'ಕಲಬುರಗಿ' ವಾಣಿಜ್ಯ ಪಟ್ಟಣವನ್ನು ನೂತನವಾಗಿ ಸ್ಥಾಪನೆಯಾದ ರಾಜ್ಯದ ರಾಜಧಾನಿಯನ್ನಾಗಿ ನಿರ್ಮಿಸಿದ ಕುರಿತಾಗಿ ವಿವರಿಸಿದರು.
ಕಲಬುರಗಿಯು ಬಹಮನಿಯರ ಆಶ್ರಯದಲ್ಲಿ ರಾಜಧಾನಿ ನಗರವಾಗಿ ರಚನೆಯಾಗಿ ಕೋಟೆ, ನಗರ(ನಾಗರಿಕರ ವಸತಿಯಾಗಿ) ನಿರ್ಮಾಣಗೊಂಡ ರಾಜಧಾನಿ ನಗರವಾಗಿ ಸುಮಾರು 75 ವರ್ಷಗಳ ಕಾಲ ಮುಂದುವರೆದಿತ್ತು. ಈ 75 ವರ್ಷಗಳಲ್ಲಿ ಬಹಮನಿ ಸುಲ್ತಾನರು ಭದ್ರವಾದ ಕೋಟೆಯೊಂದನ್ನು ಅದಕ್ಕೆ ಹೊಂದಿಕೊಂಡಂತೆ ಶಹಾಬಜಾರ ಒಳಗೊಂಡಂತೆ ವಿಶಾಲವಾದ ನಗರವನ್ನು ರಚಿಸಿದರು. ರಾಜಧಾನಿ ನಗರಕ್ಕೆ ಹೊಂದಿಕೊಂಡಂತೆ 'ಸುಲ್ತಾನಪುರ' ಎಂಬ ಉಪನಗರವನ್ನು ನಿರ್ಮಿಸಿದ್ದು ಪ್ರಾಯಶಃ ಡೆಕ್ಕನ್ ಪ್ರದೇಶದಲ್ಲಿಯೇ ಪ್ರಥಮವಾಗಿ ಉಪನಗರ ನಿರ್ಮಾಣ ಮಾಡುವ ಕಲ್ಪನೆ ಕಲಬುರಗಿಯಲ್ಲಿ ಕಾಣಬಹುದು ಎಂದು ಅವರು ತಮ್ಮ ವಿಷಯವನ್ನು ಪ್ರತಿಪಾದಿಸಿದರು.
ವಿಚಾರ ಸಂಕಿರಣದಲ್ಲಿ ಕಾಲೇಜು ಪ್ರಾಂಶುಪಾಲರಾದ ಆರ್.ಬಿ.ಕೊಂಡಾ, ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಡಾ.ವೀರಶೆಟ್ಟಿ, ಇತಿಹಾಸ ಪ್ರಾಧ್ಯಾಪಕರಾದ ಶುಭಾಶ್ಚಂದ್ರ ದೊಡ್ಡಮನಿ, ಮಲ್ಲಿಕಾರ್ಜುನ ಬಾಗೋಡಿ, ಡಾ.ಝಾಕಿಯಾ ಕೆ.ಅನ್ಸಾರಿ, ಅಬ್ದುಲ್ ಅಝೀಝ್ ರಜಪುತ್, ಅರುಣಕುಮಾರ ಜೋಳದಕೂಡ್ಲಿಗಿ, ವಿಜಯಕುಮಾರ್ ಸಾಲಿಮನಿ, ಬಸವರಾಜ ಭಾಗಾ, ಗುರುಪ್ರಕಾಶ್ ಹೂಗಾರ, ಉಮರ್ ಮಸಳಿ, ಶರಣಬಸಪ್ಪ ಅವಟೆ, ಶಂಭುಲಿಂಗ ವಾಣಿ, ಮುಂತಾದವರು ಉಪಸ್ಥಿತರಿದ್ದರು.