ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವುದನ್ನು ವಿರೋಧಿಸುವುದು ನಾಗರಿಕ ಸಮಾಜದ ಲಕ್ಷಣ ಅಲ್ಲ : ಎಚ್.ವಿಶ್ವನಾಥ್
"ಪ್ರತಾಪ್ ಸಿಂಹ, ನಿನ್ನ ಪ್ರತಾಪಕ್ಕೆ ಬಿಜೆಪಿ ಹೈಕಮಾಂಡ್ ಸೀಟೇ ಇಲ್ಲದ ಹಾಗೆ ಮಾಡಿದರು"
ಎಚ್.ವಿಶ್ವನಾಥ್
ಮೈಸೂರು, ಆ.30 : ʼಬೂಕರ್ ಪ್ರಶಸ್ತಿʼ ಪುರಸ್ಕೃತೆ ಬಾನು ಮುಷ್ತಾಕ್ ಓರ್ವ ಮಹಿಳಾ ಸಾಧಕಿ. ರೈತ, ದಲಿತ, ಮಹಿಳೆಯರ ಪರ ಹೋರಾಟ ಮಾಡಿದವರು. ಪತ್ರಕರ್ತೆ, ವಕೀಲರಾಗಿ ಕೆಲಸ ಮಾಡಿದ್ದಾರೆ. ಇಡೀ ನಾಡು ಅವರನ್ನು ಗೌರವಿಸಿದೆ. ಅಂತವರು ದಸರಾ ಉದ್ಘಾಟನೆ ಮಾಡುವುದನ್ನು ವಿರೋಧಿಸುತ್ತಿರುವುದು ನಾಗರಿಕ ಸಮಾಜದ ಲಕ್ಷಣ ಅಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದ್ಯಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮದು ಬಹುತ್ವ ಭಾರತ, ಜಾತ್ಯತೀತ ರಾಷ್ಟ್ರ. ಅಂತಹದರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಂಸದ ಪ್ರತಾಪ್ ಸಿಂಹ, ಅಂತರಾಷ್ಟ್ರೀಯ ʼಬೂಕರ್ ಪ್ರಶಸ್ತಿʼ ಪುರಸ್ಕೃತೆ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದನ್ನು ಬಾಯಿಗೆ ಬಂದಹಾಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ʼಬೂಕರ್ʼ ಬಾನು ಮುಷ್ತಾಕ್ ಅವರಿಗೆ ಬಂದಿದೆ. ಪ್ರತಾಪಿಯಾಗಿ ಮಾತನಾಡುವ ಪ್ರತಾಪ್ ಸಿಂಹ ನೀನು ಬರೆಯುತ್ತಿದ್ದಲ್ಲ ಬೆತ್ತಲೆ ಪ್ರಪಂಚಕ್ಕೆ ಬೂಕರ್ ಬಂತಾ. ಹೊಟ್ಟೆ ಕಿಚ್ಚಿಗೆ ಏನೇನೋ ಮಾತನಾಡುವುದಲ್ಲ. ನಿನ್ನ ಪ್ರತಾಪಕ್ಕೆ ಬಿಜೆಪಿ ಹೈಕಮಾಂಡ್ ಸೀಟೇ ಇಲ್ಲದ ಹಾಗೆ ಮಾಡಿದರು ಎಂದು ಮಾಜಿ ಸಂಸದ ಪ್ರತಾಪ್ ಅವರ ವಿರುದ್ಧ ಹರಿಹಾಯ್ದರು.
ಶೋಭಾ ಕರಂದ್ಲಾಜೆ ಭಾರತ ಸರಕಾರದ ಮಂತ್ರಿ. ಇವರು ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಚಾಮುಂಡಿ ಬೆಟ್ಟವನ್ನು ನಿಮಗೆ ಯಾರು ಬರೆದುಕೊಟ್ಟವರು? ಹೀಗೆ ಹೇಳಲು ಅಧಿಕಾರ ಕೊಟ್ಟವರು ಯಾರು? ಇದು ಜನರ ಪ್ರಭುತ್ವ, ಜಾತಿ-ಪಂಥದ ಶರಾ ಬರೆದಿಲ್ಲ. ಇದು ಎಲ್ಲರ ದಸರಾ ಎಂದು ಹೇಳಿದರು.
ಬೀಫ್ ಎಕ್ಸ್ ಪೋರ್ಟ್ನಲ್ಲಿ ಗುಜರಾತ್ ನಂ.1 :
ವಿರೋಧ ಮಾಡುವುದು ನಾಗರಿಕವಾಗಿರಬೇಕೇ ಹೊರತು ಅಸಹ್ಯಕರವಾಗಿರಬಾರದು. ಬಾನು ಮುಷ್ತಾಕ್ ದನದ ಮಾಂಸ ತಿಂದು ಬರುತ್ತಾರೆ ಎನ್ನುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರೇ, ಗೋವಾ, ಗುಜರಾತ್, ಒರಿಸ್ಸಾದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿರುವವರು ಬಿಜೆಪಿಯವರು. ಬೀಫ್ ಎಕ್ಸ್ ಪೋರ್ಟ್ನಲ್ಲಿ ಗುಜರಾತ್ ನಂ.1 ಸ್ಥಾನದಲ್ಲಿದೆ. ಸುಮ್ಮನೇ ಬಾಯಿಗೆ ಬಂದ ಹಾಗೆ ಮಾತನಾಡಬಾರದು. ನಿಮ್ಮ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದರು.
ಸರ್ವಜನಾಂಗದ ತೋಟವಾಗಬೇಕು :
ಇಡೀ ಜಗತ್ತು ಜನಾಂಗೀಯ ದ್ವೇಷದ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಮೈಸೂರಿನಲ್ಲಿ ಜನಾಂಗೀಯ ದ್ವೇಷದ ರೀತಿಯ ಮಾತುಗಳು ಬರುತ್ತಿರುವುದು ಸರಿಯಲ್ಲ. ಕುವೆಂಪು ಅವರು ಹೇಳಿದ ಹಾಗೆ ಸರ್ವಜನಾಂಗದ ತೋಟವಾಗಬೇಕು, ಸೌಹಾರ್ದತೆ ಇರಬೇಕು. ಹಿಂದೂ, ಮುಸ್ಲಿಮ್ ಕ್ರಿಶ್ಚಿಯನ್ ಎಲ್ಲರೂ ಒಂದೇ ಎಂದು ಹೇಳಿದರು.
ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ದೇವರನ್ನು ಒಪ್ಪಲ್ಲ ಅಂದರು. ಅವರು ಉದ್ಘಾಟನೆ ಮಾಡಲಿಲ್ಲವೇ? ಬಾನು ಮುಷ್ತಾಕ್ ಗರ್ಭಗುಡಿ ಒಳಗಡೆ ಹೋಗಿ ಪೂಜೆ ಮಾಡುತ್ತಾರೆಯೇ? ಪುರೋಹಿತರು ಮಂಗಳಾರತಿ ಕೊಡುತ್ತಾರೆ ಅದನ್ನು ಸ್ವೀಕರಿಸಿ ದೀಪ ಹಚ್ಚಿ ಉದ್ಘಾಟನೆ ಮಾಡುತ್ತಾರೆ. ಅದನ್ನೇ ವಿರೋಧಿಸುವುದೇ? ಹಿಂದೂಗಳು ಎನ್ನುವ ನಿಮ್ಮನ್ನು ಪುರೋಹಿತರು ಗರ್ಭಗುಡಿಯೊಳಗೆ ಬಿಟ್ಟುಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು.
ಕನ್ನಡಮ್ಮನ ಬಗ್ಗೆ ಏನೋ ಮಾತನಾಡಿದರೂ ಎಂದರೆ ತಾಯಿ ಮಗನ ಬಗ್ಗೆ ಮಗ ತಾಯಿ ಬಗ್ಗೆ ಮಾತನಾಡಿದ ಹಾಗೆ. ಈಗಾಗಲೇ ಬಾನು ಮುಷ್ತಾಕ್ ಅವರು ಭುವನೇಶ್ವರಿ ಬಗ್ಗೆ ಮಾತನಾಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆಗ ಅವಮಾನ ಮಾಡಿದ್ದರು ಈಗ ಸನ್ಮಾನ ಆಗಿದೆ. ಅಲ್ಲಿಗೆ ಎಲ್ಲವೂ ಮುಗಿದಂತೆ ಎಂದರು.
ಬಾನು ಮುಷ್ತಾಕ್ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿದ್ದಾರೆ. ಅವರನ್ನು ಇಷ್ಟೆಲ್ಲಾ ಟೀಕೆ ಮಾಡುತ್ತಿದ್ದರೂ ಕನ್ನಡ ಹೋರಾಟ ಮಾಡುವವರು ಯಾಕೆ ಮಾತನಾಡುತ್ತಿಲ್ಲ. ಕನ್ನಡ ಮಂತ್ರಿ ಜಿಲ್ಲಾ ಉಸ್ತುವಾರಿ ಮಂತ್ರಿ ಯಾಕೆ ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದಾರೆ. ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ. ನೀವೆಲ್ಲಾ ಈಗ ಮಾತನಾಡಬೇಕು ಎಂದು ಒತ್ತಾಯಿಸಿದರು.
ʼಬೂಕರ್ ಪ್ರಶಸ್ತಿʼಯನ್ನು ಬಾನು ಮುಷ್ತಾಕ್ ಮತ್ತು ದೀಪಾ ಬಸ್ತಿ ಇಬ್ಬರೂ ಹಂಚಿಕೊಂಡಿದ್ದಾರೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಜೊತೆಗೆ ದೀಪಾ ಬಸ್ತಿ ಅವರನ್ನು ಕರೆಯಬೇಕಿತ್ತು. ಬಾನು ಮುಷ್ತಕ್ ನಾಡ ದಸರಾ ಉದ್ಘಾಟನೆ ಮಾಡಲಿ. ಸಂಜೆ ಅರಮನೆ ಅಂಗಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೀಪಾ ಬಸ್ತಿಯವರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿ ಗೌರವಿಸಬೇಕು ಎಂದು ಎಚ್.ವಿಶ್ವನಾಥ್ ಆಗ್ರಹಿಸಿದರು.
ಚಾಮುಂಡಿ ಬೆಟ್ಟ ಹಿಂದೂಗಳದ್ದು ಅನ್ನೋದು ತಪ್ಪು, ಹಿಂದೂಗಳದ್ದಲ್ಲ ಅನ್ನೋದು ತಪ್ಪು. ಇದು ಸರಕಾರಕ್ಕೆ ಸೇರಿದ್ದು. ಹಾಗಾಗಿ ಎಲ್ಲರಿಗೂ ಸೇರಬೇಕು.
- ಎಚ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ.
ಈ ಹಿಂದೆ ದಸರಾ ಆಚರಣೆ ಜಂಬೂ ಸವಾರಿಯಲ್ಲಿ ಅಂದಿನ ಮೈಸೂರು ಮಹರಾಜರು ಎರಡು ಬಾರಿ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ದಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನ ಚರಿತ್ರೆ ಇತಿಹಾಸವನ್ನು ಓದಬೇಕಿದೆ.
- ಎಚ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ.