Mandya | ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಬೆಂಕಿ ಹಚ್ಚಿದ ಯುವತಿಯ ತಂದೆ
ಮಂಡ್ಯ: ಮಗಳನ್ನು ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಯುವತಿಯ ತಂದೆ ಬೆಂಕಿಹಚ್ಚಿರುವ ಘಟನೆ ಮದ್ದೂರು ತಾಲೂಕು ಕೆ.ಬೆಳ್ಳೂರು ಗ್ರಾ.ಪಂ. ಚುಂಚನಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಯುವತಿಯ ತಂದೆ ಚನ್ನೇಗೌಡ ಈ ಕೃತ್ಯ ಎಸಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಸಾವುನೋವು ಆಗಿಲ್ಲ. ಅಗ್ನಿಶಾಮಕ ದಳದವರು ಬರುವ ವೇಳೆಗೆ ಮನೆ ಸಂಪೂರ್ಣ ಸುಟ್ಟುಹೋಗಿತ್ತು ಎಂದು ತಿಳಿದು ಬಂದಿದೆ.
ಚುಂಚನಹಳ್ಳಿ ಗ್ರಾಮದವನೇ ಆದ ವಿನೋದ್ ಎಂಬ ಯುವಕ ತನ್ನ ಮನೆಯ ಪಕ್ಕದ ಚನ್ನೇಗೌಡ ಅವರ ಮಗಳು ಕಾವ್ಯ ಅವರನ್ನು ಪ್ರೀತಿಸುತ್ತಿದ್ದು, ಯುವತಿಯ ಮನೆಯವರ ವಿರೋಧದ ನಡುವೆ ಕಳೆದ ಗುರುವಾರ ಮದುವೆಯಾಗಿದ್ದರು ಎನ್ನಲಾಗಿದೆ.
ತನ್ನ ವಿರೋಧದ ನಡುವೆಯೂ ಮದುವೆ ಆಗಿರುವುದರಿಂದ ಕುಪಿತಗೊಂಡಿದ್ದ ಚನ್ನೇಗೌಡ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನವೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ ಎಂದು ವರದಿಯಾಗಿದೆ.