ಸಿದ್ದರಾಮಯ್ಯ ಸರಕಾರ 11,200 ಕೋಟಿ ರೂ. ಅನುದಾನ ಜನರ ಖಾತೆಗೆ ವರ್ಗಾಯಿಸಿ ಜನಪರ ಕಲ್ಯಾಣಕ್ಕೆ ಮಾದರಿಯಾಗಿದೆ: ಬಸವರಾಜ ರಾಯರೆಡ್ಡಿ
ಕುಕನೂರು: ಜನಪರ ಕಲ್ಯಾಣ ಯೋಜನೆಗಳನ್ನು ನೇರವಾಗಿ ಜನರಿಗೆ ತಲುಪಿಸಿರುವ ದೇಶದ ಏಕೈಕ ಸರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರವಾಗಿದೆ. ಇದುವರೆಗೆ 11,200 ಕೋಟಿ ಅನುದಾನವನ್ನು ನೇರವಾಗಿ ಸಾರ್ವಜನಿಕರಿಗೆ ವರ್ಗಾಯಿಸಿರುವ ಹೆಗ್ಗಳಿಕೆ ಸಿದ್ದರಾಮಯ್ಯನವರದ್ದಾಗಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ತಾಲೂಕಿನ ಇಟಗಿ ಹಾಗೂ ಮಂಡಲಗಿರಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಬಸವರಾಜ ರಾಯರೆಡ್ಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ರಾಜ್ಯದಲ್ಲಿ ಸುಸ್ಥಿರ ಹಾಗೂ ಸದೃಢ ಆಡಳಿತ ನೀಡುತ್ತಿದೆ. ಜನರಿಗೆ ನೇರ ಆರ್ಥಿಕ ನೆರವು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಶಕ್ತಿ ಯೋಜನೆ ವಿಶ್ವದಾಖಲೆಯೊಂದಿಗೆ ಗಿನ್ನಿಸ್ ಬುಕ್ನಲ್ಲಿ ದಾಖಲಾಗಿದೆ. ಕೇವಲ ಎರಡು ವರ್ಷಗಳಲ್ಲಿ 680 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ತಿಳಿಸಿದರು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮ್ಯಾದನೇರಿ, ಯಲಬುರ್ಗಾ–ಸಂಕನೂರು ಕ್ರಾಸ್ ಹಾಗೂ ಮುಂಡರಿಗಿ–ಕುದುರೆಮೂತಿ ಮಾರ್ಗಗಳಲ್ಲಿ ರಾಷ್ಟ್ರ ಹೆದ್ದಾರಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲೇ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಬಸವರಾಜ ರಾಯರೆಡ್ಡಿ ಭರವಸೆ ನೀಡಿದರು.
ಮಂಡಲಗಿರಿ ಗ್ರಾಮದ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳಿಂದ ಸಾರ್ವಜನಿಕ ಸಮುದಾಯ ಭವನಕ್ಕಾಗಿ ಜಮೀನು ದಾನ ಮಾಡಿರುವುದು ಶ್ಲಾಘನೀಯವಾಗಿದೆ. ಬೃಹತ್ ಹಾಗೂ ಸುಸಜ್ಜಿತ ಭವನ ನಿರ್ಮಾಣದಿಂದ ಬಡವರಿಗೆ ಮದುವೆ ಸೇರಿದಂತೆ ವಿವಿಧ ಸಮಾರಂಭಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಶೀಘ್ರದಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಉತ್ತಮ, ಸುಶಿಕ್ಷಿತ ಹಾಗೂ ಜನಪರ ಕಾಳಜಿ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅಭಿವೃದ್ಧಿಗೆ ಸ್ಪಂದಿಸದವರನ್ನು ತಿರಸ್ಕರಿಸಬೇಕು ಎಂದು ತಿಳಿಸಿದರು.
ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ(ಗದಗ)ದ ಪೂಜ್ಯ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡುತ್ತಿರುವ ಶಾಸಕ ಬಸವರಾಜ ರಾಯರೆಡ್ಡಿಯವರ ಕಾರ್ಯವನ್ನು ಶ್ಲಾಘಿಸಿದರು. ತಳಕಲ್ ಗ್ರಾಮದಲ್ಲಿ ಆರಂಭಗೊಂಡ ಇಂಜಿನಿಯರಿಂಗ್ ಕಾಲೇಜು ಅವರ ಶೈಕ್ಷಣಿಕ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸುರೇಶ್ ಹಿಟ್ನಾಳ್ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಹೃದಯ ಹಾಗೂ ಕ್ಯಾನ್ಸರ್ ಚಿಕಿತ್ಸೆಗಾಗಿ ವಿಶೇಷ ಆಸ್ಪತ್ರೆಯ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ ನೇಗಿ, ತಹಸೀಲ್ದಾರ್ ಬಸವರಾಜ್ ಬೆಣ್ಣೆ ಶಿರೂರು, ತಾಲೂಕು ಪಂಚಾಯತ್ ಇಒ ಸಂತೋಷ್ ಬಿರಾದಾರ್ ಪಾಟೀಲ್, ಮಂಡಲಗಿರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಿಂಗಮ್ಮ ದ್ಯಾಮನಗೌಡ್ರು, ಇಟಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಮ್ಮ ಭಜಂತ್ರಿ, ಹನುಮಂತಗೌಡ ಚಂಡೂರು, ಕಾಸಿಂಸಾಬ್ ತಳಕಲ್, ಚಂದ್ರಶೇಖರಯ್ಯ ಹಿರೇಮಠ, ಅಶೋಕ ತೋಟದ, ಸಂಗಮೇಶ್ ಗುತ್ತಿ, ಹಂಪಯ್ಯ ಹಿರೇಮಠ, ಡಾ. ಜಂಬಣ್ಣ ಅಂಗಡಿ, ಹನುಮಂತಪ್ಪ ಉಪ್ಪಾರ್, ಸಿದ್ದಯ್ಯ ಕಳ್ಳಿಮಠ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಸದಸ್ಯರಿಗೆ ವಿತರಿಸಲಾಗುತ್ತಿದ್ದ 10 ಕೆಜಿ ಅಕ್ಕಿಯ ಬದಲಾಗಿ, ಫೆಬ್ರವರಿಯಿಂದ 5 ಕೆಜಿ ಅಕ್ಕಿಯೊಂದಿಗೆ ಆಹಾರ ಸಾಮಗ್ರಿಗಳನ್ನು ಒಳಗೊಂಡ ಇಂದಿರಾ ಕಿಟ್ ವಿತರಿಸಲಾಗುವುದು. ಕಿಟ್ನಲ್ಲಿ 1 ಕೆಜಿ ತೊಗರಿ ಬೇಳೆ, 1 ಕೆಜಿ ಹೆಸರುಕಾಳು, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು ಹಾಗೂ 1 ಲೀಟರ್ ಅಡುಗೆ ಎಣ್ಣೆ ಸೇರಿರುತ್ತದೆ. ಈ ಕ್ರಮದಿಂದ ಬಡ ಕುಟುಂಬಗಳಿಗೆ ನೆರವಾಗಲಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.