×
Ad

ಹತ್ತಿಬೆಳೆಗೆ ಲದ್ದಿ ಹುಳು: ದುಬಾರಿ ದರಕ್ಕೆ ವ್ಯಾಪಾರಿಗಳಿಂದ ಕ್ರಿಮಿನಾಶಕ ಮಾರಾಟ

Update: 2025-09-29 15:23 IST

ರಾಯಚೂರು : ಜಿಲ್ಲೆಯಲ್ಲಿ ಹತ್ತಿ ಬೆಳೆಯ ಒಂದೊಂದು ಗಿಡಕ್ಕೂ ಎಂಟರಿಂದ ಹತ್ತು ಲದ್ದಿ ಹುಳ ಬಿದ್ದಿರುವುದು ರೈತರ ನಿದ್ದೆಗೆಡಿಸಿದೆ. ಲದ್ದಿ ಹುಳ ಹತೋಟಿಗಾಗಿ ರಾತ್ರಿಯೆಲ್ಲಾ ನಿದ್ದೆಗೆಟ್ಟು ರೈತರು ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿರುವುದು ಕಂಡು ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕ್ರಿಮಿನಾಶಕ ಮಾರಾಟಗಾರರು ಸೀದಾ ಹೊಲಗಳಿಗೆ ಲಗ್ಗೆಯಿಟ್ಟಿದ್ದು, ದುಬಾರಿ ದರದಲ್ಲಿ ತರಹೇವಾರಿ ಕೀಟನಾಶಕ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಪ್ರಸಕ್ತ ವರ್ಷ 1.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಗುರಿ ಮೀರಿ 1.86 ಲಕ್ಷ ಹೆಕ್ಟೇರ್‌ನಲ್ಲಿ ಹತ್ತಿ ಹಾಕಲಾಗಿದ್ದು, ಬಿತ್ತನೆ ಕ್ಷೇತ್ರ ಹೆಚ್ಚಳಗೊಂಡಿದೆ. ಉತ್ತಮ ಮಳೆ ಸುರಿದಿರುವುದು ಹತ್ತಿ ಬೆಳೆ ಹುಲುಸಾಗಿ ಬೆಳೆಯಲು ಕಾರಣವಾಗಿದೆ. ಆದರೆ ಕಳೆದ ಒಂದು ತಿಂಗಳಿಂದ ಹತ್ತಿ ಬೆಳೆಗೆ ಲದ್ದಿ ಹುಳಗಳ ಕಾಟ ಜೋರಾಗಿದ್ದು, ಪ್ರತಿ ಗಿಡಕ್ಕೆ 8-10 ಲದ್ದಿ ಹುಳಗಳು ಕಂಡುಬಂದಿವೆ. ನಾನ್ ಬಿಟಿ ಹತ್ತಿಗೆ ಮಾತ್ರ ಲದ್ದಿ ಹುಳ ಬಿದ್ದಿರಬಹುದೆಂದು ಅಂದಾಜಿಸಿದರೂ, ಶೇ.95ರಷ್ಟು ಬಿಟಿ ಹತ್ತಿ ಬೀಜದ ಗಿಡಗಳಿಗೂ ಲದ್ದಿ ಹುಳಗಳು ಆವರಿಸಿರುವುದು ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ರೈತರು.

ರೈತರ ಬದುಕು ಮಾನ್ಸೂನ್ ಜೊತೆಗಿನ ಜೂಜಾಟ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಆದರೆ ಪ್ರಸ್ತುತ ಉತ್ತಮ ಮಳೆ ಸುರಿದಿದೆ. ಆದರೆ ಬೆಳೆಗೆ ಲದ್ದಿಹುಳ ಒಕ್ಕರಿಸಿ, ರೈತರ ಬದುಕು ಛಿದ್ರವಾಗುವ ಹಂತದಲ್ಲಿದೆ. ಉತ್ತಮ ಮಳೆಯಾಗಿ ಸಮೃದ್ಧ ಫಸಲು ಕೈಗೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಲದ್ದಿಹುಳ ಆತಂಕ ಮೂಡಿಸಿದೆ. ಹತ್ತಿ ಬೆಳೆಗಾರರ ಆಸೆ ಆಕಾಂಕ್ಷೆಗಳಿಗೆ ಲದ್ದಿ ಹುಳ ಕೊಳ್ಳಿ ಇಟ್ಟಿದೆ. ಕಳೆದ ಒಂದು ತಿಂಗಳಿಂದ ಲದ್ದಿಹುಳ ಕಾಣಿಸಿಕೊಂಡಿದ್ದು, ಈಗಾಗಲೇ ಹತೋಟಿಗಾಗಿ ಸುಮಾರು 5-6 ಬಾರಿ ಕ್ರಿಮಿನಾಶಕ ಸಿಂಪಡಿಸಲಾಗಿದೆ. ಎಷ್ಟೇ ಸಿಂಪಡಿಸಿದರೂ ಲದ್ದಿಹುಳ ಸಾಯುತ್ತಿಲ್ಲ. ದುಬಾರಿ ಹಣ ಕೊಟ್ಟು ಖರೀದಿಸಿ ಕ್ರಿಮಿನಾಶಕ ಸಿಂಪಡಿಸಿದರೂ ಹತೋಟಿಗೆ ಬಾರದಿರುವುದಕ್ಕೆ ರೈತರು ಸುಸ್ತಾಗಿದ್ದಾರೆ.

ದುಬಾರಿ ಬೆಲೆಗೆ ಕ್ರಿಮಿನಾಶಕ ಮಾರಾಟ: ಹತ್ತಿಗೆ ಲದ್ದಿಹುಳ ಬಿದ್ದಿರುವುದನ್ನೇ ಬಂಡವಾಳ ಮಾಡಿಕೊಂಡ ಫರ್ಟಿಲೈಜರ್ ಅಂಗಡಿಗಳ ಮಾಕೆರ್ಟಿಂಗ್, ಸೇಲ್ಸ್ ಆಫೀಸರ್ಸ್ ರೈತರ ಹೊಲಗಳಲ್ಲೇ ಬೀಡು ಬಿಟ್ಟಿದ್ದು, ಹೊಲದಲ್ಲೇ ವ್ಯಾಪಾರ ಕುದುರಿಸಿ ವಿವಿಧ ರೀತಿಯ ಹೊಸ ಕಂಪೆನಿಗಳ ಕ್ರಿಮಿನಾಶಕ ಸಿಂಪಡಿಸಿದರೆ ಲದ್ದಿಹುಳ ಮಾಯವಾಗುತ್ತದೆಂದು ರೈತರಿಗೆ ಬಣ್ಣ ಬಣ್ಣದ ಭರವಸೆ ನೀಡುತ್ತಿದ್ದಾರೆ. ಕ್ರಿಮಿನಾಶಕ ಮಾರಾಟಕ್ಕಾಗಿ ಓಡಾಡಲು ಸಮಯಾವಕಾಶ ಇರದ ಕಾರಣ ವಾಹನ ಬಾಡಿಗೆ ಪಡೆದು, ಅದರಲ್ಲಿ ಕ್ರಿಮಿನಾಶಕ ಇಟ್ಟುಕೊಂಡು ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಿದ್ದಾರೆ. ತಾವು ಮಾರಾಟ ಮಾಡುವ ಕ್ರಿಮಿನಾಶಕ ಉತ್ಪನ್ನಗಳಲ್ಲಿ ಒಂದು ರೂಪಾಯಿಯೂ ಕಡಿಮೆ ಮಾಡುತ್ತಿಲ್ಲ ಎಂದು ಪ್ರತ್ಯಕ್ಷದರ್ಶಿ ರೈತ ಶರಣಪ್ಪ ತಿಳಿಸುತ್ತಾರೆ.

ಹತ್ತಿ ಬೆಳೆಗೆ ಸಹಜವಾಗಿ ಒಂದು ತಿಂಗಳಿಗೆ ಎರಡು ಬಾರಿ ಕ್ರಿಮಿನಾಶಕ ಸಿಂಪಡಿಸುತ್ತಿದ್ದ ರೈತರು ಲದ್ದಿಹುಳ ಹತೋಟಿಗಾಗಿ ತಿಂಗಳಲ್ಲೇ ಐದರಿಂದ ಆರು ಬಾರಿ ಸಿಂಪಡಿಸಲಾಗಿದೆ. ಒಂದು ಲೀಟರ್ ಕ್ರಿಮಿನಾಶಕಕ್ಕೆ ಕನಿಷ್ಠ 3-4 ಸಾವಿರ ವ್ಯಯಿಸಲಾಗುತ್ತಿದೆ. ಇಷ್ಟೆಲ್ಲಾ ಹಣ ಖರ್ಚು ಮಾಡಿದರೂ ಲದ್ದಿ ಹುಳ ಸಾಯುತ್ತಿಲ್ಲ. ಸಾಮಾನ್ಯವಾಗಿ ಪ್ರತಿ ಎಕರೆಗೆ 10ರಿಂದ 15ಸಾವಿರ ರೂಪಾಯಿ ಹೆಚ್ಚುವರಿ ಖರ್ಚು ಮಾಡಲಾಗಿದೆ. ಅಂದರೆ ಕಳೆದ ವರ್ಷದ ಕೃಷಿ ವೆಚ್ಚಕ್ಕಿಂತ ಪ್ರಸಕ್ತ ವರ್ಷದ ಕೃಷಿ ವೆಚ್ಚ ದುಪ್ಪಟ್ಟಾಗಲಿದೆ ಎನ್ನುತ್ತಾರೆ ತಜ್ಞ ರೈತರು. ಅದಲ್ಲದೆ ಲದ್ದಿ ಹುಳ ಇದೀಗ ನಿಯಂತ್ರಣವಾದರೂ 3-4 ಕ್ವಿಂಟಲ್ ಇಳುವರಿ ಕುಸಿತ ಸಾಧ್ಯತೆಯಿದೆ ಎನ್ನಲಾಗಿದ್ದು, ರೈತರಿಗೆ ಆರ್ಥಿಕ ಹೊಡೆತ ಬೀಳಲಿದೆ ಎಂದು ರೈತಾಪಿ ವಲಯದಲ್ಲಿ ಚರ್ಚೆ ನಡೆದಿದೆ.

ರಾತ್ರಿ ಹೊತ್ತಲ್ಲಿ ಕ್ರಿಮಿನಾಶಕ ಸಿಂಪಡಣೆ: ಹಗಲೊತ್ತಿನಲ್ಲಿ ಕ್ರಿಮಿನಾಶಕ ಸಿಂಪಡಿಸಿದರೆ ಲದ್ದಿ ಹುಳ ಸಾಯುತ್ತಿಲ್ಲ. ಏಕೆಂದರೆ ಹುಳಗಳು ಹಗಲಿನಲ್ಲಿ ಗಿಡದ ಕೆಳಭಾಗಕ್ಕೆ ಬರುತ್ತವೆ. ಆ ಸಮಯದಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಿದರೆ ಸಾಯುವುದಿಲ್ಲ. ರಾತ್ರಿ ಹೊತ್ತಲ್ಲಿ ಲದ್ದಿ ಹುಳಗಳು ಗಿಡದ ಮೇಲ್ಭಾಗದಲ್ಲಿ ಬಂದಾಗ ಕ್ರಿಮಿನಾಶಕ ಸಿಂಪಡಿಸುವುದರಿಂದ ಬೇಗ ಸಾಯುತ್ತವೆ ಎಂಬ ನಂಬಿಕೆಯ ಮೇಲೆ ಜಿಲ್ಲೆಯ ವಿವಿಧೆಡೆ ರಾತ್ರಿ ಹೊತ್ತಲ್ಲಿ ರೈತರು ನಿದ್ದೆ ತೊರೆದು ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದಾರೆ.

ಸದ್ಯ ನಾನ್ ಬಿಟಿಗೆ ಮಾತ್ರ ಲದ್ದಿ ಹುಳು ಬಿದ್ದಿದ್ದು, ಬಿಟಿ ಹತ್ತಿಗೆ ಯಾವುದೇ ಕಾರಣಕ್ಕೂ ಹುಳಗಳು ಬರುವುದಿಲ್ಲ, ಹೀಗಾಗಿ ಆತಂಕ ಬೇಡ. ರೈತರು ದುಬಾರಿ ಕೀಟನಾಶಕ ಬಳಸದೆ ಕಡಿಮೆ ವೆಚ್ಚದ ಕೀಟನಾಶಕ ಬಳಸಿ.

-ಡಾ.ಎ.ಜಿ.ಶ್ರೀನಿವಾಸ, ಮುಖ್ಯಸ್ಥರು, ಕೀಟಶಾಸ್ತ್ರ ವಿಭಾಗ, ಕೃಷಿ ವಿವಿ ರಾಯಚೂರು

ಹತ್ತಿ ಬೆಳೆಗೆ ಲದ್ದಿ ಹುಳು ಬಿದ್ದಿರುವ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಬಳಿಕ ಸಮಸ್ಯೆಗೆ ಕ್ರಮವಹಿಸುತ್ತೇನೆ.

-ಪ್ರಕಾಶ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ರಾಯಚೂರು

ನಾನ್ ಬಿಟಿಗೆ ಮಾತ್ರ ಲದ್ದಿ ಹುಳು ಬಿದ್ದಿದ್ದೇ ಆದರೆ ಒಂದು ಸಾಲಿನ ಎಲ್ಲ ಗಿಡಗಳಿಗೂ ಲದ್ದಿ ಹುಳು ಏಕೆ ಬೀಳುತ್ತವೆ. ಹೀಗಾಗಿ ನಾನ್ ಬಿಟಿ ಜೊತೆಗೆ ಬಿಟಿ ಹತ್ತಿಗೂ ಲದ್ದಿ ಹುಳು ಬಿದ್ದಿರಬಹುದು.

-ಶರಣಪ್ಪ, ರೈತ, ರಾಯಚೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು

contributor

Similar News