×
Ad

ತ್ವರಿತ ನ್ಯಾಯದ ಕಲ್ಪನೆ-ಅಂತಿಮ ನ್ಯಾಯದ ಕನಸು

Update: 2026-01-23 12:17 IST

ವಿಕಾಸದತ್ತ ಸಾಗುತ್ತಿರುವ ಆಧುನಿಕ ಡಿಜಿಟಲ್ ಭಾರತದಲ್ಲಿ ಜಿಡಿಪಿ, ಶೇರು ಮಾರುಕಟ್ಟೆಯ ಸೂಚ್ಯಂಕಗಳು ಏರುತ್ತಿರುವ ಹಾಗೆಯೇ ಸಾಮಾಜಿಕ ಅನ್ಯಾಯಗಳೂ, ಮಹಿಳಾ-ಜಾತಿ ದೌರ್ಜನ್ಯಗಳೂ, ಅಪರಾಧಗಳೂ ಸಹ ಹೆಚ್ಚಾಗುತ್ತಿವೆ. ಸಂಸತ್ತನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿಂದ ತಳಮಟ್ಟದ ಪೊಲೀಸ್ ಅಧಿಕಾರಿಗಳವರೆಗೂ ವ್ಯಾಪಿಸಿರುವ ಲೈಂಗಿಕ ದೌರ್ಜನ್ಯದ ಪ್ರಕರಣಗಳು, ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತಿವೆ.

ಭಾರತೀಯ ನ್ಯಾಯಾಂಗದ ಕ್ರಿಯಾಶೀಲ ಹಸ್ತಕ್ಷೇಪ ಮತ್ತು ಸಲಹೆಗಳು ಇಲ್ಲದೆ ಹೋಗಿದ್ದರೆ, ಈ ವೇಳೆಗೆ ನಮ್ಮ ಸಮಾಜ ಲೈಂಗಿಕ ದೌರ್ಜನ್ಯಗಳ ಬೃಹತ್ ಬಯಲಿನ ಹಾಗೆ ಕಾಣುತ್ತಿತ್ತು ಎನಿಸುತ್ತಿದೆ. ಆಧುನಿಕ ನಾಗರಿಕತೆಯನ್ನು ಪ್ರತಿನಿಧಿಸುವ 21ನೇ ಶತಮಾನದ ಡಿಜಿಟಲ್ ಭಾರತ, ಈ ನಿಟ್ಟಿನಲ್ಲಿ ಅನ್ಯ ಸಮಾಜಗಳಿಗೆ ಒಂದು ನೈತಿಕ-ಮಾನವೀಯ ಮಾದರಿಯನ್ನು ಸೃಷ್ಟಿಸಬೇಕಿತ್ತು. ಆದರೆ ದಿನದಿಂದ ದಿನಕ್ಕೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು ಸಮಾಜದ ಎಲ್ಲ ವಲಯಗಳಲ್ಲೂ, ಎಲ್ಲ ಸ್ತರಗಳಲ್ಲೂ ಹೆಚ್ಚಾಗುತ್ತಿವೆ. ಅಪರಾಧಿಕ ಜಗತ್ತು ಹಿಗ್ಗುತ್ತಲೇ ಇದೆ. ಪಶ್ಚಾತ್ತಾಪ ಅಥವಾ ಪ್ರಾಯಶ್ಚಿತ್ತದ ಪರಿವೆಯೇ ಇಲ್ಲದ ಮುಂದುವರಿದ ಸಮಾಜವೊಂದು ‘ಇಷ್ಟು ದೊಡ್ಡ ದೇಶದಲ್ಲಿ ಇವೆಲ್ಲವೂ ಸಹಜ’ ಎಂದು ಭಾವಿಸುವ ವಿಕೃತ ನಿಲುವಿಗೆ ಅಂಟಿಕೊಂಡಿದೆ.

ಮಹಿಳಾ ಸಂಕುಲದ ಸ್ಥಿತಿಗತಿ

ಅಮೆರಿಕದ ಜಾರ್ಜ್‌ಟೌನ್ ಇನ್‌ಸ್ಟಿಟ್ಯೂಟ್ ಫಾರ್ ವುಮೆನ್ ಪೀಸ್ ಆಂಡ್ ಸೆಕ್ಯುರಿಟಿ (GIWPS) ಮತ್ತು ನಾರ್ವೆಯ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಓಸ್ಲೋ (PRIO) ಪ್ರತಿವರ್ಷ ನಡೆಸುವ ಸಮೀಕ್ಷೆಯಲ್ಲಿ ಮಹಿಳೆಯರು, ಶಾಂತಿ ಮತ್ತು ಭದ್ರತೆಯ ಸೂಚ್ಯಂಕವನ್ನು ಪ್ರಕಟಿಸಲಾಗುತ್ತದೆ. 181 ದೇಶಗಳನ್ನು ಸಮೀಕ್ಷೆ ನಡೆಸಲಾಗುತ್ತದೆ. ಈ ಸೂಚ್ಯಂಕದಲ್ಲಿ ಕಳೆದ ವರ್ಷ 128ನೇ ಸ್ಥಾನದಲ್ಲಿದ್ದ ಭಾರತ ಈಗ 131ನೇ ಸ್ಥಾನಕ್ಕೆ ಕುಸಿದಿದೆ. ಈ ಕುಸಿತಕ್ಕೆ ಗುರುತಿಸಲಾಗಿರುವ ಕಾರಣಗಳೆಂದರೆ ಲಿಂಗ ಅಸಮಾನತೆ, ಸ್ತ್ರೀ ಪುರುಷರ ನಡುವಿನ ತಾರತಮ್ಯ, ಮಹಿಳೆಯರಿಗೆ ಸೀಮಿತ ಅವಕಾಶಗಳು ಮತ್ತು ಸುರಕ್ಷಿತ ವಾತಾವರಣದ ಅಭಾವ. ಈ ಸಮೀಕ್ಷೆಯನ್ನು ದೇಶವಿರೋಧಿ ಎಂದು ಅಲ್ಲಗಳೆಯುವ ಬದಲು, ನೆಲದ ವಾಸ್ತವಗಳ ಕಡೆಗೆ ಗಮನಹರಿಸುವುದು ವಿವೇಕಯುತ ಕ್ರಮ.

ಏಕೆಂದರೆ ಈ ಸಮೀಕ್ಷೆಯಲ್ಲಿ ನೀಡಿರುವ ಕಾರಣಗಳು ಅಸಂಬದ್ಧವೇನಲ್ಲ ಅಥವಾ ಭಾರತದಲ್ಲಿ ಮಹಿಳಾ ಸಮೂಹ ಎದುರಿಸುತ್ತಿರುವ ಜಟಿಲ ಸಮಸ್ಯೆಗಳಿಂದ ಭಿನ್ನವೂ ಅಲ್ಲ. ಈ ಸಂಕೀರ್ಣ ಪರಿಸ್ಥಿತಿಯಲ್ಲಿ ಆಧುನಿಕ ಸಮಾಜ ಗಮನಿಸಬೇಕಿರುವುದು ದೇಶಾದ್ಯಂತ ಪೊಕ್ಸೊ (Protection of Children from Sexual Offences) ಪ್ರಕರಣಗಳ ಹೆಚ್ಚಳ. ಅಪ್ರಾಪ್ತ ವಯಸ್ಕ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳಿಗೆ ಪರಿಹಾರ ಒದಗಿಸುವ ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಸುವ ಈ ಕಾಯ್ದೆಯ ಅಡಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದಾಗ, ಮೇಲಿನ ವರದಿಯನ್ನು ಉತ್ಪ್ರೇಕ್ಷೆ ಎಂದಾಗಲಿ, ದುರುದ್ದೇಶಪೂರಿತ ಎಂದಾಗಲಿ ತಳ್ಳಿಹಾಕಲಾಗುವುದಿಲ್ಲ. ಪೊಕ್ಸೊ ಕಾಯ್ದೆಯಡಿ ಆರೋಪಿಗಳ ಪಟ್ಟಿಯಲ್ಲಿ ರಾಜಕೀಯ ನಾಯಕರೂ, ಆಧ್ಯಾತ್ಮಿಕ ನೇತಾರರೂ, ಶಿಕ್ಷಕರೂ, ಮಠಾಧೀಶರೂ ಇರುವುದು, ಲೈಂಗಿಕ ದೌರ್ಜನ್ಯದ ವಿಸ್ತಾರ ಮತ್ತು ವ್ಯಾಪ್ತಿಯನ್ನು ಸೂಚಿಸುತ್ತದೆ.

ಪೊಕ್ಸೊ ವಿಲೇವಾರಿ ಮತ್ತು ಅಂತಿಮ ನ್ಯಾಯ

2025ರಲ್ಲಿ ದೇಶಾದ್ಯಂತ ತ್ವರಿತಗತಿಯ ವಿಶೇಷ ನ್ಯಾಯಾಲಯಗಳ ಮೂಲಕ 87,754 ಪೊಕ್ಸೊ ಮೊಕದ್ದಮೆಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ವರದಿಯಾಗಿದೆ. ಇದು ನಿಜಕ್ಕೂ ಪ್ರಶಂಸಾರ್ಹ ವಿಚಾರ. ಆದರೆ ಇದೇ ವರ್ಷದಲ್ಲಿ ದಾಖಲಾಗಿರುವ ಹೊಸ ಪ್ರಕರಣಗಳ ಸಂಖ್ಯೆ 80,320. ಇದು ಏನನ್ನು ಸೂಚಿಸುತ್ತದೆ? ಹೆಣ್ಣು-ಗಂಡು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು (ಹೆಣ್ಣು ಮಕ್ಕಳ ಪ್ರಮಾಣವೇ ಹೆಚ್ಚಾಗಿರುವುದು ವಾಸ್ತವ) ಅವ್ಯಾಹತವಾಗಿ, ನಿರ್ಭಿಡೆಯಿಂದ ನಡೆಯುತ್ತಿವೆ ಎಂದಲ್ಲವೇ? ಸರಾಸರಿ ದಿನಕ್ಕೆ 220 ಮಕ್ಕಳು ದೌರ್ಜನ್ಯಕ್ಕೊಳಗಾಗುತ್ತಿರುವುದು, ನಾಗರಿಕತೆಯನ್ನೇ ತಲೆತಗ್ಗಿಸುವಂತೆ ಮಾಡುವ ವಿದ್ಯಮಾನ ಅಲ್ಲವೇ? ಹೆಚ್ಚಿನ ಪ್ರಕರಣಗಳನ್ನು ವಿಲೇವಾರಿ ಮಾಡುವುದು ನ್ಯಾಯಾಂಗದ ದಕ್ಷತೆ ಮತ್ತು ಕಾರ್ಯಕ್ಷಮತೆಯ ದ್ಯೋತಕವೇನೋ ಹೌದು. ಆದರೆ ಅಷ್ಟೇ ಪ್ರಮಾಣದ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವುದು ಏನನ್ನು ಸೂಚಿಸುತ್ತದೆ? ಸಮಾಜದ ನೈತಿಕ ಪಾತಾಳ ಕುಸಿತವನ್ನಲ್ಲವೇ?

ಸಮಾಧಾನಕರ ಅಂಶ ಎಂದರೆ ಕೊನೆಗೂ ಭಾರತದ ನ್ಯಾಯಾಲಯಗಳು ಬಾಕಿ ಉಳಿದಿದ್ದ ಪೊಕ್ಸೊ ಮೊಕದ್ದಮೆಗಳನ್ನು ವಿಲೇವಾರಿ ಮಾಡಿವೆ. ಇದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಸಮರದಲ್ಲಿ ಸಣ್ಣ ಗೆಲುವು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಈ ಗೆಲುವಿನ ಸಂಭ್ರಮವನ್ನು ಬದಿಗಿಟ್ಟು, ಸ್ವವಿಮರ್ಶಾತ್ಮಕವಾಗಿ ನೋಡಿದಾಗ, ಹೆಚ್ಚಿನ ಸಂಖ್ಯೆಯ ಮಕ್ಕಳು (ಹೆಣ್ಣು ಮಕ್ಕಳು) ದೌರ್ಜನ್ಯಕ್ಕೊಳಗಾಗುತ್ತಿರುವುದು ಅನೇಕ ಕಾರ್ಯಕ್ಷೇತ್ರ ಆಧಾರಿತ ವರದಿಗಳಿಂದ ದಾಖಲಾಗಿವೆ. ಇನ್ನೂ ಆಘಾತಕಾರಿ ಅಂಶವೆಂದರೆ, ಪೊಕ್ಸೊ ಪ್ರಕರಣಗಳ ವಿಲೇವಾರಿ ದೌರ್ಜನ್ಯಕ್ಕೊಳಗಾದ ಮಕ್ಕಳ ದೃಷ್ಟಿಯಲ್ಲಿ ಅಂತಿಮ ನ್ಯಾಯ ಆಗುವುದಿಲ್ಲ. ದೌರ್ಜನ್ಯ ಎಸಗಿದವರಿಗೆ ಶಿಕ್ಷೆಯಾಗುವುದು ನಿರ್ಣಾಯಕವಾಗುತ್ತದೆ. ದುರದೃಷ್ಟವಶಾತ್, ಪೊಕ್ಸೊ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಸತತವಾಗಿ ಕುಸಿಯುತ್ತಲೇ ಇದೆ.

ಕುಸಿಯುತ್ತಿರುವ ಶಿಕ್ಷೆಯ ಪ್ರಮಾಣ

ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ (NCRB) ಮಾಹಿತಿಯ ಅನುಸಾರ 2019ರಲ್ಲಿ ಪೊಕ್ಸೊ ಪ್ರಕರಣಗಳ ಶಿಕ್ಷೆಯ ಪ್ರಮಾಣ ಶೇ. 34.9ರಷ್ಟಿದ್ದುದು 2024ರಲ್ಲಿ ಶೇ. 19ಕ್ಕೆ ಇಳಿದಿದೆ. ಅಂದರೆ ಶೇ. 81ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಬಿಡುಗಡೆಯಾಗಿದ್ದಾರೆ. 2012ರಲ್ಲಿ ಪೊಕ್ಸೊ ಕಾಯ್ದೆ ಜಾರಿಯಾದ ನಂತರ ಈ ಶಿಕ್ಷೆಯ ಪ್ರಮಾಣ ಹೆಚ್ಚಾಗಿರುವುದು ಕಾಣುವುದೇ ಇಲ್ಲ. 2012ಕ್ಕೂ ಮುನ್ನ ಜಾರಿಯಲ್ಲಿದ್ದ ಭಾರತೀಯ ದಂಡ ಸಂಹಿತೆಯ ನಿಯಮಗಳಲ್ಲಿ, ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಈ ದೃಷ್ಟಿಯಿಂದಲೇ ಜಾರಿಯಾದ ಪೊಕ್ಸೊ ಕಾಯ್ದೆ ನಿಗದಿತ ಅವಧಿಯಲ್ಲಿ ವಿಚಾರಣೆ ನಡೆಸುವ, ದೌರ್ಜನ್ಯಕ್ಕೊಳಗಾದ ಮಕ್ಕಳ ಮಾತುಗಳಿಗೆ ಕಿವಿಗೊಡುವ ಸ್ನೇಹಪರ ವಾತಾವರಣವನ್ನು ಸೃಷ್ಟಿಸಿತ್ತು.

ಭಾರತದಲ್ಲಿ ಇಂದು 770 ತ್ವರಿತ ಗತಿ ನ್ಯಾಯಾಲಯಗಳಿವೆ. (Fast Track Courts) ಅವುಗಳ ಪೈಕಿ 440 ನ್ಯಾಯಾಲಯಗಳು ಪೊಕ್ಸೊ ಪ್ರಕರಣಗಳಿಗೆ ಸೀಮಿತಿವಾಗಿವೆ. 2019ರಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ನಿರ್ಭಯಾ ನಿಧಿಯಿಂದ 1,952 ಕೋಟಿ ರೂ.ಗಳನ್ನು ಹೂಡುವ ಮೂಲಕ ಸ್ಥಾಪಿಸಲಾದ ಈ ನ್ಯಾಯಾಲಯಗಳು 2025ರ ವೇಳೆಗೆ 3,50,685 ಪ್ರಕರಣಗಳನ್ನು ವಿಲೇವಾರಿ ಮಾಡಿವೆ. ಸರಾಸರಿ ತಿಂಗಳಿಗೆ ಹತ್ತು ಪ್ರಕರಣಗಳನ್ನು ಈ ನ್ಯಾಯಾಲಯಗಳು ನಿರ್ವಹಿಸುತ್ತವೆ. ಈ ಸಾಧನೆಯ ಹೊರತಾಗಿಯೂ ಶಿಕ್ಷೆಯ ಪ್ರಮಾಣದಲ್ಲಿ ಹೆಚ್ಚಳ ಕಾಣುವುದಿಲ್ಲ. ಮತ್ತೊಂದು ನಿರ್ಣಾಯಕ ಸಂಗತಿ ಎಂದರೆ, ಹೆಚ್ಚಿನ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವುದೆಂದರೆ, ಅಷ್ಟೇ ಪ್ರಮಾಣದ ಲೈಂಗಿಕ ದೌರ್ಜನ್ಯಗಳು ಮಕ್ಕಳ ಮೇಲೆ ನಡೆಯುತ್ತಿವೆ ಎಂದೂ ಅರ್ಥ ಅಲ್ಲವೇ? ಒಂದು ನಾಗರಿಕತೆಯನ್ನು ಕಾಡಬೇಕಾದ ಪ್ರಶ್ನೆ ಇದು.

ನ್ಯಾಯ ವಿತರಣೆ, ಮೊಕದ್ದಮೆಗಳ ವಿಲೇವಾರಿ ಮತ್ತು ಅಂತಿಮ ನ್ಯಾಯ ಈ ಮೂರು ಅಂಶಗಳ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಗುರುತಿಸಬೇಕಿದೆ. ವಿಲೇವಾರಿ ಪ್ರಮಾಣ ಹೆಚ್ಚಾಗಿದೆ ಎಂದ ಮಾತ್ರಕ್ಕೆ ಎಲ್ಲಾ ಸಂತ್ರಸ್ತ ಮಕ್ಕಳಿಗೂ ಅಂತಿಮ ನ್ಯಾಯ ದೊರೆತಿದೆ ಎಂದರ್ಥವಲ್ಲ. ಅಪರಾಧ ಎಸಗಿ ನಿರಪರಾಧಿಗಳಾಗಿ ಹೊರಬಂದು, ಶಾಸನ ಸಭೆಗಳನ್ನು ಅಲಂಕರಿಸಿರುವ ಅನೇಕ ನಾಯಕರನ್ನು ಸಮಾಜ ಸಹಿಸಿಕೊಳ್ಳುತ್ತಲೇ ಇದೆ. ನ್ಯಾಯಾಂಗದ ದೃಷ್ಟಿಯ ‘ನಿರಪರಾಧಿತ್ವ’ ಸಂತ್ರಸ್ತರ ದೃಷ್ಟಿಯಲ್ಲಿ ಅನ್ಯಾಯದಂತೆ ಕಾಣುತ್ತದೆ. ಏಕೆಂದರೆ ನ್ಯಾಯ ವಿತರಣೆಯಲ್ಲಿ ಸಾಕ್ಷ್ಯಾಧಾರಗಳು ಮುಖ್ಯವಾಗುತ್ತವೆ. ದೌರ್ಜನ್ಯಕ್ಕೊಳಗಾಗಿರುವ, ಅತ್ಯಾಚಾರಕ್ಕೆ ಈಡಾಗಿರುವ ಹೆಣ್ಣು ಮಕ್ಕಳ ನೋವು, ಯಾತನೆ, ಅಪಮಾನ ಮತ್ತು ಕಳಂಕ ಇದಾವುದೂ ಸಾಕ್ಷಿ ಎನಿಸಿಕೊಳ್ಳುವುದಿಲ್ಲ. ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಶಕ್ತಿ ಸಾಮರ್ಥ್ಯ ಹೊಂದಿರುವ ಪ್ರಬಲ ಸಮಾಜ ಅಮಾಯಕ ಮಕ್ಕಳನ್ನು ವಂಚಿಸುವುದು ಕಷ್ಟವೇನಲ್ಲ.

NCRB ದತ್ತಾಂಶಗಳನ್ನೇ ಗಮನಿಸಿದಾಗ ಅರ್ಥವಾಗುವ ವಾಸ್ತವ ಎಂದರೆ ಪ್ರಕರಣಗಳು ಶೀಘ್ರ ವಿಲೇವಾರಿ ಆಗುತ್ತಿವೆ ಎಂದರೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಿರುತ್ತದೆ. ಹೆಚ್ಚಿನ ಸಂಖ್ಯೆಯ ಆರೋಪಿಗಳು ಮುಕ್ತವಾಗಿ ತಲೆ ಎತ್ತಿ ಓಡಾಡುತ್ತಿರುತ್ತಾರೆ, ಕೆಲವರು ಮಾತ್ರ ಶಿಕ್ಷೆಗೊಳಗಾಗಿರುತ್ತಾರೆ. ಪೊಕ್ಸೊ ಪ್ರಕರಣಗಳಲ್ಲಿ ಸಾಕ್ಷಿ ಹೇಳಬೇಕಾದ ಮಕ್ಕಳಿಗೆ ಅವಶ್ಯವಾದ ಕೆಲವು ಸೌಕರ್ಯಗಳನ್ನು ಒದಗಿಸುವುದು, ವಿಲೇವಾರಿಯ ಪ್ರಮಾಣಕ್ಕಿಂತಲೂ ಮುಖ್ಯವಾದದ್ದು. ತರಬೇತಿ ಹೊಂದಿದ ಬೆಂಬಲ ವ್ಯಕ್ತಿಗಳು, ಸೂಕ್ಷ್ಮ ಸಂವೇದನೆಯ ಪೊಲೀಸ್ ಮತ್ತು ವಕೀಲರು, ವಿಚಾರಣೆ ನಡೆಯುತ್ತಿರುವ ಸಮಯದಲ್ಲಿ ಮಕ್ಕಳ ಕಾಳಜಿ ವಹಿಸುವ ಮತ್ತು ಪರಿಹಾರ ಒದಗಿಸುವ ಮಕ್ಕಳ ಕಲ್ಯಾಣ ಸಮಿತಿಗಳು ಇವೆಲ್ಲವೂ ಮುಖ್ಯವಾಗುತ್ತವೆ. ಈ ರಕ್ಷಾ ಕವಚಗಳು ಕಾರ್ಯಗತವಾಗದೆ ಇದ್ದರೆ ಶಿಕ್ಷೆಯ ಪ್ರಮಾಣ ಸಹಜವಾಗಿ ಕಡಿಮೆಯಾಗುತ್ತದೆ.

ಸಂತ್ರಸ್ತ ಮಕ್ಕಳು ಅನಾಥರಾದಾಗ

2021ರಲ್ಲಿ ಸುಪ್ರೀಂಕೋರ್ಟ್ ಸೂಚಿಸಿರುವಂತೆ ಪೊಕ್ಸೊ ಕಾಯ್ದೆಯ ಸೆಕ್ಷನ್ 39ರ ಅನ್ವಯ, ವಿಚಾರಣೆಗೊಳಗಾಗಿರುವ ಮಕ್ಕಳಿಗೆ ನೆರವಾಗಲು ಬೆಂಬಲ ವ್ಯಕ್ತಿಗಳನ್ನು ನೇಮಿಸುವುದು ರಾಜ್ಯ ಸರಕಾರಗಳ ಬಾಧ್ಯತೆ. ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ 2024ರಲ್ಲೂ ಈ ನಿಯಮಗಳನ್ನು ವಿವರಿಸಲಾಗಿದೆ. ಈ ಬೆಂಬಲ ವ್ಯಕ್ತಿಗಳು ವಿಚಾರಣೆಯ ಸಂದರ್ಭದಲ್ಲಿ ಸಂತ್ರಸ್ತ ಮಕ್ಕಳಿಗೆ ಸಲಹೆ, ಮಾರ್ಗದರ್ಶನ ನೀಡಬೇಕಾಗುತ್ತದೆ. ಆದರೆ ಅನೇಕ ರಾಜ್ಯಗಳಲ್ಲಿ ಈ ಬೆಂಬಲ ವ್ಯಕ್ತಿಗಳ ನೇಮಕಾತಿಯಲ್ಲೇ ಕೊರತೆ ಕಂಡುಬರುತ್ತದೆ. ಈ ಕೊರತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳ ನಿರ್ಲಕ್ಷ್ಯ, ಪೊಕ್ಸೊ ಸಂತ್ರಸ್ತ ಮಕ್ಕಳಿಗೆ ನ್ಯಾಯ ದೊರಕಿಸುವಲ್ಲಿ ಬಹುದೊಡ್ಡ ಅಡ್ಡಿಯಾಗುತ್ತಿದೆ.

ಪೊಕ್ಸೊ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಿಸುವ ದೃಷ್ಟಿಯಿಂದ ಸುಪ್ರೀಂಕೋರ್ಟ್ 2025ರ ಆದೇಶವೊಂದರ ಮೂಲಕ, ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಕಾನೂನೇತರ ಸ್ವಯಂ ಸೇವಕರನ್ನು (Para legal volunteers) ನೇಮಿಸಲು ಸೂಚಿಸಿತ್ತು. ಆದರೆ ಯಾವ ರಾಜ್ಯದಲ್ಲೂ ಇದು ಪರಿಪೂರ್ಣವಾಗಿ ಜಾರಿಯಾಗಿಲ್ಲ. ಆಂಧ್ರ ಪ್ರದೇಶ 919 ಠಾಣೆಗಳ ಪೈಕಿ 42ರಲ್ಲಿ ಮಾತ್ರ ಸ್ವಯಂ ಸೇವಕರ ನೇಮಕವಾಗಿದೆ. ತಮಿಳುನಾಡಿನ 1,577 ಠಾಣೆಗಳ ಪೈಕಿ ಒಂದರಲ್ಲೂ ನೇಮಕ ಮಾಡಲಾಗಿಲ್ಲ. ಸ್ವಯಂ ಸೇವಕರು ಇಲ್ಲದಿರುವುದರಿಂದ ಸಂತ್ರಸ್ತರ ಕುಟುಂಬದ ಸದಸ್ಯರು ಭೀತಿಯಿಂದಲೇ ಪೊಲೀಸ್ ಠಾಣೆಗೆ ಹೋಗುತ್ತಾರೆ, ನಿರ್ಲಕ್ಷಿಸಲ್ಪಡುತ್ತಾರೆ ಅಥವಾ ಒತ್ತಡಕ್ಕೆ ಒಳಪಡುತ್ತಾರೆ.

ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಮೊಕದ್ದಮೆ ದಾಖಲಿಸುವುದಕ್ಕೇ ಸಾಕಷ್ಟು ವಿಳಂಬ ಮಾಡಿದ್ದರು, ಎಫ್‌ಐಆರ್ ದಾಖಲಿಸಿದ ನಂತರವೂ ಹಲವು ದಿನಗಳ ಕಾಲ ಮೊಕದ್ದಮೆ ದಾಖಲಿಸಿರಲಿಲ್ಲ. ಬದಲಾಗಿ ಸಂತ್ರಸ್ತ ಕುಟುಂಬಕ್ಕೆ ಬೆದರಿಕೆ ಹಾಕಿರುವುದು ವರದಿಯಾಗಿದೆ. 2022ರಲ್ಲಿ ಉತ್ತರಪ್ರದೇಶದ ಲಲಿತ್‌ಪುರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 13 ವರ್ಷದ ಬಾಲಕಿಯ ಮೇಲೆ ಪೊಲೀಸ್ ಠಾಣೆಯಲ್ಲೇ ಹಲ್ಲೆ ನಡೆಸಲಾಗಿದ್ದು, ಕೆಲವು ಎನ್‌ಜಿಒಗಳ ಪ್ರವೇಶದ ನಂತರವೇ ಎಫ್‌ಐಆರ್ ದಾಖಲಿಸಲಾಗಿದೆ. ಈ ಠಾಣೆಗಳಲ್ಲಿ ಸ್ವಯಂ ಸೇವಕರು ಇದ್ದಿದ್ದಲ್ಲಿ, ಇಂತಹ ಅನ್ಯಾಯಗಳನ್ನು ತಡೆಗಟ್ಟಬಹುದಿತ್ತು. ನ್ಯಾಯಾಲಯಗಳು ಇಂತಹ ಸಂತ್ರಸ್ತ ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯದ ವೆಚ್ಚಗಳನ್ನು ಸರಿದೂಗಿಸಲು ಮಧ್ಯಂತರ ಪರಿಹಾರವನ್ನೂ ಸೂಚಿಸಬಹುದು. ಆದರೆ ಬಹುತೇಕ ಪ್ರಕರಣಗಳಲ್ಲಿ ಅಂತಿಮ ತೀರ್ಪಿನವರೆಗೂ ಕಾಯಲಾಗುತ್ತದೆ.

ಇಂತಹ ಪ್ರಕರಣಗಳಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯಗಳಿಗೆ ಒಳಗಾಗುವುದರಿಂದ, ಈ ಕುಟುಂಬಗಳು ತಮಗೆ ನ್ಯಾಯಾಲಯ ನೀಡುವ ಪರಿಹಾರದ ಮೊತ್ತಕ್ಕಿಂತಲೂ ಹೆಚ್ಚಿನ ಹಣವನ್ನು ವಕೀಲರಿಗೆ, ಸಾರಿಗೆ ಖರ್ಚುಗಳಿಗೆ ಒದಗಿಸಬೇಕಾಗುತ್ತದೆ. ಬಡ ಕುಟುಂಬಗಳು, ಆರ್ಥಿಕವಾಗಿ ಅಂಚಿನಲ್ಲಿರುವ ಕುಟುಂಬಗಳು ಮತ್ತು ದಿನಗೂಲಿ ನೌಕರಿ ಮಾಡುವವರು ತಮ್ಮ ನೌಕರಿಯನ್ನೇ ತೊರೆದು, ಕೋರ್ಟ್‌ಗೆ ಅಲೆಯುವ ಸನ್ನಿವೇಶಗಳೂ ಸಾಕಷ್ಟಿವೆ. ಹಾಗಾಗಿ ಸಂತ್ರಸ್ತ ಮಕ್ಕಳಿಗೆ ಮತ್ತು ಕುಟುಂಬಗಳಿಗೆ ಸೂಕ್ತ ಬೆಂಬಲ ನೀಡದೆ ಇದ್ದಲ್ಲಿ, ಮೊಕದ್ದಮೆ ಎಷ್ಟೇ ತ್ವರಿತಗತಿಯಲ್ಲಿ ನಡೆದರೂ ಅದು ಮಕ್ಕಳ ಪಾಲಿಗೆ ನ್ಯಾಯ ವಂಚನೆಯೇ ಆಗುತ್ತದೆ.

ಭಾರತ ವಿಕಾಸದ ಹಾದಿಯಲ್ಲಿ ಸಾಗುತ್ತಿದೆ. ಆದರೆ ಸಾಮಾಜಿಕ ನೆಲೆಯಲ್ಲಿ, ನೈತಿಕತೆಯ ನೆಲೆಯಲ್ಲಿ ಭಾರತೀಯ ಸಮಾಜ ಕಮರಿ ಹೋಗುತ್ತಿದೆ. ವಿದೇಶಿ ಸಂಸ್ಥೆಗಳ ಸಮೀಕ್ಷಾ ವರದಿ, ಸೂಚ್ಯಂಕಗಳನ್ನು ಕೇಂದ್ರ ಸರಕಾರ ಎಷ್ಟೇ ಅಲ್ಲಗಳೆದರೂ, ನೆಲಮಟ್ಟದ ವಾಸ್ತವಗಳು ಭಯಾನಕವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಪರಿಸ್ಥಿತಿಗೆ ಕಾರಣ ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ಅಸೂಕ್ಷ್ಮತೆ ಮತ್ತು ರೂಢಿಗತವಾಗಿರುವ ವ್ಯಕ್ತಿ ಆರಾಧನೆ. ಹಾಗಾಗಿಯೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಧಾರ್ಮಿಕ, ಆಧ್ಯಾತ್ಮಿಕ ನೇತಾರರನ್ನೂ ಬೆಂಬಲಿಸಿ ನಿಲ್ಲುವ ಒಂದು ಸಮಾಜ ನಮ್ಮ ನಡುವೆ ಸೃಷ್ಟಿಯಾಗಿದೆ. ಈ ನಿರ್ಲಿಪ್ತ ಸಮಾಜ ತನ್ನ ಸಂಕುಚಿತ ದೃಷ್ಟಿಯ ಪೊರೆಯನ್ನು ಕಳಚಿಕೊಂಡು, ತೆರೆದ ಕಣ್ಣಿಂದ, ತೆರೆದ ಹೃದಯದಿಂದ, ನೋವುಂಡ ಜೀವಗಳೆಡೆಗೆ ನೋಡುವಂತಾದರೆ, ನಾವೂ ಸಹ ‘ನಾಗರಿಕರು’ ಎಂದು ಬೆನ್ನು ತಟ್ಟಿಕೊಳ್ಳಬಹುದು.

(ಈ ಲೇಖನದ ಮಾಹಿತಿ ದತ್ತಾಂಶಗಳಿಗೆ ಆಧಾರ: 12 ಜನವರಿ 2026 ರಂದು ಪ್ರಕಟವಾದ ‘ದ ಹಿಂದೂ’ನ ರಾಹುಲ್ ವರ್ಮಾ ಲೇಖನ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾ. ದಿವಾಕರ

contributor

Similar News