ಮಹಾರಾಷ್ಟ್ರ ಸರಕಾರದಲ್ಲಿ ದೊಡ್ಡ ಬದಲಾವಣೆಯಾಗಲಿದೆ: ಆದಿತ್ಯ ಠಾಕ್ರೆ
ಮುಂಬೈ: ಮಹಾರಾಷ್ಟ್ರ ಸಂಪುಟ ವಿಸ್ತರಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಉದ್ಧವ್ ಠಾಕ್ರೆ ಪಾಳೆಯದ ಸದಸ್ಯ ಆದಿತ್ಯ ಠಾಕ್ರೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ ಸರಕಾರದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಅಜಿತ್ ಪವಾರ್, ಇತರ ಎಂಟು ಎನ್ಸಿಪಿ ಶಾಸಕರು ರಾಜ್ಯದ ಮೈತ್ರಿ ಸರಕಾರಕ್ಕೆ ಸೇರಿದ ನಂತರ ಶಿಂಧೆ ಅವರ ಮುಖ್ಯಮಂತ್ರಿ ಕುರ್ಚಿಗೆ ಅಪಾಯ ಎದುರಾಗಬಹುದು. "ರಾಜೀನಾಮೆ ನೀಡುವಂತೆ" ಶಿಂಧೆ ಅವರನ್ನು ಕೇಳಲಾಗಿದೆ ಎಂದು ಠಾಕ್ರೆ ಹೇಳಿದರು.
ಶಿಂಧೆ ನೇತೃತ್ವದ ಸರಕಾರದಲ್ಲಿ ಅಜಿತ್ ಪವಾರ್ ಪ್ರಸ್ತುತ ಉಪ ಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
"ಮುಖ್ಯಮಂತ್ರಿ (ಏಕನಾಥ್ ಶಿಂಧೆ) ಅವರಿಗೆ ರಾಜೀನಾಮೆ ನೀಡುವಂತೆ ತಿಳಿಸಲಾಗಿದೆ ಹಾಗೂ ಸರಕಾರದಲ್ಲಿ ಸ್ವಲ್ಪ ಬದಲಾವಣೆಯಾಗಬಹುದು ಎಂಬ ಮಾತನ್ನು ನಾನು ಕೇಳಲ್ಪಟ್ಟೆ" ಎಂದು ಆದಿತ್ಯ ಠಾಕ್ರೆ ಮಾಧ್ಯಮಗಳಿಗೆ ತಿಳಿಸಿದರು.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ವಿರುದ್ಧ ಬಂಡಾಯ ಎದ್ದಿರುವ ಅಜಿತ್ ಪವಾರ್ ಹಾಗೂ ಅವರ ಬೆಂಬಲಿಗರು ಮೈತ್ರಿ ಸರಕಾರಕ್ಕೆ ಸೇರ್ಪಡೆಗೊಂಡ ನಂತರ ಬಿಜೆಪಿ ಪಕ್ಷು ಏಕನಾಥ್ ಶಿಂಧೆ ಗುಂಪನ್ನು ಬದಿಗೊತ್ತುತ್ತಿದೆ ಎಂಬ ವರದಿಗಳ ಮಧ್ಯೆ ಠಾಕ್ರೆ ಅವರು ಈ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ, ಎನ್ಸಿಪಿ ನಾಯಕ ಅಜಿತ್ ಪವಾರ್ ರಾಜ್ಯ ಸರಕಾರಕ್ಕೆ ಸೇರಿದಾಗಿನಿಂದ ಶಿಂಧೆ ಅವರ ಗುಂಪಿನ ಸುಮಾರು 20 ಶಾಸಕರು ತಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶಿವಸೇನೆಯ (ಯುಬಿಟಿ) ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
"ಅಜಿತ್ ಪವಾರ್ ಹಾಗೂ ಇತರ ಎನ್ಸಿಪಿ ನಾಯಕರು ಸರಕಾರಕ್ಕೆ ಸೇರಿದಾಗಿನಿಂದ ಶಿಂಧೆ ಪಾಳೆಯದ 17-18 ಶಾಸಕರು ನಮ್ಮನ್ನು ಸಂಪರ್ಕಿಸಿದ್ದಾರೆ" ಎಂದು ಸಂಜಯ್ ರಾವುತ್ ಹೇಳಿದ್ದಾರೆ