ಸಂವಿಧಾನದ ಪೀಠಿಕೆ ಹೆತ್ತವರಂತೆ, ನೀವು ಎಷ್ಟೇ ಪ್ರಯತ್ನಿಸಿದರೂ ಬದಲಿಸಲು ಸಾಧ್ಯವಿಲ್ಲ: ಧನ್ಕರ್
ಜಗದೀಪ ಧನ್ಕರ್ | PTI
ಕೊಚ್ಚಿ(ಕೇರಳ): ಭಾರತೀಯ ಸಂವಿಧಾನದ ಪೀಠಿಕೆಯು ಮಕ್ಕಳಿಗೆ ಹೆತ್ತವರಂತೆ, ಯಾರು ಎಷ್ಟೇ ಪ್ರಯತ್ನಿಸಿದರೂ ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ ಧನ್ಕರ್ ಅವರು ಸೋಮವಾರ ಇಲ್ಲಿ ಹೇಳಿದರು.
ಸಂವಿಧಾನದ ಪೀಠಿಕೆಯ ಕುರಿತು ಹಲವಾರು ವಿವಾದಗಳಿವೆ. ಭಾರತೀಯ ಸಂವಿಧಾನದ ಪೀಠವನ್ನು ಹೆತ್ತವರಿಗೆ ಹೋಲಿಸಬಹುದು. ನೀವೆಷ್ಟೇ ಪ್ರಯತ್ನಿಸಿದರೂ ನಿಮ್ಮ ಹೆತ್ತವರನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇಲ್ಲಿಯ ನ್ಯಾಷನಲ್ ಯುನಿವರ್ಸಿಟಿ ಆಫ್ ಅಡ್ವಾನ್ಸಡ್ ಲೀಗಲ್ ಸ್ಟಡೀಸ್ನಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಧನ್ಕರ್, ಐತಿಹಾಸಿಕವಾಗಿ ಯಾವುದೇ ದೇಶದ ಸಂವಿಧಾನದ ಪೀಠಿಕೆಯನ್ನು ಎಂದಿಗೂ ಬದಲಿಸಲಾಗಿಲ್ಲ. ಆದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಭಾರತೀಯ ಸಂವಿಧಾನದ ಪೀಠಿಕೆಯನ್ನು ಬದಲಿಸಲಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
‘ನಮ್ಮ ಪ್ರಜಾಪ್ರಭುತ್ವದ ಅತ್ಯಂತ ಕರಾಳ ಅವಧಿಯಾಗಿದ್ದ ತುರ್ತು ಪರಿಸ್ಥಿತಿ ಸಮಯದಲ್ಲಿ ಸಾವಿರಾರು ಜನರು ಜೈಲು ಸೇರಿದ್ದಾಗ ಸಂವಿಧಾನದ ಪೀಠಿಕೆಯನ್ನು ಬದಲಿಸಲಾಗಿತ್ತು’ ಎಂದು ಅವರು ಹೇಳಿದರು.
ಸಂವಿಧಾನದ ಪೀಠಿಕೆಯಲ್ಲಿನ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳು ಎಂದಿಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಭಾಗವಾಗಿರಲಿಲ್ಲ,ತುರ್ತು ಪರಿಸ್ಥಿತಿ ಸಮಯದಲ್ಲಿ ಅವುಗಳನ್ನು ಸೇರಿಸಲಾಗಿತ್ತು. ಹೀಗಾಗಿ ಈ ಪದಗಳು ಪೀಠಿಕೆಯಲ್ಲಿ ಉಳಿಯಬೇಕೇ ಎಂಬ ಬಗ್ಗೆ ಪುನರ್ಪರಿಶೀಲನೆ ನಡೆಸಬೇಕು ಎಂಬ ಆರೆಸ್ಸೆಸ್ ಕರೆಯ ಹಿನ್ನೆಲೆಯಲ್ಲಿ ಧನ್ಕರ್ ಅವರ ಹೇಳಿಕೆ ಹೊರಬಿದ್ದಿದೆ.