×
Ad

ಮಣಿಪುರ ಹಿಂಸಾಚಾರ ಕುರಿತ ತನಿಖಾ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸಿ: ಸಿಬಿಐಗೆ ಸುಪ್ರೀಂ ಕೋರ್ಟ್‌ ಸೂಚನೆ

Update: 2026-02-14 12:32 IST
Photo| ANI

ಹೊಸ ದಿಲ್ಲಿ: ಮಣಿಪುರದ ಜನಾಂಗೀಯ ಹಿಂಸಾಚಾರ ಪ್ರಕರಣಗಳ ಕುರಿತು ನಡೆಸುತ್ತಿರುವ ತನಿಖಾ ವರದಿಯನ್ನು ಎರಡು ವಾರಗಳೊಳಗಾಗಿ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ 11 ಎಫ್ಐಆರ್ ಗಳ ತನಿಖೆ ನಡೆಸುತ್ತಿದೆ. ಮಣಿಪುರ ಜನಾಂಗೀಯ ಹಿಂಸಾಚಾರ ಸಂತ್ರಸ್ತರ ಪುನರ್ವಸತಿ ಮತ್ತು ಕಲ್ಯಾಣ ಕುರಿತು ಗೀತಾ ಮಿತ್ತಲ್ ಸಮಿತಿ ಮಾಡಿರುವ ಶಿಫಾರಸುಗಳನ್ನು ಸೂಕ್ತವಾಗಿ ಪಾಲಿಸಬೇಕು ಎಂದು ನ್ಯಾಯಾಲಯ ಇದೇ ವೇಳೆ ನಿರ್ದೇಶನ ನೀಡಿದೆ.

“ವೃಂದಾ ಗ್ರೋವರ್ ಅರ್ಜಿಯ ಸಂಬಂಧ ಸಿಬಿಐ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಲಿ. ಇಂತಹ ಪರಿಸ್ಥಿತಿಗಳಲ್ಲಿ ಸಂತ್ರಸ್ತರಿಗೆ ಉಚಿತ ಕಾನೂನು ನೆರವನ್ನು ನೀಡಲೇಬೇಕು” ಎಂದು ಹೇಳಿದ ನ್ಯಾಯಪೀಠ, “ಈ ಹಿಂದಿನ ಉದ್ವಿಗ್ನ ವಾತಾವರಣದ ಹಿನ್ನೆಲೆಯಲ್ಲಿ ಒಂದು ವೇಳೆ ಕಾನೂನು ನೆರವು ವಕೀಲರಿಗೆ ದೊರೆಯದೆ ಹೋಗಿದ್ದರೆ,  ಕಾನೂನು ನೆರವು ಒದಗಿಸಲು  ನಾವು ಆದೇಶಿಸುತ್ತಿದ್ದೇವೆ” ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ. ಜೋಯ್ ಮಲ್ಯ ಬಾಗ್ಚಿ ಅವರ ಪೀಠವು ಈ ಮಹತ್ವದ ಆದೇಶ ನೀಡಿದೆ.  ವಕೀಲೆ ವೃಂದಾ ಗ್ರೋವರ್ ಓರ್ವ ಸಂತ್ರಸ್ತೆಯ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಪರಿಹಾರ ಮತ್ತು ಪುನರ್ವಸತಿಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನ್ಯಾ. ಗೀತಾ ಮಿತ್ತಲ್ ಸಮಿತಿಯು ಈಗಾಗಲೇ ನ್ಯಾಯಾಲಯಕ್ಕೆ 42 ವರದಿಗಳನ್ನು ಸಲ್ಲಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News