×
Ad

ಗವಿಸಿದ್ದಪ್ಪನಿಂದ ನನ್ನ ಮಗಳ ಮೇಲೆ ಅತ್ಯಾಚಾರ ಆಗಿದೆ; ನ್ಯಾಯ ಕೊಡಿಸಿ ಎಂದು ಡಿ ಸಿ ಕಚೇರಿ ಮುಂದೆ ಧರಣಿ ಕುಳಿತ ಸಂತ್ರಸ್ತ ಬಾಲಕಿಯ ತಾಯಿ

►ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣ

Update: 2025-08-14 13:00 IST

ಕೊಪ್ಪಳ: ಕೆಲ ದಿನಗಳ ಹಿಂದೆ ಕೊಲೆಯಾದ ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯ ತಾಯಿ ಮತ್ತು ಸಹೋದರಿಯರು ನನ್ನ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಲಾಗಿದೆ ಮತ್ತು ನನಗೆ ಬೆದರಿಕೆ ಹಾಕಲಾಗಿದೆ ನನ್ನ ಮಗಳಿಗೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿ ಧರಣಿ ಕುಳಿತಿದ್ದಾರೆ.

ಈ ವೇಳೆ ಮಾತನಾಡಿದ ಬಾಲಕಿಯ ತಾಯಿ, ಕಡು ಬಡವಳಾದ ನನಗೆ ಮೂರು ಹೆಣ್ಣು ಮಕ್ಕಳು. ನನ್ನ ಗಂಡ ತೀರಿಕೊಂಡಿದ್ದು, ನನಗೆ ಯಾರೂ ಇಲ್ಲದ ಕಾರಣ ನನ್ನ ಮಕ್ಕಳನ್ನು ನಾನೇ ದುಡಿದು ಸಾಕಬೇಕು. ನನ್ನ ಕೈಯಿಂದ ಆದಷ್ಟು ಮಟ್ಟಿಗೆ ನಾನು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇನೆ. ನನ್ನ 16 ವರ್ಷದ ಮಗಳು ಕಂಪ್ಯೂಟರ್ ತರಬೇತಿಗೆ ಹೋಗುವಾಗ ಅವಳ ಹಿಂದೆ ಬಿದ್ದ ಕೊಲೆಯಾದ ಗವಿಸಿದ್ದಪ್ಪ, ತನ್ನನ್ನು ಪ್ರೀತಿಸು ಎಂದು ಒತ್ತಾಯಿಸಿ, ಆಕೆಯನ್ನು ಪುಸಲಾಯಿಸಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ" ಎಂದು ಆರೋಪಿಸಿದ್ದಾರೆ.

"ಗವಿಸಿದ್ದಪ್ಪನಿಗೆ ತಿಳಿ ಹೇಳಿದಾಗ ಆತ ನನಗೆ ಬೆದರಿಕೆ ಹಾಕಿದ. ಹಾಗಾಗಿ ಈ ವಿಷಯವನ್ನು ಆತನ ತಂದೆ, ತಾಯಿ ಮತ್ತು ಅಕ್ಕನಿಗೆ ತಿಳಿಸಿದಾಗ ಅವರು "ನಿನ್ನ ಮಗಳೇ ನಮ್ಮ ಹುಡುಗನ ಹತ್ತಿರ ಬರುತ್ತಾಳೆ. ಹಾಗಾಗಿ ನೀನು ಸುಮ್ಮನೆ ಇದ್ದರೆ ಸರಿ. ಇಲ್ಲಾ ಅಂದರೆ ನಿನ್ನನ್ನು ಮತ್ತು ನಿನ್ನ ಮಗಳನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಕಾರಣ ಮತ್ತು ಮರ್ಯಾದೆಗೆ ಅಂಜಿ ಎಲ್ಲವನ್ನೂ ನಾವು ಸಹಿಸಿಕೊಂಡೆವು" ಎಂದು ಹೇಳಿದ್ದಾರೆ.

 "ನಿನ್ನ ವಿಡಿಯೋ ಇದೆ ಎಂದು ನನ್ನ ಮಗಳಿಗೆ ಬ್ಲಾಕ್ ಮೇಲ್ ಮಾಡುತ್ತಾ, ಗವಿಸಿದ್ದಪ್ಪ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಾ ಬಂದಿದ್ದ. ಇಷ್ಟೆಲ್ಲಾ ಆದರೂ ಸಹ ಇನ್ನೂ ಅಪ್ರಾಪ್ತೆಯಾದ ನನ್ನ ಮಗಳ ಜೊತೆ ಪ್ರೀತಿ ಹೆಸರಲ್ಲಿ ಮಾಡಿರುವುದು ಅನ್ಯಾಯವೇ ಆಗಿದೆ. ಅಪ್ರಾಪ್ತಳಾದ ನನ್ನ ಮಗಳ ಮೇಲೆ ಆದ ಅತ್ಯಾಚಾರಕ್ಕೆ ನ್ಯಾಯ ಕೊಡಿಸಿ ಮತ್ತು ಈ ಅತ್ಯಾಚಾರಕ್ಕೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಜಿಲ್ಲಾಧಿಕಾರಿಗಳಿಗೆ ತಾಯಿ ಮತ್ತು ಸಹೋದರಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News