×
Ad

ಕೊಪ್ಪಳ | ಕುವೆಂಪು ಸಾಹಿತ್ಯ ಅಧ್ಯಯನದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು : ಪ್ರೊ.ಬಿ.ಕೆ.ರವಿ

Update: 2025-12-30 15:21 IST

ಕೊಪ್ಪಳ : ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಕೆ. ರವಿ ಅವರು ಚಾಲನೆ ನೀಡಿ ಮಾತನಾಡಿದರು.

ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕುವೆಂಪು ಸೇರಿದಂತೆ ಅನೇಕ ಹಿರಿಯ ಸಾಹಿತಿಗಳೊಂದಿಗೆ ಹೊಂದಿದ್ದ ಒಡನಾಟವನ್ನು ಅವರು ಸ್ಮರಿಸಿದರು. ಕುವೆಂಪು ಅವರ ಸಾಹಿತ್ಯದ ಮಹತ್ವ, ರಾಮಾಯಣ ದರ್ಶನಂ ಕೃತಿಯ ವೈಶಿಷ್ಟ್ಯ, ಹಳೆಗನ್ನಡ ಸಾಹಿತ್ಯಕ್ಕೆ ಅವರು ನೀಡಿದ ಅಪಾರ ಕೊಡುಗೆ ಹಾಗೂ ಅವರ ವಿಶ್ವಮಾನವ ಸಂದೇಶವನ್ನು ನೆನೆದರು. ವಿದ್ಯಾರ್ಥಿಗಳು ಕುವೆಂಪು ಅವರ ಸಾಹಿತ್ಯವನ್ನು ಅಧ್ಯಯನ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು.

ಇದೇ ವೇಳೆ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕುಲಸಚಿವರಾದ ಪ್ರೊ.ಎಸ್.ವಿ.ಡಾಣಿ ಅವರು, “ಮತಗಳು ಮನುಜ ಪಥಗಳಾಗಬೇಕು” ಎಂಬ ಕುವೆಂಪು ಅವರ ಸಂದೇಶವನ್ನು ಸ್ಮರಿಸಿ, ಅವರ ವಿಶ್ವಮಾನವ ತತ್ವವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಪ್ರೊ.ತಿಮ್ಮಾರೆಡ್ಡಿ ಮೇಟಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಶ್ರದ್ಧಾ-ಭಕ್ತಿಯಿಂದ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ವಿಶ್ವವಿದ್ಯಾಲಯದ ಸಕಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಆರಂಭದಲ್ಲಿ ಪ್ರದರ್ಶನ ಕಲೆ ವಿಭಾಗದ ಉಪನ್ಯಾಸಕರಾದ ಅನಂತಕುಮಾರ ದೊರೆ, ಶಂಕರಮೇಟಿ ಹಾಗೂ ತಂಡದವರು ಕುವೆಂಪು ಅವರ ಭಾವಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿದರು.

ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಡಾ.ವೀರೇಶ ಉತ್ತಂಗಿ ಅವರು ಸ್ವಾಗತಿಸಿ, ನಿರೂಪಿಸಿದರು. ಡಾ.ಬಸವರಾಜ ಗಡಾದ ಅವರು ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News