ಕುಷ್ಟಗಿ | ಕೃಷಿ ಹೊಂಡಕ್ಕೆ ಬಿದ್ದು ಮಕ್ಕಳಿಬ್ಬರು ಮೃತ್ಯು
ಸಾಂದರ್ಭಿಕ ಚಿತ್ರ
ಕುಷ್ಟಗಿ :ಜಮೀನೊಂದರ ಕೃಷಿ ಹೊಂಡಕ್ಕೆ ಮಕ್ಕಳಿಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ದಾರುಣ ಘಟನೆ ತಾಲೂಕಿನ ಬಿಜಕಲ್ ಗ್ರಾಮದ ಹೊರವಲಯದಲ್ಲಿ ಸೋಮವಾರ ಮದ್ಯಾಹ್ನ ನಡೆದಿದೆ.
ಗ್ರಾಮದ ಮಲ್ಲಮ್ಮ ತಂದೆ ನೀಲಪ್ಪ ತೆಗ್ಗಿನಮನಿ (11) ಮತ್ತು ಶ್ರವಣಕುಮಾರ ತಂದೆ ಸಂಗಪ್ಪ ತೆಗ್ಗಿನಮನಿ (8) ಮೃತಪಟ್ಟಿದ್ದಾರೆ.
ಜಮೀನಿಗೆ ಕುಟುಂಬ ಸದಸ್ಯರೊಂದಿಗೆ ತೆರಳಿದ್ದ ಮಕ್ಕಳು, ಯಾರು ಇಲ್ಲದ ವೇಳೆ ಕೃಷಿ ಹೊಂಡದ ಬಳಿ ತೆರಳಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ಕೃಷಿಹೊಂಡ ತುಂಬಿಕೊಂಡಿದ್ದು, ಆಕಸ್ಮಿಕವಾಗಿ ಮಕ್ಕಳು ತುಂಬಿದ ಹೊಂಡದಲ್ಲಿ ಕಾಲು ಜಾರಿ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ.
ಮಕ್ಕಳು ಹೊಂಡಕ್ಕೆ ಜಾರಿ ಬಿದ್ದ ವಿಷಯ ತಿಳಿದ ಕುಟುಂಬದವರು ಮಕ್ಕಳನ್ನು ಹೊಂಡದಿಂದ ಹೊರ ತೆಗೆದು ಕೂಡಲೇ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಕ್ಕಳ ತಪಾಸಣೆ ನಡೆಸಿದ ಡಾ.ಮನೋಜ ಅವರು ಮಕ್ಕಳು ಮೃತಪಟ್ಟಿರುವ ಬಗ್ಗೆ ದೃಢಪಡಿಸಿದರು ಎಂದು ಕುಟುಂಬದವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿ, ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.