ರಾಯಚೂರು | ಗಡಿ ಭಾಗದ ಕನ್ನಡ ಶಾಲೆಗಳಿಗಿಲ್ಲ ಮೂಲ ಸೌಲಭ್ಯ; ಆರೋಪ
ವಿದ್ಯಾರ್ಥಿಗಳ ಪರದಾಟ
ಸಾಂದರ್ಭಿಕ ಚಿತ್ರ PC | indianexpress
ರಾಯಚೂರು : ಜಿಲ್ಲೆಯ ಗಡಿಭಾಗದ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಹಲವು ಕನ್ನಡ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ತೆಲುಗು ಭಾಷಿಕರಿಗೆ ಕನ್ನಡಭಿಮಾನ ಮೂಡಿಸುತ್ತಿವೆ. ಆದರೆ ಈ ಭಾಗದ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳು ಎದುರಿಸುತ್ತಿದ್ದು ಕರ್ನಾಟಕ ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ತೆಲಂಗಾಣ ಆಂಧ್ರದ ಪ್ರಾಂತಗಳಾದ ಮೆದಕ್, ಹೈದರಾಬಾದ್, ನಾರಾಯಣಪೇಟೆ, ಕರ್ನೂಲ್, ಅನಂತಪುರ ಐದು ಜಿಲ್ಲೆಗಳಲ್ಲಿ ಇಂದಿಗೂ 20,000 ಮಕ್ಕಳು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಈ ಪ್ರಾಂತವನ್ನು ಗಡಿನಾಡು ಕನ್ನಡ ಪ್ರಾಂತ ಎಂದು ಕರ್ನಾಟಕ ಸರಕಾರ ಘೋಷಿಸಿಲ್ಲ, ಕಾರಣ ಇವರು ಆನ್ಲೈನ್ನಲ್ಲಿ ದಾಖಲಾತಿ ಆಗಲಿ ಇನ್ನಿತರ ಸದುಪಯೋಗ ಪಡೆಯುವ ಹಾಗಿಲ್ಲ, ಆಫ್ಲೈನ್ನಲ್ಲಿ ಇವರಿಗೆ ವಿದ್ಯಾಭ್ಯಾಸದ ಯಾವ ಸದುಪಯೋಗ ಆಗುತ್ತಿಲ್ಲ.
ಗಡಿಯಾಚೆಗೆ ಕನ್ನಡವನ್ನು ಬೆಳೆಸುತ್ತಿರುವ ಶಾಲೆಗಳನ್ನು ಕರ್ನಾಟಕ ರಾಜ್ಯಸರಕಾ ರದಿಂದ ಪ್ರೋತ್ಸಾಹಿಸುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಆದರೆ, ಗಡಿನಾಡಿನ ಶಾಲಾ ಶಿಕ್ಷಕರು ಮಾತ್ರ ಕನ್ನಡ ಮಾಧ್ಯಮ ಉಳಿಸಿ, ಬೆಳೆಸುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಗಡಿನಾಡು ಕನ್ನಡಿಗರಿಗೆ ಕರ್ನಾಟಕದಲ್ಲಿ ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯ ಸಿಗುತ್ತಿಲ್ಲ.
ಇದರಿಂದ ಬೇಸತ್ತು ಕನ್ನಡದ ಕೆಲ ಕುಟುಂಬಗಳು ಸರಕಾರದ ಸ್ಪಂದನೆಗೆ ಕಾಯುವುದು ವ್ಯರ್ಥವೆಂದು ತೆಲುಗು ಇಲ್ಲವೇ ಇಂಗ್ಲಿಷ್ ಮಾಧ್ಯಮಕ್ಕೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ.ಇದರ ಪರಿಣಾಮ ಕನ್ನಡ ಮಾಧ್ಯಮ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ.
ಕಷ್ಣಾದಲ್ಲಿರುವ ಶಾಲೆಯು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾಗಿದ್ದು, 1968ರಲ್ಲಿ ಪ್ರೌಢಶಾಲೆಗೆ ಉನ್ನತೀಕರಣ ಮಾಡಲಾಗಿದೆ. ಕನ್ನಡ ಮಾಧ್ಯಮದಲ್ಲೇ ಮಕ್ಕಳು ಓದುವುದಕ್ಕೆ ಶಿಕ್ಷಕರು ಮನವರಿಕೆ ಮಾಡಿಕೊಟ್ಟು ಭಾಷೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯ ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಗಮನಾರ್ಹ. ಆದರೆ, ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಿ, ಬೆಳೆಸಿ ಎನ್ನುವುದು ಬರೀ ಘೋಷಣೆಗೆ ಸೀಮಿತವಾಗಿದೆ ಎಂಬುದು ಸ್ಥಳೀಯರ ಅನಿಸಿಕೆ.
ಹೊರ ರಾಜ್ಯದ ಕನ್ನಡಿಗರ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ, ಆಯಾ ರಾಜ್ಯ ಸರಕಾರಗಳು ನೀಡಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಆಧಾರದ ಮೇಲೆ ಪ್ರವೇಶಾವಕಾಶ ಕಲ್ಪಿಸಬೇಕು. ಶಕ್ತಿನಗರ ಮತ್ತು ರಾಯಚೂರು ತೆರಳಲು, ತೆಲಂಗಾಣದ ಕೃಷ್ಣಾ ಗ್ರಾಮದಿಂದ ಸಾರಿಗೆ ಸೌಕರ್ಯ ಜೊತೆಗೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಒದಗಿಸಬೇಕು ಎನ್ನುವ ಬೇಡಿಕೆ ಅಲ್ಲಿನ ವಿದ್ಯಾರ್ಥಿಗಳದ್ದು. ಆದರೆ, ಕರ್ನಾಟಕ ಸರಕಾರವು ಇದುವರೆಗೂ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಅನೇಕರ ಆರೋಪ.
ರಾಯಚೂರು ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿ ಸುಮಾರು 10 ಕನ್ನಡ ಮಾಧ್ಯಮ ಶಾಲೆಗಳಿವೆ. ಕನ್ನಡ ಮಾಧ್ಯಮಕ್ಕೆ ತಮ್ಮದೇ ಆದ ಮಹತ್ವ ನೀಡುತ್ತಿದೆ. ಗದ್ವಾಲ್, ಮೆಹಬೂಬ್ ನಗರ ಹಾಗೂ ನಾರಾಯಣಪೇಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೃಷ್ಣಾ ಸೇರಿದಂತೆ ಸುತ್ತಮುತ್ತಲೂ 13 ಗ್ರಾಮಗಳಲ್ಲಿ ಲಕ್ಷಾಂತರ ಕನ್ನಡ ಭಾಷಿಕರಿದ್ದಾರೆ. ತೆಲುಗು ಭಾಷೆ ಗೊತ್ತಿದ್ದರೂ ಕನ್ನಡದಲ್ಲೇ ವ್ಯವಹರಿಸಿ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಓದಿಸುವ ಉತ್ಸಾಹವನ್ನು ಪಾಲಕರು ಹೊಂದಿದ್ದಾರೆ. ಸ್ವಾತಂತ್ರ್ಯಪೂರ್ವದಿಂದಲೂ ಆ ಗ್ರಾಮಗಳಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳು ಸ್ಥಾಪನೆಯಾಗಿವೆ.
ಕೃಷ್ಣಾ, ಇಂದುಪುರ, ಗುರ್ಜಾಲ, ತಂಗಡಗಿ, ಕುಸಮೂರ್ತಿ, ಸುಕುರ ಲಿಂಗಪಲ್ಲಿ, ಚೆಗುಂಟಿ, ಐನಾಪುರ, ಗುಡೆಬಲ್ಲೂರ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿದ್ದು, ಕೃಷ್ಣಾದಲ್ಲಿ ಏಕೈಕ ಪ್ರೌಢಶಾಲೆ ಇದೆ. 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 40ಕ್ಕೂ ಹೆಚ್ಚು ಕನ್ನಡ ಶಾಲೆಗಳ ಶಿಕ್ಷಕರಿಗೆ ತೆಲಂಗಾಣ ಸರಕಾರ ವೇತನ ನೀಡುತ್ತಿದೆ.
ಸದ್ಯಕ್ಕೆ ಪ್ರೌಢಶಾಲೆ ಹಂತ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಕಾಲೇಜು ಸೇರಿಕೊಳ್ಳುವುದಕ್ಕೆ ಪರದಾಡುವ ಸ್ಥಿತಿ ಇದೆ. ತೆಲಂಗಾಣದಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕೋ ಅಥವಾ ಕರ್ನಾಟಕದಲ್ಲಿ ಓದಬೇಕೋ ಎಂಬ ಗೊಂದಲದ ವಾತಾವರಣ ಶುರುವಾಗಿದೆ. ಈ ಕಾರಣದಿಂದಾಗಿ ಕುಮಸಗಿ, ಆಲಂಪಲ್ಲಿ ಸೇರಿ ನಾಲ್ಕು ಗ್ರಾಮಗಳಲ್ಲಿ ಕನ್ನಡ ಶಾಲೆಗಳು ಮುಚ್ಚಿವೆ.
ಬಹಿರಂಗ ಪತ್ರ :
ತೆಲಂಗಾಣದ ಕೃಷ್ಣ ಮಂಡಳದ, ಸುಮಾರು 40 ವರ್ಷಗಳಿಂದ ಗಡಿನಾಡು ಪ್ರಾಂತ್ಯದಲ್ಲಿ ಕನ್ನಡ ಉಳಿವಿಗಾಗಿ ಹೋರಾಡುತ್ತಿರುವ ಗಡಿನಾಡು ಕನ್ನಡ ಸಂಘದ ಉಪಾಧ್ಯಕ್ಷ ಅಮರ್ ದೀಕ್ಷಿತ್ ಕೃಷ್ಣ ಅವರು ತೆಲಂಗಾಣದ ಗಡಿ ಭಾಗದ ಶಾಲೆಗಳ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ತೆಲಂಗಾಣ, ಆಂಧ್ರದ ಜಿಲ್ಲೆಗಳಾದ ಮೆದಕ್, ಹೈದರಾಬಾದ್, ನಾರಾಯಣಪೇಟ್, ಕರ್ನೂಲು, ಅನಂತಪುರ್ ಜಿಲ್ಲೆಗಳಲ್ಲಿ ಇಂದಿಗೂ 20,000 ಮಕ್ಕಳು ಗಡಿನಾಡು ಪ್ರಾಂತದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದರಿಂದ ಗಡಿನಾಡು ಕನ್ನಡ ಮಕ್ಕಳ ಸಮಸ್ಯೆಗಳ ಬಗ್ಗೆ ಕ್ರಮವಹಿಸದ ಕರ್ನಾಟಕ ಸರಕಾರ ಮಲತಾಯಿ ಧೋರಣೆ ಖಂಡನೀಯ ಎಂದು ಕಿಡಿಕಾರಿದ್ದಾರೆ.