×
Ad

ರಾಯಚೂರು: ಬಸ್‌ಗಾಗಿ ಕಾದು ಹೈರಾಣಾಗುವ ವಿದ್ಯಾರ್ಥಿಗಳು

ಟ್ರಾಕ್ಟರ್ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಲ್ಲಿ ಮನೆ ಸೇರುವ ಅನಿವಾರ್ಯತೆ

Update: 2026-07-05 15:03 IST

ರಾಯಚೂರು: ಗ್ರಾಮೀಣ ಪ್ರದೇಶದ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಕರ್ಯವಿಲ್ಲದೇ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದೆ.

ರಾಯಚೂರು ತಾಲೂಕಿನ ಪಲಕಂದೊಡ್ಡಿ, ಶಾಖವಾದಿ, ಯರಗುಂಟಾ, ಸಗಮಕುಂಟಾ ಪ್ರೌಢಶಾಲೆಗೆ ಹೋಗಲು ಹಾಗೂ ಡಿ.ರಾಂಪೂರು ಸುತ್ತಮುತ್ತಲಿನ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಯಚೂರಿನ ಕಾಲೇಜಿಗೆ ಬರಲು ಸರಿಯಾದ ಸಮಯಕ್ಕೆ ಸಾರಿಗೆ ಬಸ್ ಸಿಗದೇ ತೀವ್ರ ಸಮಸ್ಯೆ ಉಂಟಾಗಿದ್ದು ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಯಚೂರಿನಿಂದ ಪಲಕಮದೊಡ್ಡಿ, ಶಾಖವಾದಿ, ಸಗಮಕುಂಟ, ಯರಗುಂಟ, ಡೊಂಗರಾಂಪುರ, ಕೊರ್ತಕುಂದ ಮಾರ್ಗವಾಗಿ ಚಲಿಸುವ ಸಾರಿಗೆ ಬಸ್ಸುಗಳಿಲ್ಲ. ಯಾವಾಗಲೋ ಬಂದು ಹೋಗುವ ಸಾರಿಗೆ ಬಸ್ಸುಗಳನ್ನು ನೆಚ್ಚಿಕೊಂಡಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಬಸ್ಸಿಗಾಗಿ ಕಾಯುವುದರಲ್ಲೇ ಸವೆದು ಹೋಗುತ್ತಿದೆ. ಶಾಲೆಗೆ ಹೋಗಲು ಹಾಗೂ ಶಾಲೆಯಿಂದ ಮನೆಗೆ ಸೇರಲು ಸರಿಯಾದ ಸಮಯಕ್ಕೆ ಹೋಗದೇ ಶಿಕ್ಷಕರಿಂದ ಬೈಗುಳಕ್ಕೆ ಗುರಿಯಾಗುವಂತಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು ಬಸ್‌ಗಾಗಿ ಕಾಯುವ ಪರಿಸ್ಥಿತಿಯನ್ನು ಮನಗಂಡು ಅನೇಕ ಪಾಲಕರು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಿದ್ದಾರೆ.

ಅಪಾಯದ ಟ್ರಾಕ್ಟರ್ ಪ್ರಯಾಣ:

ಗ್ರಾಮೀಣ ಭಾಗದ ಶಾಲಾ, ಕಾಲೇಜಿನ ವಿದ್ಯಾರ್ಥಿಗಳ ಸಮಸ್ಯೆ ಹೇಗಿದೆ ಎಂದರೆ ಶುಕ್ರವಾರ ಡಿ.ರಾಂಪೂರಿನಿಂದ ಬೆಳಿಗ್ಗೆ ರಾಯಚೂರಿಗೆ ಬಂದ ಕಾಲೇಜಿನ ವಿದ್ಯಾರ್ಥಿಗಳು ಬಸ್ ಸಿಗದೇ ಕೊರ್ವಿಹಾಳ ಬಸ್‌ಗೆ ಯರಗುಂಟಾವರೆಗೆ ಬಂದು ಡಿ.ರಾಂಪೂರ ಬಸ್‌ಗೆ ಸಿಗದೇ ಸುಮಾರು 7 ಕಿ.ಮೀ ದೂರ ಟ್ರಾಕ್ಟರ್‌ನಲ್ಲಿ ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸಿದ್ದಾರೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ ಬಸ್‌ಗಾಗಿ ಡಿಪೊ ಮ್ಯಾನೇಜರ್, ಸಾರಿಗೆ ಅಧಿಕಾರಿಗಳ ಜೊತೆ ಫೋನ್ ಮಾಡಿ ಜಗಳವಾಡುವುದು, ತಡವಾಗಿ ಬಂದಾಗ ಕಾಯದೇ ನಡೆದುಕೊಂಡು ಹೋಗುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಗ್ರಾಮಸ್ಥ ದತ್ತು, ರಮೇಶ.

ಆದರೆ ಸಾರಿಗೆ ಇಲಾಖೆಯ ಅಧಿಕಾರಿಗಳು, ‘ಬಸ್ ಸಮಸ್ಯೆಯಿಲ್ಲ ಕೆಲವೊಮ್ಮೆ ತಡವಾದಾಗ 10 ನಿಮಿಷವೂ ಕಾಯದೇ ಸಿಕ್ಕ ಗಾಡಿಗಳಲ್ಲಿ ವಿದ್ಯಾರ್ಥಿಗಳು ಹೋಗುತ್ತಾರೆ. ಶಕ್ತಿ ಯೋಜನೆಯ ಆರಂಭವಾದಾಗಿನಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಕೆಲವೊಮ್ಮೆ ಸಮಸ್ಯೆಯಾಗುತ್ತೆ’ ಎಂದು ಸಬೂಬು ಹೇಳುತ್ತಾರೆ.

ಎಲ್ಲೆಲ್ಲಿ ಸಮಸ್ಯೆ?

ರಾಯಚೂರು ತಾಲೂಕಿನ ಪಲಕಂದೊಡ್ಡಿ, ಶಾಖವಾದಿ, ಕೂಡ್ಲೂರು ಮೂಲಕ ಸಗಮಕುಂಟಾ ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಹಾಗೂ ಡಿ.ರಾಂಪೂರುದಿಂದ ರಾಯಚೂರಿಗೆ ಬರುವ ಕಾಲೇಜಿನ ವಿದ್ಯಾರ್ಥಿಗಳು ಗಂಭೀರ ಬಸ್ ಸಮಸ್ಯೆ ಎದುರಿಸುತ್ತಿದ್ದಾರೆ.

ಸರಕಾರ ಕೆಪಿಎಸ್, ಮ್ಯಾಗ್ನೆಟ್ ಶಾಲೆಗಳು ನಿರ್ಮಿಸಿ ಮಕ್ಕಳಿಗೆ ಗುಣಮಟ್ಟ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವುದಾಗಿ ಹೇಳಿ ವಿದ್ಯಾರ್ಥಿಗಳ ಅನುಕೂಲಕ್ಕೆ ಮನೆಯಿಂದಲೇ ಬಸ್ ಕರೆದೊಯ್ಯುತ್ತದೆ ಎಂದು ಹೇಳುತ್ತಿದೆ. ಆದರೆ ಗ್ರಾಮೀಣ ವಿದ್ಯಾರ್ಥಿಗಳು ಬಸ್‌ಗಾಗಿ ನಿತ್ಯ ಪರದಾಡುವ ದೃಶ್ಯ ಅಧಿಕಾರಿಗಳ, ಜನಪ್ರತಿನಿಧಿಗಳ ಕಣ್ಣಿಗೆ ಕಾಣುತ್ತಿಲ್ಲ, ಮಕ್ಕಳ ಬಸ್ ಸಮಸ್ಯೆ ನೋಡಿ ಪಾಲಕರು ಅರ್ಧದಲ್ಲೇ ಶಿಕ್ಷಣದಿಂದ ಮೊಟಕುಗೊಳಿಸುತ್ತಿದ್ದಾರೆ ಎಂಬುವುದನ್ನು ಸರಕಾರ ಗಮನಿಸಲಿ.

-ರಂಗನಾಥ ಪೊಲೀಸ್ ಪಾಟೀಲ್

ಡಿ ರಾಂಪೂರು ಗ್ರಾಮಸ್ಥ ಹಾಗೂ ರೈತ ಹೋರಾಟಗಾರ

ವಿದ್ಯಾರ್ಥಿಗಳ ಸಮಸ್ಯೆ ಗಮನಕ್ಕೆ ಬಂದಿದ್ದೆ ಕಡಗಂದೊಡ್ಡಿಯಿಂದ ರಾಯಚೂರಿಗೆ ಹೊಸ ಬಸ್ ಮಾರ್ಗ ಇಂದಿನಿಂದ ಶುರುವಾಗಿದೆ. ಅರಸಿಗೇರ, ಡಿ.ರಾಂಪೂರ, ಯರಗುಂಟಾ ಗ್ರಾಮಗಳಿಗೂ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಸಮಸ್ಯೆ ಬಗ್ಗೆ ಸಾರಿಗೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಶಾಲೆಗೆ ತಡವಾದರೆ ಶಿಕ್ಷಕರು ಮಕ್ಕಳಿಗೆ ಶಿಕ್ಷೆ ನೀಡದಂತೆ ಸೂಚನೆ ನೀಡಿದ್ದೇನೆ.

-ಬಸನಗೌಡ ದದ್ದಲ್

ರಾಯಚೂರು ಗ್ರಾಮೀಣ ಶಾಸಕ ರಾಯಚೂರು ಗ್ರಾಮೀಣ ಶಾಸಕ

ಕಾಲೇಜಿಗೆ ಪ್ರತಿದಿನ ತಡವಾಗುತ್ತಿದ್ದಕ್ಕೆ ಕಾಲೇಜಿನಲ್ಲಿ ಉಪನ್ಯಾಸಕರು ಟಿ.ಸಿ ಕಿತ್ತುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಪಾಲಕರು ಖಾಸಗಿ ಕಾಲೇಜುಗಳಿಗೆ ಕಳಿಸಲು ಆಗುವುದಿಲ್ಲ ಅಂತ ಹೇಳುತ್ತಿದ್ದಾರೆ. ಬಸ್‌ಗಾಗಿ ಶಿಕ್ಷಣವೇ ಬಿಡಬೇಕೇ ಎಂಬ ಪ್ರಶ್ನೆ ನಮ್ಮ ಮುಂದಿದೆ ಎಂದು ವಿದ್ಯಾರ್ಥಿಗಳಾದ ಪ್ರಜ್ಞಾ, ಶ್ವೇತಾ, ರಾಧಿಕಾ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ,ರಾಯಚೂರು

contributor

Similar News