ಛತ್ತೀಸ್ಗಢ |ಕರೆ, ಮೆಸೇಜ್ ಬ್ಲಾಕ್ ಮಾಡಿದ ಪ್ರಿಯಕರನನ್ನು ಇರಿದು ಹತ್ಯೆಗೈದ ಪ್ರೇಯಸಿ!
PC: x.com/ndtv
ಬಿಲಾಸ್ಪುರ: ಮೊಬೈಲ್ ಫೋನ್ ನಲ್ಲಿ ಕರೆ ಮತ್ತು ಮೆಸೇಜ್ ಬ್ಲಾಕ್ ಮಾಡಿದ ಪ್ರಿಯಕರನ ಜತೆ ವಾಗ್ವಾದ ನಡೆಸಿದ ಯುವತಿ ಆತನನ್ನು ಇರಿದು ಸಾಯಿಸಿದ ಘಟನೆ ಛತ್ತೀಸ್ಗಢದ ಬಿಲಾಸ್ ಪುರದಲ್ಲಿ ನಡೆದಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಇಡೀ ಪಟ್ಟಣದಲ್ಲಿ ಆಘಾತಕ್ಕೆ ಕಾರಣವಾಗಿದೆ.
ಸ್ಥಳೀಯ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಮ್ತ ಪ್ರಸಾದ್ ಸೂರ್ಯವಂಶಿ (25) ಎಂಬಾತ ಬಾಡಿಗೆ ಮನೆಯಲ್ಲಿ ವಾಸವಿದ್ದ. ಆತನಿಗೆ ರೋಶ್ನಿ ಸೂರ್ಯವಂಶಿ (22) ಎಂಬಾಕೆಯನ್ನು ಆರು ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿತ್ತು. ಇಬ್ಬರ ನಡುವೆ ಸಂಬಂಧ ಏರ್ಪಟ್ಟಿತ್ತು.
ಕಳೆದ ಎರಡು ಮೂರು ದಿನಗಳಿಂದ ಕಮ್ತ ಪ್ರಸಾದ್ ಆಕೆಯ ಜತೆ ಮಾತನಾಡುವುದು ನಿಲ್ಲಿಸಿದ್ದು, ನಂಬರ್ ಮತ್ತು ಮೆಸೇಜ್ ಬ್ಲಾಕ್ ಮಾಡಿದ್ದ. ಪ್ರಿಯಕರ ಬೇರೆ ಮಹಿಳೆಯ ಜತೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಪ್ರಿಯಕರನ ಮನೆಗೆ ಚಾಕುವಿನೊಂದಿಗೆ ತೆರಳಿದ ರೋಶ್ನಿ ಈ ಕೃತ್ಯ ಎಸಗಿದ್ದಾಳೆ.
ಕಮ್ತ ಬಾಗಿಲು ತೆಗೆಯುತ್ತಿದ್ದಂತೆ ಯುವತಿ ಮೊಬೈಲ್ ಫೋನ್ ನೀಡುವಂತೆ ಒತ್ತಾಯಿಸಿದ್ದಾಳೆ. ನಿರಾಕರಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆಯಿತು. ಆಗ ಯುವತಿ ನೇರವಾಗಿ ಯುವಕನ ಎದೆಗೆ ಚುಚ್ಚಿದ್ದಾಳೆ. ಅದೇ ಕೊಠಡಿಯಲ್ಲಿ ವಾಸವಿದ್ದ ಸ್ನೇಹಿತ ಹೋಗಿ ನೋಡಿದಾಗ ಕಮ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ.