×
Ad

ಪ್ರವಾಸಿಗರ ಕಣ್ಸೆಳೆಯುವ ಮಲಿಯಾಬಾದ್ ಕಲ್ಲಾನೆಗಳು

Update: 2025-09-29 15:04 IST

ರಾಯಚೂರು: ಕೋಟೆ ಕೊತ್ತಲಗಳ ನಾಡು ರಾಯಚೂರು. ಇಲ್ಲಿ ಅನೇಕ ಐತಿಹಾಸಿಕ ಕುರುಹುಗಳು, ಪ್ರೇಕ್ಷಣೀಯ ಸ್ಥಳಗಳಿದ್ದು, ಅನೇಕ ವರ್ಷಗಳಿಂದ ತನ್ನದೇ ಆದ ಮಹತ್ವ ಪಡೆದು ಗಮನ ಸೆಳೆಯುತ್ತಿದೆ.

ಈ ಪೈಕಿ ಮಲಿಯಾಬಾದ್ ಗ್ರಾಮದ ಕಲ್ಲಾನೆಗಳೂ ಸೇರಿವೆ. ರಾಯಚೂರು ನಗರಕ್ಕೆ ಹೊಂದಿಕೊಂಡಿರುವ ಹಳೆಯ ಮಲಿಯಾಬಾದ್ ಗ್ರಾಮವೂ ಜಿಲ್ಲೆಯ ಆಕರ್ಷಗಳಲ್ಲಿ ಒಂದಾಗಿದೆ. ದೋ ಅಬ್ (ಕೃಷ್ಣಾ ಹಾಗೂ ತುಂಗಭದ್ರಾ ಎರಡು ನದಿ ಹರಿಯುವ ಕಾರಣ ಈ ಹೆಸರು) ಎಂದು ಕರೆಯಲ್ಪಡುವ ರಾಯಚೂರು ಜಿಲ್ಲೆ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯ, ಬಹಮನಿ ಸುಲ್ತಾನರು, ಬಿಜಾಪುರದ ಆದಿಲ್ ಶಾಹಿಗಳ ಆಡಳಿತಕ್ಕೆ ಒಳಪಟ್ಟಿದ್ದು ಇತಿಹಾಸದಿಂದ ತಿಳಿಯುತ್ತದೆ.

ಜಿಲ್ಲೆಯಲ್ಲಿ ಶಾಸನಗಳು, ವೀರಗಲ್ಲುಗಳು, ಸ್ಮಾರಕಗಳು, ಕೋಟೆಗಳು, ಕಾಣಸಿಗುತ್ತದೆ. ರಾಯಚೂರು ಕೋಟೆಗಳಿಂದ ಕೂಡಿದ್ದು ಜಿಲ್ಲೆಯ ಆಕರ್ಷಣೆ. ಮುದಗಲ್ ಕೋಟೆ, ಲಿಂಗಸುಗೂರಿನ ಜಲದುರ್ಗ ಕೋಟೆ ರಾಯಚೂರು ನಗರದಲ್ಲಿಯೂ ಎರಡು ಕೋಟೆಗಳಿವೆ. ಇದನ್ನು ಹೊರಕೋಟೆ ಹಾಗೂ ಒಳಕೋಟೆ ಎನ್ನಲಾಗುತ್ತಿದ್ದು, ಎರಡು ಸುತ್ತಿನ ಕೋಟೆಗಳನ್ನು ದಕ್ಷಿಣಕ್ಕೆ ಇರುವ ಬೆಟ್ಟಕ್ಕೆ ಕಟ್ಟಲಾಗಿದೆ. ಒಳಗಿನ ಸುತ್ತು ವಿಠ್ಠಪ್ಪ ನಾಯಕ ಕಟ್ಟಿದರೆ ಎರಡನೇ ಸುತ್ತು ಇಬ್ರಾಹೀಂ ಆದಿಲ್ ಷಾ ಕ್ರಿ.ಶ. 1,549ರಲ್ಲಿ ಕಟ್ಟಿದ್ದಾನೆ.

ಹಳೆಯ ಮಲಿಯಾಬಾದ್ ಗ್ರಾಮವೂ ಜಿಲ್ಲಾ ಕೇಂದ್ರದಲ್ಲಿಯೇ ಇದ್ದು ನಗರದಿಂದ 10 ಕಿ.ಮೀ. ದೂರದಲ್ಲಿದೆ. ಈ ಗ್ರಾಮವೂ ತನ್ನ ಒಡಲಲ್ಲಿ ಎರಡು ಸುತ್ತಿನ ಕೋಟೆಗಳು, ಪುರಾತನ ದೇವಾಲಯಗಳು, ವೀರಗಲ್ಲು, ನಾಗಶಿಲ್ಪಿಗಳನ್ನು ಕಾಣಬಹುದು. ಸುತ್ತಲೂ ಬೆಟ್ಟಗುಡ್ಡಗಳಿದ್ದು ಪ್ರಾಣಿ, ಪಕ್ಷಿಗಳ ವಾಸಸ್ಥಾನವೂ ಆಗಿದೆ. ಮಲಿಯಾಬಾದ್ ಗ್ರಾಮದ ಬೆಟ್ಟದ ರಾಮೇಶ್ವರ ದೇವಾಲಯ, ಗೋಶಾಲೆ ಇದ್ದು ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಕಲ್ಲಾನೆಗಳು ಹೆಚ್ಚು ಆಕರ್ಷಣೀಯ. ಬಟಾ ಬಯಲಿನ ಹೊಲವೊಂದರಲ್ಲಿ ಬಿಳಿ ಬಣ್ಣದಲ್ಲಿ ನಿಂತಿರುವ ಇವುಗಳು ಥೇಟ್ ನೈಜತೆಯಂತೆ ಗೋಚರವಾಗಿ ನಯನ ಮನೋಹಕವಾಗಿದೆ.

ದಕ್ಷಣಾಭಿಮುಖವಾಗಿ ಕೆತ್ತಿರುವ ಮರಿಯಾನೆಗಳು ಏಕಶಿಲೆಯಲ್ಲಿ ಪ್ರತ್ಯೇಕವಾಗಿ 4 ಅಡಿ ಎತ್ತರ ಹಾಗೂ 4 ಅಡಿ ಅಗಲ ಹೊಂದಿವೆ. ಇವುಗಳ ಕೊರಳಲ್ಲಿ ಸರ, ಗಂಟೆ,ಸರಪಳಿ, ಹೂವಿನ ಹಾರಗಳು, ಸೊಂಡಿಲಲ್ಲಿ ಹೂವು, ಕಾಲುಗಳಿಗೆ ಗೆಜ್ಜೆಗಳು, ಕೊರಳಿಗೂ ಅಲಂಕಾರ ಮಾಡಲಾಗಿದೆ. ಸೂಕ್ಷ್ಮ ಕೆತ್ತನೆಗಳು, ಕುಸರಿ ಕೆಲಸಗಳು ಆನೆಗಳ ಸೌಂದರ್ಯ ಮತ್ತಷ್ಟು ಹೆಚ್ಚಿಸಿವೆ. ಇತಿಹಾಸ ತಜ್ಞರ ಪ್ರಕಾರ ವಿಷ್ಣು ದೇವಾಲಯದ ಮುಂದೆ ಎರಡು ಮೆಟ್ಟಿಲುಗಳ ಬದಿಯಲ್ಲಿ ಕಲ್ಲಾನೆ ಕೆತ್ತಲಾಗಿತ್ತು ಎಂದು ಹೇಳಲಾಗುತ್ತದೆ. ಏನೇ ಇದ್ದರೂ ಪುರಾತನ ಕಾಲದ ಕಲ್ಲಾನೆಗಳು ಇಂದಿಗೂ ರಕ್ಷಣೆ ಮಾಡಿದ್ದು ಮುಂದಿನ ಪೀಳಿಗೆಗೂ ಉಳಿಸಬೇಕಿದೆ.

ಇಲ್ಲಿ ಕಲ್ಲಾನೆ ಮಾತ್ರವಲ್ಲದೇ ಹಾಳಾದ ಕೆತ್ತನೆಗಳು, ಬಿದ್ದು ಹೋದ ದೊಡ್ಡ ದೊಡ್ಡ ಕಲ್ಲುಗಳು, ಅವಶೇಷಗಳು ಕಾಣಸಿಗುತ್ತದೆ. ಇಲ್ಲಿ ಐತಿಹಾಸಿಕ ಕುರುಹುಗಳ ಜಾಡು ಹಿಡಿದು ಸಂಶೋಧನೆ ಮಾಡಿದರೆ ಮತ್ತಷ್ಟು ಮಾಹಿತಿ ಸಂಗ್ರಹಿಸಬಹುದು. ಮಲಿಯಾಬಾದ್ ಕಲ್ಲಾನೆಗಳಿಗೂ ರಾಯಚೂರು ನಗರದಲ್ಲಿರುವ ತೀನ್ ಖಂದಿಲ್ ಬಳಿಯ ಕಲ್ಲಾನೆಗಳಿಗೂ ಅವಿನಾಭಾವ ಸಂಬಂಧವಿದೆ ಎನ್ನಲಾಗಿದೆ. ನಗರದ ಹೃದಯಭಾಗದಲ್ಲಿರುವ ತೀನ್ ಖಂದಿಲ್ ವೃತ್ತದ ಬಳಿಯ ದೊಡ್ಡದಾದ ಆನೆಯ ಜೊತೆಗೆ ಎರಡು ಪುಟ್ಟದಾದ ಮರಿಯಾನೆಗಳು ಇವೆ. ಜನ ನಿಬಿಢ ಪ್ರದೇಶದಲ್ಲಿರುವ ಕಾರಣ ಇದಕ್ಕೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಕಲ್ಲಾನೆಯ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿ ಬಿಡುಗಡೆಯಾದರೂ ಹೇಳಿಕೊಳ್ಳುವಷ್ಟು ಅಭಿವೃದ್ಧಿಯಾಗಿಲ್ಲ. ಈ ಹಿಂದೆ ನಗರಸಭೆ (ಈಗ ಮಹಾನಗರ ಪಾಲಿಕೆ)ಯ ಲಾಂಛನವಾಗಿ ಕಲ್ಲಾನೆಯನ್ನು ಬಳಸಿಕೊಳ್ಳಲಾಗಿದೆ. ಅಭಿವೃದ್ಧಿ ವಿವಾರದಲ್ಲಿ ನಿರ್ಲಕ್ಷ್ಯ ಧೊರಣೆ ಇದೆ ಎಂಬ ಆರೋಪಕ್ಕೆ ಗುರಿಯಾಗಿದೆ.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು

contributor

Similar News