ಕಲಬುರಗಿ | ವಿದ್ಯಾರ್ಥಿನಿಯರು ಉತ್ತಮ ಗುರಿ ಮೂಲಕ ಸಾಧನೆ ಮಾಡಬೇಕು : ಡಾ. ಜಗದೇವಿ
ಕಲಬುರಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರು ಉತ್ತಮ ಗುರಿ ಮೂಲಕ ಸಾಧನೆ ಸಾಧ್ಯವಿದೆ ಎಂದು ಯಾದಗಿರಿ ಇಎಸ್ಐ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಜಗದೇವಿ ವಿ. ಜ್ಯೋತಿ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಅಂತಿಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಇಂದು ಸಾಕಷ್ಟು ಜವಾಬ್ದಾರಿಗಳಿವೆ. ಕೌಟಂಬಿಕ ನಿರ್ವಹಣೆ ಜೊತೆಗೆ ಸಮಾಜವನ್ನು ಮಾನವೀಯ ಮೌಲ್ಯಗಳ ಮೇಲೆ ಕಟ್ಟುವ ಬಹುದೊಡ್ಡ ಜವಾಬ್ದಾರಿಗಳಿವೆ ಎಂದರು.
ಕಲಬುರಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ವಿಭಾಗದ ಸಂಯೋಜಕರಾದ ಜ್ಯೋತಿ ಕೆ., ಇತಿಹಾಸ ವಿಭಾಗದ ಉಪನ್ಯಾಸಕ ಡಾ.ಪ್ರಕಾಶ್ ಎಂ.ಬಡಿಗೇರ್ ಮಾತನಾಡಿದರು.
ಎಂ.ಎ. ಇತಿಹಾಸ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಶ್ವೇತಾ ಹಾಗೂ ಭಾಗ್ಯಲಕ್ಷ್ಮೀ ಅನಿಸಿಕೆ ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಎಲ್ಲಾ ಶಿಕ್ಷಕರ ಸಲಹೆ ಸೂಚನೆಗಳನ್ನು ಪಡೆದು ಭವಿಷ್ಯ ರೂಪಿಸಿಕೊಂಡು ಕಾಲೇಜಿಗೆ ಕೀರ್ತಿ ತರಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಸುರೇಶ ಬಡಿಗೇರ್, ಡಾ.ಸೂರ್ಯಕಾಂತ ಸೊನ್ನದ, ಡಾ.ಪ್ರಕಾಶ ಪಾಟೀಲ, ಡಾ.ಚಂದ್ರಶೇಖರ್, ಅಣವೀರಪ್ಪ ಬೋಳೆವಾಡ ಹಾಗೂ ಶಿಕ್ಷಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.