ಕಲಬುರಗಿ | ಜಿಮ್ಸ್ ಆಸ್ಪತ್ರೆಯ ಮಹಡಿಯಿಂದ ಬಿದ್ದು ರೋಗಿ ಸಾವು: ಸೂಕ್ತ ತನಿಖೆಗೆ ಆಗ್ರಹ
ಕಲಬುರಗಿ: ಇಲ್ಲಿನ ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಅಗಮಿಸಿದ ಸೈಯದ್ ಅಝರುದ್ದೀನ್ (33) ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕೆಂದು ಜನತಾ ಪರಿವಾರ ಸಂಘಟನೆಯ ಮುಖಂಡ ಸಿರಾಜ್ ಶಬ್ದಿ ಆಗ್ರಹಿಸಿದ್ದಾರೆ.
ಅಝರುದ್ದೀನ್ ಅವರು ಟಿಬಿ ಕಾಯಿಲೆಯಿಂದ ಬಳಲುತ್ತಿರುವುದರಿಂದ ಸೋಮವಾರ ಆಸ್ಪತ್ರೆಯ ದಾಖಲಾಗಿದ್ದರು. ಅವರ ಪತ್ನಿಯು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಆಸ್ಪತ್ರೆಯ ವಾರ್ಡ್ ಗೆ ಹೋಗಿದ್ದಾಗ ಅಲ್ಲಿ ಪತಿ ಇಲ್ಲದಿರುವುದು ಕಂಡು ಆಸ್ಪತ್ರೆಯ ಎಲ್ಲಾ ಕಡೆ ಹುಡುಕಾಡಿದ್ದರು. 11 ಗಂಟೆಯ ನಂತರ ಆಸ್ಪತ್ರೆಯ ಸಿಬ್ಬಂದಿ ಸೈಯದ್ ಅಝರುದ್ದೀನ್ ಬೆಳಿಗ್ಗೆ 6 ಸುಮಾರಿಗೆ ಎರಡನೇ ಮಹಾಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ ಬೆನ್ನಲ್ಲೇ ಹೋಗಿ ನೋಡಿದಾಗ ಮೃತಪಟ್ಟಿರುವುದು ಕಂಡುಬಂದಿರುವುದಾಗಿ ಮೃತ ವ್ಯಕ್ತಿ ಕುಟುಂಬಸ್ಥರು ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಈಗಾಗಲೇ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ರೋಗಿ ಸಾವಿಗೆ ಅಪಘಾತ, ಕೊಲೆ ಅಥವಾ ಆತ್ಮಹತ್ಯೆ ಕಾರಣವೇ ಎಂಬುದು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮೃತ ವ್ಯಕ್ತಿಯ ಕುಟುಂಬಸ್ಥರು ಮತ್ತು ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.