ಕೈಗಾರಿಕಾ ತ್ಯಾಜ್ಯಕ್ಕೆ ಬಲಿಯಾದ ಜಲಚರ, ಜಾನುವಾರು
ಕಣ್ಣುಮುಚ್ಚಿ ಕುಳಿತ ಸ್ಥಳೀಯಾಡಳಿತ: ಕಲುಷಿತ ನೀರಿನಿಂದ ಗ್ರಾಮಸ್ಥರಲ್ಲಿ ಆತಂಕ
ರಾಯಚೂರು: ತಾಲೂಕಿನ ಯದ್ಲಾಪೂರು ಗ್ರಾಪಂ ವ್ಯಾಪ್ತಿಯ ಗಂಜಳ್ಳಿ ಹಾಗೂ ಹೆಗ್ಗಸನಹಳ್ಳಿ ಗ್ರಾಮದ ಹಳ್ಳಕ್ಕೆ ಸುತ್ತಮುತ್ತಲಿನ ಕಾರ್ಖಾನೆಗಳ ತ್ಯಾಜ್ಯ ನೀರು ಹರಿದು ಹಳ್ಳದಲ್ಲಿದ್ದ ಮೊಸಳೆ, ಮೀನುಗಳು ಹಾಗೂ ಕುರಿಗಳು ಸಾವಿಗೀಡಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ರಾಯಚೂರು ತಾಲೂಕಿನ ದೇವಸುಗೂರು, ಶಕ್ತಿನಗರ, ವಡ್ಲೂರು ಗ್ರಾಮದ ಸುತ್ತಮುತ್ತಲು ಅನೇಕ ರಾಸಾಯನಿಕ, ಕೈಗಾರಿಕಾ ಕಾರ್ಖಾನೆಗಳಿದ್ದು, ಕಲುಷಿತ ನೀರು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಹಳ್ಳ, ಕೃಷ್ಣಾ ನದಿ ಹಾಗೂ ಸಮೀಪದ ಹೊಲಗಳಿಗೆ ಅಕ್ರಮವಾಗಿ ಹರಿಬಿಡಲಾಗುತ್ತಿದೆ. ಇದರಿಂದ ಜಲಚರಗಳು ಹಾಗೂ ಜಾನುವಾರುಗಳು ಮೃತಪಡುತ್ತಿದ್ದು, ಜತೆಗೆ ಬೆಳೆಗಳೂ ಹಾಳಾಗುತ್ತಿವೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಎರಡು ದಿನಗಳು ಹಿಂದಷ್ಟೇ ಸುರಿದ ಮಳೆಯಿಂದಾಗಿ ಗಂಜಳ್ಳಿ ಹಳ್ಳ ತುಂಬಿ ಹರಿದಿದ್ದು, ಕಾರ್ಖಾನೆಗಳ ರಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಹಳ್ಳಕ್ಕೆ ಹರಿಬಿಟ್ಟ ಪರಿಣಾಮ ಮೊಸಳೆ, ಮೇಯಲು ಹೋಗಿದ್ದ ಎರಡು ಕುರಿಗಳು ಹಾಗೂ ನೂರಾರು ಮೀನುಗಳು ಸತ್ತಿವೆ. ಇದರಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿತ್ತು. ಅನೇಕ ವರ್ಷಗಳಿಂದ ಇಲ್ಲಿನ ಶಿಲ್ಪಾ ಕಂಪನಿ, ರೈಕೆಮ್ ಹಾಗೂ ಸ್ಥಳೀಯ ಕಾರ್ಖಾನೆಗಳು ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡದೆ ಟ್ಯಾಂಕರ್ ಮೂಲಕ ನೀರನ್ನು ರಾತ್ರಿಯ ವೇಳೆ ಹಳ್ಳಕ್ಕೆ, ಜಮೀನುಗಳಿಗೆ ಹರಿಬಿಡುತ್ತಿವೆ. ಪ್ರಶ್ನೆ ಮಾಡಿದವರ ಮೇಲೆ ಗುಂಡಾಗಳಿಂದ ಬೆದರಿಕೆ, ಧಮ್ಕಿ ಹಾಕಲಾಗುತ್ತಿದೆ. ಪರಿಸರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅನೇಕ ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಪೊಲೀಸ್ ಠಾಣೆಗೂ ದೂರು ನೀಡಿದರೂ ಯಾರೂ ಕ್ಯಾರೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಬಹುತೇಕ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಹೊರ ರಾಜ್ಯದ ಉದ್ಯಮಿಗಳು ಇಲ್ಲಿಯೇ ಬಂದು ಕಾರ್ಖಾನೆ ಸ್ಥಾಪಿಸುತ್ತಿದ್ದಾರೆ. ಇಲ್ಲಿನ ಆಡಳಿತ ವ್ಯವಸ್ಥೆ, ಜನಪ್ರತಿನಿಧಿಗಳ ಮೌನ ಸಮ್ಮತಿ, ಪ್ರಶ್ನೆ ಮಾಡದ ಜನರ ಮುಗ್ಧತೆಯುಂದಾಗಿ ರಾಯಚೂರು ಕೈಗಾರಿಕಾ ಪ್ರದೇಶ ಅವರಿಗೆ ಹೇಳಿ ಮಾಡಿಸಿದಂತಾಗಿದೆ. ಇಲ್ಲಿನ ಜಾಗ, ನೀರು, ನೈಸರ್ಗಿಕ ಸಂಪನ್ಮೂಲಗಳ ಪಡೆದರೂ ಸ್ಥಳೀಯರಿಗೆ ಉದ್ಯೋಗ ನೀಡದೆ ಅನ್ಯ ರಾಜ್ಯದವರನ್ನೇ ನೇಮಿಸಿಕೊಂಡಿದ್ದಾರೆ. ಈಗ ಸ್ಥಳೀಯರಿಗೆ ಕಲುಷಿತ ನೀರು, ಕಲುಷಿತ ಗಾಳಿ(ವಾಯು) ಉಚಿತವಾಗಿ ನೀಡುತ್ತಿದ್ದಾರೆ.
ಕಾರ್ಖಾನೆಗಳಿಂದ ರಾತ್ರಿಯ ವೇಳೆ ಕೆಮಿಕಲ್ ನೀರು ಹಳ್ಳಕ್ಕೆ ಹರಿ ಬಿಡಲಾಗುತ್ತಿದ್ದು ಜಾನುವಾರುಗಳು ಸಾವಿಗೀಡಾಗುತ್ತಿವೆ. ಕೆಲವೊಮ್ಮೆ ಖಾಲಿ ಜಾಗ, ಬೆಳೆಗಳ ಬಳಿ ಹರಿ ಬಿಡುವ ಕಾರಣ ಬೆಳೆಯೂ ಹಾನಿಯಾಗುತ್ತಿದೆ. ಕಣ್ಣುಮುಂದೆಯೆ ಎಲ್ಲಾ ನಡೆಯುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ. ದೂರು ನೀಡಿದರೂ ಕ್ಯಾರೆ ಎನ್ನುತ್ತಿಲ್ಲ. ವಿಷಯುಕ್ತ ಗಾಳಿ, ಕುಡಿಯುವ ನೀರಿಗೂ ಸೇರುತ್ತಿದೆ. ಇದರಿಂದ ಜನರಿಗೆ ಚರ್ಮರೋಗ ಬರುತ್ತಿದೆ.
-ಲಕ್ಷ್ಮಣ, ಗಂಜಳ್ಳಿ ರೈತ
ವಡ್ಲೂರು ಹಾಗೂ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ರಸಾಯನಿಕ ಯುಕ್ತ ನೀರು ನಿರಂತರವಾಗಿ ಹಳ್ಳಕ್ಕೆ ಬಿಡಲಾಗುತ್ತಿದೆ. ಜಲಚರಗಳು, ಜಾನುವಾರುಗಳ ಸಾವಿಗೆ ಕಾರಣವಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಶಾಸಕರಿಗೂ ದೂರು ನೀಡಿದರೂ ಪ್ರಯೋಜನವಾಗಿಲ್ಲ.ಮೀನುಗಳ ಸಾವಿನಿಂದ ಇಡೀ ಗ್ರಾಮ ಗಬ್ಬು ವಾಸನೆಯಿಂದ ತತ್ತರಿಸುತ್ತಿದೆ.
-ನರಸಪ್ಪ , ಗಂಜಳ್ಳಿ ಗ್ರಾಮಸ್ಥ
ವಡ್ಲೂರು, ಗಂಜಳ್ಳಿ, ಹೆಗ್ಗಸನಹಳ್ಳಿ ಗ್ರಾಮದ ಹಳ್ಳಕ್ಕೆ ರಸಾಯನಿಕ ತ್ಯಾಜ್ಯ ನೀರು ಹರಿಸಿದ ದೂರುಗಳ ಬಗ್ಗೆ ವಿಚಾರಿಸಿ ಮಂಚುಕೊಂಡ ರೈಸ್ ಮಿಲ್, ವೈಟಿಪಿಎಸ್ ಸೇರಿ ಅನೇಕ ಕಾರ್ಖಾನೆಗಳ ಮಾಲೀಕರಿಗೆ ನೋಟೀಸ್ ನೀಡಿದ್ದೇವೆ. ನಿಯಮ ಉಲ್ಲಂಘಿಸಿದವರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
-ಸಂತೋಷ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ, ರಾಯಚೂರು