×
Ad

ಹೆಸರಿಗಷ್ಟೇ ಸೀಮಿತ, ನೈಜ ‘ಕಲ್ಯಾಣ ಕರ್ನಾಟಕ’ ಯಾವಾಗ?

Update: 2026-01-18 06:50 IST

‘ಕರ್ನಾಟಕದಲ್ಲಿ ಎರಡು ಕರ್ನಾಟಕಗಳಿವೆ. ಒಂದು ಸಮೃದ್ಧ ಕರ್ನಾಟಕ, ಇನ್ನೊಂದು ಹಿಂದುಳಿದಿರುವ ಕರ್ನಾಟಕ’ ಎಂದು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಹೇಳಿರುವುದು ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನೆ ಜ್ವಲಂತವಾಗಿದೆ ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿದೆ. ಅದಕ್ಕಾಗಿ ಡಾ.ನಂಜುಂಡಪ್ಪ ವರದಿ ಶಿಫಾರಸಿನಂತೆ ಕಲ್ಯಾಣದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವ ಕೆಲಸವನ್ನು ಸರಕಾರ ಮಾಡಬೇಕಿದೆ.

ಕಲ್ಯಾಣ ಕರ್ನಾಟಕ ರಾಜ್ಯದ ಇತರೆ ಭಾಗಗಳಂತೆ ಯಾವುದೇ ಕ್ಷೇತ್ರದಲ್ಲೂ ಅಭಿವೃದ್ಧಿಯಾಗುತ್ತಿಲ್ಲ. ಆರೋಗ್ಯ, ಶಿಕ್ಷಣ, ಕೈಗಾರಿಕೆಗಳು, ಮೌಲಸೌಕರ್ಯಗಳಿಂದ ವಂಚಿತವಾಗಿದ್ದು, ಇನ್ನೂ ಸಹ ಸಮಾನ ಮತ್ತು ಸರ್ವಾಂಗೀಣ ಅಭಿವೃದ್ಧಿ’ ಕನಸಿನ ಬೆನ್ನೇರಿ ಹೊರಟಿದೆ. ಸಂವಿಧಾನದ ವಿಧಿ 371ಜೆ ಅಡಿ ಪ್ರಕಾರ ವಿಶೇಷ ಸ್ಥಾನಮಾನ ಸಿಕ್ಕು ದಶಕ ಕಳೆದರೂ ಇಲ್ಲಿನ ಜನರ ಬದುಕಿನ ಗುಣಮಟ್ಟದಲ್ಲಿ ಸುಧಾರಣೆಯಾಗುವ ಮುನ್ಸೂಚನೆ ಸಿಗುತ್ತಿಲ್ಲ.

ಕಲ್ಯಾಣ ಕರ್ನಾಟಕದ ಐತಿಹಾಸಿಕತೆ :

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ 1947 ಅಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೆ ಹೈದರಾಬಾದ್ ಪ್ರಾಂತ್ಯಕ್ಕೆ ಒಂದು ವರ್ಷ ತಡವಾಗಿ, ಅಂದರೆ 1948 ಸೆಪ್ಟೆಂಬರ್ 17ರಂದು ಸ್ವಾತಂತ್ರ್ಯ ದೊರೆಯಿತು. ಅದರಂತೆ ಕಲ್ಯಾಣ ಕರ್ನಾಟಕ ವಿಮೋಚನೆಗೂ ಸಾಕಷ್ಟು ರಕ್ತಸಿಕ್ತವಾದ ಇತಿಹಾಸವಿದೆ.

1947 ಆಗಸ್ಟ್ 15ರಂದು ಭಾರತ ದೇಶ ಸ್ವತಂತ್ರವಾಯಿತು. ದೇಶದ ಹಲವು ರಾಜರು ಭಾರತದ ಒಕ್ಕೂಟಕ್ಕೆ ತಮ್ಮ ರಾಜ್ಯವನ್ನು ಸೇರಿಸಿದರು. ಆದರೆ ಹೈದರಾಬಾದ್ ಪ್ರಾಂತ್ಯದ ರಾಜ ನಿಜಾಮ, ಒಕ್ಕೂಟಕ್ಕೆ ಸೇರಲು ಒಪ್ಪದೆ ಸ್ವತಂತ್ರ ಆಡಳಿತ ನಡೆಸುವುದಾಗಿ ಘೋಷಿಸಿಕೊಂಡಿದ್ದ. ಇದರಿಂದಾಗಿ ಹೈದರಾಬಾದ್ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸ್ವತಂತ್ರವಾಗಲಿಲ್ಲ. ನಿಜಾಮರ ನಿರ್ಧಾರ ಹೈದರಾಬಾದ್ ಪ್ರಾಂತ್ಯದ ಜನರನ್ನು ರೊಚ್ಚಿಗೆಬ್ಬಿಸಿತು. ಭಾರತದ ಒಕ್ಕೂಟಕ್ಕೆ ಸೇರಿಸಲು ಈ ಭಾಗದಲ್ಲಿ ಮತ್ತೊಂದು ಸ್ವಾತಂತ್ರ ಚಳುವಳಿ ನಡೆಯಿತು. ಅಲ್ಲಿಯೂ ಸಾಕಷ್ಟು ಜೀವಗಳು ಬಲಿಯಾದವು.

ದೇಶೀಯ ಆಳರಸ ಹೈದರಾಬಾದ್ ನಿಜಾಮನಿಂದ 1948ರ ಸೆ.17ರಂದು ವಿಮೋಚನೆ ಪಡೆದ ಕನ್ನಡದ ಪ್ರದೇಶಗಳನ್ನು ‘ಹೈದರಾಬಾದ್ ಕರ್ನಾಟಕ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ಪರಕೀಯ ಹೆಸರು ವಚನಕಲ್ಯಾಣ ನೆಲದ ಭಾವಪ್ರಜ್ಞೆಗೆ ಉಚಿತ ಎನಿಸುತ್ತಿರಲಿಲ್ಲ. ಹಾಗಾಗಿ, 2019ರ ‘ಹೈದರಾಬಾದ್ ಕರ್ನಾಟಕದ ವಿಮೋಚನಾ ದಿನ’ದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿದರು. ಆದರೆ ಅಂದು ಹೆಸರು ಬದಲಾವಣೆ ಆಯ್ತೇ ಹೊರತು ಜನರ ಸ್ಥಿತಿಗತಿಯಲ್ಲಿ ಯಾವ ಕಲ್ಯಾಣವೂ ಆಗಲಿಲ್ಲ.

ಹಿಂದುಳಿದ ‘ಹೈದರಾಬಾದ್ ಕರ್ನಾಟಕ’ದ ಹೆಸರನ್ನು ‘ಕಲ್ಯಾಣ ಕರ್ನಾಟಕ’ವೆಂದು ನಾಮಕರಣ ಮಾಡಿ ವರ್ಷಗಳೇ ಗತಿಸಿದರೂ ಜನಕಲ್ಯಾಣ, ನಿಜಕಲ್ಯಾಣ ಆಗಲಿಲ್ಲ ಎನ್ನುವ ಬಗ್ಗೆ ಜನಾಕ್ರೋಶವಿದೆ.

2019ರಲ್ಲಿ ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಿಸಲಾಯಿತು. ಆದರೆ ಅದು ಹೆಸರಿಗಷ್ಟೇ ಕಲ್ಯಾಣವಾಗಿದೆ. ಇದಕ್ಕೆ ರಾಜ್ಯ ಸರಕಾರವೇ ಪ್ರತಿ ವರ್ಷ ಪ್ರಕಟಿಸುವ ಆರ್ಥಿಕ ಸಮೀಕ್ಷೆ, ಕೇಂದ್ರ ಸರಕಾರದ ಆರೋಗ್ಯ ಸಮೀಕ್ಷೆಗಳೇ ನಿದರ್ಶನ. ರಾಜ್ಯದ ಬೆಂಗಳೂರು ವಿಭಾಗಕ್ಕೆ ಹೋಲಿಸಿದರೆ ತಲಾ ಆದಾಯ, ಮಾನವ ಅಭಿವೃದ್ಧಿ ಸೂಚ್ಯಂಕ, ಶಿಕ್ಷಣದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ಯಾವಾಗಲೂ ಕೊನೇ ಸ್ಥಾನದಲ್ಲಿರುತ್ತವೆ. ಹಿಂದುಳಿದ ಭಾಗದ ಅಭಿವೃದ್ಧಿಗಾಗಿ ಸಂವಿಧಾನದ 371ಜೆ ತಿದ್ದುಪಡಿ ಜಾರಿಗೊಳಿಸಲಾಗಿದೆ. ಆದರೆ ಇದು ಅನುಷ್ಠಾನಕ್ಕೆ ಬಂದು ಒಂದು ದಶಕ ಗತಿಸಿದರೂ ಜನರ ಜೀವನ ಸುಧಾರಿಸಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ ಎನ್ನುತ್ತಾರೆ ಆರ್ಥಿಕ ತಜ್ಞರು.

ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವರ್ಷಕ್ಕೊಮ್ಮೆ ನಡೆಯುವ ಅಧಿವೇಶನವೂ ಹೆಸರಿಗಷ್ಟೇ. ಯಾವುದೇ ಅಭಿವೃದ್ಧಿ ಇಲ್ಲದಂತಾಗಿದೆ. ರಾಜಕೀಯ ಕೆಸರೆರಚಾಟಕ್ಕೆ ಸದನ ಬಲಿಯಾಗಿ ಕೊನೇ ದಿನದಲ್ಲಿ ಕಾಟಾಚಾರಕ್ಕೆ ಎನ್ನುವಂತೆ ಉತ್ತರ ಕರ್ನಾಟಕ ಭಾಗದ ಚರ್ಚೆಯಾಗುತ್ತಿರುವ ಬಗ್ಗೆಯೂ ಜನರು ಭ್ರಮನಿರಸನಗೊಂಡಿದ್ದಾರೆ.

ಕಲ್ಯಾಣದ ಜನರ ನಿರೀಕ್ಷೆ ಸಾಕಾರಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಇದರಲ್ಲಿ ಕೈಗೊಂಡ ನಿರ್ಣಯಗಳು ಜಾರಿಯಾದರೆ ಜನರ ಆಕ್ರೋಶ ಸ್ವಲ್ಪ ಮಟ್ಟಿಗಾದರೂ ತಣಿಸಲು ಸಾಧ್ಯ. ಇಲ್ಲದಿದ್ದರೆ ಸರಕಾರದ ಮೇಲಿನ ಭರವಸೆಯೇ ಉಡುಗಿ ಹೋಗುತ್ತದೆ. ಕಲ್ಯಾಣದ ಜನರ ಬದುಕು ಬದಲಿಸಲು ಬೃಹತ್ ಕೈಗಾರಿಕೆ ಸ್ಥಾಪನೆಯಾಗಬೇಕು. ದುಡಿಯುವ ಕೈಗಳಿಗೆ ಕೆಲಸ ನೀಡಿದರೆ ನಿರುದ್ಯೋಗ ನಿವಾರಣೆಯಾಗಿ ತಲಾ ಆದಾಯವೂ ಹೆಚ್ಚಾಗುತ್ತದೆ. 5 ದಶಕಗಳಿಂದಲೂ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಸಾಕಾರಗೊಳ್ಳಬೇಕು ಎನ್ನುವ ಆಗ್ರಹ ರೈತಾಪಿ ಜನರದ್ದು.

ಕಲ್ಯಾಣದ ಪ್ರಮುಖ ಬೇಡಿಕೆಗಳು :

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ 17 ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ನಡೆದ ಎರಡು ಸಂಪುಟ ಸಭೆಗಳಲ್ಲೂ ನಿರ್ಧಾರ ಆಗಿದ್ದರೂ ನಿರೀಕ್ಷಿತ ಹುದ್ದೆ ಭರ್ತಿ ಆಗಿಲ್ಲ. ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸುವುದಾಗಿ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರ ಜಾರಿಯಾಗಬೇಕು. ಕಲ್ಯಾಣಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಗೊಳಿಸಬೇಕು. ಕಲಬುರಗಿಯ ಬಹುದಿನಗಳ ಬೇಡಿಕೆಯಾದ ಬೈಪಾಸ್ ರಸ್ತೆ ನಿರ್ಮಿಸಬೇಕಿದೆ. ಬಿಳಿಯಾನೆಯಾಗಿರುವ ತೊಗರಿ ಮಂಡಳಿಗೆ ಅನುದಾನ ನೀಡಿ ಶಕ್ತಿ ತುಂಬಬೇಕಿದೆ. ತೊಗರಿ ಬೆಳೆಗಾರರ ಹಿತ ಕಾಪಾಡಬೇಕಿದೆ. 371ಜೆ ಅಡಿ ಶಿಕ್ಷಣ, ಉದ್ಯೋಗ ಮತ್ತು ಭಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಕಲ್ಯಾಣದ ಭಾಗ ಶೈಕ್ಷಣಿವಾಗಿ ತೀರಾ ಹಿಂದುಳಿದಿದ್ದು, ಇಲ್ಲಿ ಖಾಲಿ ಇರುವ ಸುಮಾರು 20ಸಾವಿರ ಶಿಕ್ಷಕರ ಹುದ್ದೆ ಭರ್ತಿ ಆಗಬೇಕಿದೆ. ಯಾದಗಿರಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಮೂಲಸೌಕರ್ಯ ವೃದ್ಧಿಯಾಗಬೇಕು. ಬೀದರ್‌ನಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಿಸಬೇಕಿದೆ. ಕೈಗಾರಿಕೆಗಳು ಬೇಕು. ಪ್ರವಾಸೋದ್ಯಮಕ್ಕೆ ಉತ್ತೇಜನವೂ ಸಿಗಬೇಕಿದೆ.

ವಿಜಯನಗರ ಜಿಲ್ಲೆಯ ಬೇಡಿಕೆ :

ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು. ಪ್ರವಾಸೋದ್ಯಮದ ಬೆಳವಣಿಗೆಗೆ ಮೂಲಸೌಕರ್ಯ ಅಭಿವೃದ್ಧಿಯಾಗಬೇಕು, ವಿಮಾನ ನಿಲ್ದಾಣದ ಕನಸು ಸಾಕಾರವಾಗಬೇಕು. ಸಕ್ಕರೆ ಕಾರ್ಖಾನೆ ಸ್ಥಾಪಿತವಾಗಬೇಕು. ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬರಬೇಕಿದೆ.

ರಾಯಚೂರು ಜಿಲ್ಲೆಯ ಬೇಡಿಕೆ :

ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ, ವಿಮಾನ ನಿಲ್ದಾಣ ಕಾಮಗಾರಿ ತ್ವರಿತವಾಗಿ ಪ್ರಾರಂಭ, ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಅನುದಾನ, ಒಪೆಕ್ ಆಸ್ಪತ್ರೆ ಉನ್ನತೀಕರಣ, ಮಕ್ಕಳ ಅಸ್ಪತ್ರೆ ನಿರ್ಮಾಣ, ಮನೆ ಮನೆಗೆ ನೀರು ತಲುಪಿಸಲು ಟಿಎಲ್‌ಬಿಸಿ ಸಮತೋಲನ ಜಲಾಶಯ ನಿರ್ಮಾಣ ಮಾಡಬೇಕು.

ಕೊಪ್ಪಳಕ್ಕೆ ಜಿಲ್ಲೆಯ ಬೇಡಿಕೆ :

ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸರಿಯಾದ ನಿರ್ವಹಣೆ ಆಗಬೇಕು. ತುಂಗಭದ್ರಾ ಜಲಾಶಯದ ಉಳಿವಿಗೆ ಪರ್ಯಾಯವಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣ, ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗಬೇಕು.

ಬಳ್ಳಾರಿ ಜಿಲ್ಲೆಯ ಬೇಡಿಕೆ :

ಜೀನ್ಸ್ ಅಪೆರಲ್ ಪಾರ್ಕ್ ಸ್ಥಾಪನೆ ಹಾಗೂ ರೈತರ ತೀವ್ರ ವಿರೋಧದ ನಡುವೆ ಬಳ್ಳಾರಿ ತಾಲೂಕಿನ ಚಾಗನೂರು- ಸಿರವಾರ ಬಳಿ 987 ಎಕರೆ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ. ಬಳ್ಳಾರಿಯಲ್ಲಿ ಯಥೇಚ್ಛವಾಗಿ ಸಿಗುವ ಅದಿರನ್ನು ಮೂಲವಾಗಿಟ್ಟುಕೊಂಡು ಸ್ಟೀಲ್ ಹಬ್ ಮಾಡುವ ಕನಸು ಕೈಗೂಡಿಲ್ಲ. ಮೆಣಸಿನ ಕಾಯಿ, ಹಣ್ಣುಗಳ ಅಭಿವೃದ್ಧಿ ಮಂಡಳಿ ಬೇಡಿಕೆ ಸಾಕಾರವಾಗಬೇಕು.

ಅಭಿವೃದ್ಧಿಯಲ್ಲಿನ ಸವಾಲುಗಳು :

ಅನುದಾನ ಬಳಕೆಯಲ್ಲಿ ಲೋಪಗಳು, ಕಾಮಗಾರಿಗಳ ಪ್ರಗತಿಯಲ್ಲಿ ನಿಧಾನಗತಿ, ಶಾಸಕರ ನಿರಾಸಕ್ತಿ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕನಸಾಗಿಯೇ ಉಳಿದಿದೆ ಎಂದು ಕೆಲವು ಮೂಲಗಳು ಹೇಳಿವೆ.

ಅಭಿವೃದ್ಧಿಯ ವಿಭಿನ್ನ ದೃಷ್ಟಿಕೋನ :

ಒಂದು ಕಡೆ, ಸರಕಾರ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳುತ್ತದೆ. ಇನ್ನೊಂದೆಡೆ, ಅಭಿವೃದ್ಧಿಯು ತೀರಾ ನಿಧಾನವಾಗಿದೆ ಮತ್ತು ಜನರ ನಿರೀಕ್ಷ್ನೆ ಈಡೇರಿಸಿಲ್ಲ ಎಂಬ ಟೀಕೆಗಳು ಕೇಳಿಬಂದಿವೆ.

ರಾಷ್ಟ್ರೀಯ ಪಕ್ಷಗಳ ಮೇಲುಗೈ, ಇಬ್ಬರು ಮುಖ್ಯಮಂತ್ರಿಗಳನ್ನು ಕಂಡ ಕಲ್ಯಾಣ ಕರ್ನಾಟಕ, ಅಭಿವೃದ್ಧಿ ವಿಚರದಲ್ಲಿ ಮಾತ್ರ ಇನ್ನೂ ಹಾಗೇ ಉಳಿದಿದೆ. ರಸ್ತೆಗಳಿಲ್ಲದೆ, ಶಾಲೆಗಳಲ್ಲಿ ಶಿಕ್ಷಕರಿಲ್ಲದೆ, ಉದ್ಯೋಗಗಳಿಲ್ಲದೆ ಕಲ್ಯಾಣ ಕರ್ನಾಟಕ ಹೆಸರಿಗಷ್ಟೇ ಕಲ್ಯಾಣಕ್ಕೆ ಸೀಮಿತವಾಗಿದೆ.

ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗದ ಹೊರತು ಸಂಪೂರ್ಣ ರಾಜ್ಯದ ಅಭಿವೃದ್ಧಿ ಅಸಾಧ್ಯ. ಇಲ್ಲಿನ ಜನರ ತಲಾದಾಯವನ್ನು ಹೆಚ್ಚಿಸುವುದರ ಜೊತೆಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲಸೌಕರ್ಯ ಸುಧಾರಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಯಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಮ್ಮದ್ ಗೌಸ್, ವಿಜಯನಗರ

contributor

Similar News