×
Ad

ಯಡ್ರಾಮಿ | ಅರಳಗುಂಡಗಿಯಲ್ಲಿ ರಥೋತ್ಸವ : ರಥದ ಗಾಲಿಗೆ ಸಿಲುಕಿ ಮಹಿಳೆಯ ಎರಡು ಕಾಲುಗಳು ನುಜ್ಜುಗುಜ್ಜು

Update: 2026-03-08 20:53 IST

ಯಡ್ರಾಮಿ: ರಥೋತ್ಸವದ ವೇಳೆ ರಥದ ಗಾಲಿಗೆ ಸಿಲುಕಿ ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡು ಎರಡು ಕಾಲುಗಳನ್ನು ಕಳೆದುಕೊಂಡ ದುರ್ಘಟನೆ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದಿದೆ.

ಅರಳಗುಂಡಗಿ ಗ್ರಾಮದ ಶ್ರೀ ಶರಣಬಸವೇಶ್ವರ ಜಾತ್ರೆ ಅಂಗವಾಗಿ ರವಿವಾರ ಸಂಜೆ ರಥೋತ್ಸವ ನಡೆಯುತ್ತಿತ್ತು. ಈ ವೇಳೆ ರಥದ ಗಾಲಿಗೆ ಸಿಲುಕಿ ನಾಗಮ್ಮ ಕರಿಯಪ್ಪ ಪೂಜಾರಿ (42) ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ರಥದ ಗಾಲಿ ಎರಡು ಕಾಲುಗಳ ಮೇಲೆ ಹರಿದ ಪರಿಣಾಮ ಕಾಲುಗಳು ನುಜ್ಜುಗುಜ್ಜಾಗಿವೆ ಎಂದು ತಿಳಿದು ಬಂದಿದೆ.

ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಘಟನೆಗೆ ಕಾರಣ :

ರಥ ಎಳೆಯುವ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲು ಈ ದುರ್ಘಟನೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ರಥಕ್ಕೆ ಎಸೆಯಲಾಗುತ್ತಿದ್ದ ಬಾಳೆಹಣ್ಣು ಹಾಗೂ ಉತ್ತತ್ತಿ ತೆಗೆದುಕೊಳ್ಳುವ ವೇಳೆ ಜನರ ನಡುವೆ ನೂಕುನುಗ್ಗಲು ಉಂಟಾಗಿ ಮಹಿಳೆ ರಥದ ಗಾಲಿಗೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.

ಶ್ರೀ ಶರಣಬಸವೇಶ್ವರ ಜನ್ಮಸ್ಥಳ ಆಗಿರುವುದರಿಂದ ಅರಳಗುಂಡಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಿದ್ದರು. ಘಟನೆ ಬಳಿಕ ಜನರನ್ನು ಚದುರಿಸಲು ಪೊಲೀಸರು ಮತ್ತು ಗ್ರಾಮಸ್ಥರು ಕೆಲಕಾಲ ಹರಸಾಹಸ ಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News