ಕಲಬುರಗಿ | ಗ್ರಾಹಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ : ಪ್ರವೀಣ್ ಪಾಟೀಲ್ ಹರವಾಳ
ಕಲಬುರಗಿ: ಜೆಸ್ಕಾಂ ಸಿಬ್ಬಂದಿಗಳು ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಹಾಗೂ ಜೆಸ್ಕಾಂನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ನಿಮ್ಮ ಸಹಕಾರವು ಅವಶ್ಯಕತೆ ಇದೆ ಎಂದು ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ್ ಪಾಟೀಲ್ ಹರವಾಳ ಹೇಳಿದರು.
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನಿಗಮ ಕಚೇರಿಯಲ್ಲಿ ಕವಿಪ್ರನಿನಿ ಮತ್ತು ಗುವಿಸಕಂನಿ ಕನ್ನಡ ಸಂಘದ ವತಿಯಿಂದ 70ನೇ ರಾಜ್ಯೋತ್ಸವ ನಿಮಿತ್ತ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕದಂಬ, ಹೊಯ್ಸಳ, ಚಾಲುಕ್ಯ, ರಾಷ್ಟ್ರಕೂಟರ ನೆಚ್ಚಿನ ಬೀಡು, ರನ್ನ, ಪಂಪ, ಕುವೆಂಪು ಮೊದಲಾದ ಅನೇಕ ಮಹನೀಯರ ಆಶ್ರಯ ತಾಣ. ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರುವ ನಮ್ಮ ನಾಡು ಶ್ರೇಷ್ಠ. ಕನ್ನಡ ಮಾತನಾಡಿ, ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂದು ಕೋರಿದರು.
ನಮ್ಮ ಯುವ ಪೀಳಿಗೆ ಕನ್ನಡವನ್ನು ಮರೆಯುತ್ತಿದ್ದಾರೆ. ಪೋಷಕರು ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡ ಭಾಷೆಯಲ್ಲಿ ಮಾತನಾಡಿ, ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಹಾಗೇ ಜೆಸ್ಕಾಂನ ನೌಕರರಿಗಾಗಿ ಹೆಲ್ತ್ ಕ್ಲಬ್ ಸ್ಥಾಪನೆ ಮಾಡುವುದಾಗಿ ಆಶ್ವಾಸನೆ ನೀಡಿದರು.
ಈ ವೇಳೆ ಅಧ್ಯಕ್ಷತೆ ಸ್ಥಾನ ವಹಿಸಿ ಮಾತನಾಡಿದ ಜೆಸ್ಕಾಂನ ಕನ್ನಡ ಸಂಘದ ಅಧ್ಯಕ್ಷರಾದ ಮುಹಮ್ಮದ್ ಮಿನ್ಹಾಜುದ್ದೀನ್ ಅವರು ನಮ್ಮ ಕಚೇರಿಯ ದಿನನಿತ್ಯದ ವ್ಯವಹಾರವನ್ನು ಕನ್ನಡದಲ್ಲೇ ಮಾಡುತ್ತಿದ್ದು, ಅದು ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೆನೆ ಎಂದರು.
ಸಮಾರಂಭದಲ್ಲಿ ಜೆಸ್ಕಾಂನ ಮುಖ್ಯ ಅಭಿಯಂತರರಾದ ಮೌನೇಶ ಪತ್ತಾರ, ಪ್ರಧಾನ ವ್ಯವಸ್ಥಾಪಕರಾದ ಪಾರ್ವತಿ, ಆರ್ಥಿಕ ಸಲಹೆಗಾರರಾದ ಮಹಾಲಕ್ಷ್ಮೀ, ಕಂಪನಿ ಕಾರ್ಯದರ್ಶಿಗಳಾದ ಕಿರಣ ಪೊಲೀಸ್ ಪಾಟೀಲ್, ನೌಕರರ ಸಂಘದ ಉಪಾಧ್ಯಕ್ಷರಾದ ಬಾಬು ಕೋರೆ, ಕವಿಮಂ ಸಂಘಟನಾ ಕಾರ್ಯದರ್ಶಿಗಳಾದ ವಿಶ್ವನಾಥ ರೆಡ್ಡಿ, ಪಜಾ/ಪಪಂ ಕಲ್ಯಾಣ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶಿವಾನಂದ ತೊಳೆ ಅವರು ಸೇರಿದಂತೆ ಜೆಸ್ಕಾಂನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.