ಕೊಪ್ಪಳ | ಇಪತ್ತು ವರ್ಷ ಹಳೆಯ ಸರ್ಕಾರಿ ಹಣ ದುರುಪಯೋಗ ಪ್ರಕರಣ: ಆರೋಪಿಗೆ ದಂಡ ಸಹಿತ 7 ವರ್ಷ ಜೈಲು ಶಿಕ್ಷೆ
ಸಾಂದರ್ಭಿಕ ಚಿತ್ರ
ಕೊಪ್ಪಳ: ಸರ್ಕಾರಿ ಹಣ ದುರುಪಯೋಗಕ್ಕೆ ಸಂಬಂಧಿಸಿದ 20 ವರ್ಷ ಹಳೆಯ ಪ್ರಕರಣದ ತೀರ್ಪನ್ನು ಕೊಪ್ಪಳ ಜೆಎಂ ನ್ಯಾಯಾಲಯವು ನೀಡಿದೆ.
ಸರ್ಕಾರಿ ಹಣವನ್ನು ದುರುಪಯೋಗ ಪಡಿಸಿಕೊಂಡ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೊಪ್ಪಳ ಭಾಗ್ಯನಗರ ಶಾಖೆಯ ಜೂನಿಯರ್ ಅಸಿಸ್ಟೆಂಟ್ ಅಧಿಕಾರಿ ಜಿ.ಮಂಜುನಾಥ ಎಂಬವರಿಗೆ ಕೊಪ್ಪಳ ಸಿಜೆಎಂ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.10 ಸಾವಿರಗಳ ದಂಡವನ್ನು ವಿಧಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಆಗಿನ ತನಿಖಾಧಿಕಾರಿ ಪಿಐ ಪಿ.ಶಿವಲಿಂಗರಾದ್ಯ ಅವರು ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿದ ಅಪರಾಧಕ್ಕೆ ಭಾ.ದಂ.ಸಂ. ಕಲಂ 409 ಅಡಿಯಲ್ಲಿನ ಅಪರಾಧಕ್ಕೆ 7 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.10,000/- ಗಳ ದಂಡವನ್ನು ವಿಧಿಸಿ ಮುಖ್ಯ ನ್ಯಾಯಾಧೀಶರಾದ ಮಲ್ಕಾರಿ ರಾಮಪ್ಪ ಒಡೆಯರ್ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:
2002-03ನೇ ಸಾಲಿನಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೊಪ್ಪಳ ಭಾಗ್ಯನಗರ ಶಾಖೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಸನ ಜಿಲ್ಲೆಯ ಗೋರೂರಿನ ಜಿ.ಮಂಜುನಾಥ ಎಂಬವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ರೂ.2,66,100/- ಮೌಲ್ಯದ 20 ಬೇಲ್ಸ್ಗಳ ಪೈಕಿ 4 ಬೇಲ್ಸ್ಗಳನ್ನು ಮರಳಿ ಒಪ್ಪಿಸಿದ್ದು, ಉಳಿದ 16 ಬೇಲ್ಸ್ಗಳನ್ನು ಇತರರಿಗೆ ಮಾರಾಟ ಮಾಡಿ, ಅದರಿಂದ ರೂ.2,12,100/- ಗಳನ್ನು ಪಡೆದು ಅದನ್ನು ಸರ್ಕಾರಕ್ಕೆ ಭರಿಸದೇ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದರು. ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 150/2005 ರಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ವಸಂತ ಅವರು ವಾದ ಮಂಡಿಸಿದ್ದರು. ಕೊಪ್ಪಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸಿ.ಎಚ್.ಸಿ 15 ಲತೀಫ್, ಸಿ.ಎಚ್.ಸಿ 183 ಸೂರ್ಯಕಾಂತ, ಪಿಸಿ 156 ಗವಿಸಿದ್ದಪ್ಪ ಹಾಗೂ ಪಿಸಿ 605 ಮಂಜುನಾಥ ಕಡಗತ್ತಿ ಅವರು ಸಮಯಕ್ಕೆ ಸರಿಯಾಗಿ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.