ಸಿಗರೇಟ್ ವಿಚಾರಕ್ಕೆ ಅಂಗಡಿ ಮಾಲಕನ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕೌನ್ಸಿಲರ್; ವಿಡಿಯೊ ವೈರಲ್
Update: 2023-10-03 17:07 IST
Screengrab:X/@Benarasiyaa
ಕಾನ್ಪುರ: ರೂ. 15 ಮೊತ್ತದ ಸಿಗರೇಟ್ ಗಾಗಿ ಬಿಜೆಪಿಯ ಕೌನ್ಸಿಲರ್ ಹಾಗೂ ಅವರ ಸಹಚರರು ಸ್ಥಳೀಯ ಅಂಗಡಿ ಮಾಲಕರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಂಗಡಿ ಮಾಲಕನಿಗೆ ಬಿಜೆಪಿ ಕೌನ್ಸಿಲರ್ ಭವಾನಿ ಶಂಕರ್ ಹಾಗೂ ಅವರ ಸಹಚರರು ನಿಂದಿಸಿ, ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಮೊಬೈಲ್ ಫೋನ್ ನಲ್ಲಿ ಚಿತ್ರೀಕರಣಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಈ ಘಟನೆಯು ಕಾನ್ಪುರದ ಚಕೇರಿಯಲ್ಲಿನ ಅಜಯ್ ರಾಯ್ ಗುಪ್ತಾರ ಎಲೆ-ಅಡಿಕೆ ಅಂಗಡಿಯ ಬಳಿ ನಡೆದಿದ್ದು, ಬಿಜೆಪಿ ಕೌನ್ಸಿಲರ್ ಹಾಗೂ ಅವರ ಸಹಚರರು ಅವರಿಂದ ರೂ. 30 ಮೊತ್ತದ ಸಿಗರೇಟನ್ನು ಖರೀದಿಸಿದರೂ, ಕೇವಲ ರೂ. 15 ಪಾವತಿಸಿದ್ದಾರೆ ಎನ್ನಲಾಗಿದೆ. ಉಳಿದ ರೂ. 15 ಅನ್ನು ಪಾವತಿಸುವಂತೆ ಅಂಗಡಿಯ ಮಾಲಕನು ಮನವಿ ಮಾಡಿದಾಗ, ಭವಾನಿ ಶಂಕರ್ ಹಾಗೂ ಅವರ ಸಹಚರರು ಅಂಗಡಿ ಮಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.